ಹುಬ್ಬಳ್ಳಿ:ಚಿತ್ರನಟಿ ಶನಾಯಾ ತನ್ನ ಗೆಳೆಯರೊಂದಿಗೆ ಸೇರಿಕೊಂಡು ತನ್ನ ಸಹೋದರನ ರುಂಡ-ಮುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿಸಿದ್ದಾರೆ ಎಂಬ ಪ್ರಕರಣದಲ್ಲಿ ಈಗಾಗಲೇ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೇಶ್ವಾಪುರ ಮತ್ತು ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಸುಟ್ಟಸ್ಥಿತಿಯಲ್ಲಿ ಪತ್ತೆಯಾದ ರುಂಡ-ಮುಂಡಗಳು ಕೊಲೆಯಾದ ರಾಕೇಶನದ್ದು ಹೌದೋ, ಅಲ್ಲವೋ ಎಂಬುವುದನ್ನು ತಿಳಿಯಲು ಡಿಎನ್ಎ ವರದಿಗಾಗಿ ಪೊಲೀಸರು ಇದೀಗ ಕಾಯುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ:
ಶನಾಯಾ ಮತ್ತು ನಿಯಾಜ್ ಪರಸ್ಪರ ಪ್ರೀತಿಸುತ್ತಿದ್ದು ಇದಕ್ಕೆ ಶನಾಯಾ ಸಹೋದರ ರಾಕೇಶ ವಿರೋಧ ವ್ಯಕ್ತಪಡಿಸಿದ್ದನಂತೆ. ಇದರಿಂದ ಕುಪಿತಗೊಂಡ ಆರೋಪಿಗಳು ಏಪ್ರಿಲ್ 9ರಂದು ರಾಕೇಶನನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿ ತಾರಿಹಾಳ ಸೇತುವೆ ಬಳಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಶಿಕ್ಷಾ ನಗರದ ಬಾತ್ ರೂಮ್ನಲ್ಲಿಟ್ಟಿದ್ದರು. ಇದಾದ ಬಳಿಕ ಅಲ್ತಾಫ್ ಮತ್ತು ನಿಯಾಜ್ ಶವದ ರುಂಡ-ಮುಂಡ ಬೇರ್ಪಡಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಶವವನ್ನು ಸುಟ್ಟು ಹಾಕಿದ್ದರು.