ಹಾಸನ:ಯುವತಿ ಜೊತೆ ಅಸಭ್ಯ ವರ್ತನೆ ಮಾಡಿದ ಹಿನ್ನೆಲೆಯಲ್ಲಿ ಯುವಕನೋರ್ವನ ಬಟ್ಟೆ ಬಿಚ್ಚಿಸಿ ನೈತಿಕ ಪೊಲೀಸ್ಗಿರಿ ನಡೆಸಿ ವಿಕೃತಿ ಮೆರೆದ ಘಟನೆಯೊಂದು ಹಾಸನದ ಹೃದಯ ಭಾಗದಲ್ಲಿ ನಡೆದಿದೆ. ಕುಮಾರ್ (27) ಸಾರ್ವಜನಿಕರಿಂದ ವಿವಸ್ತ್ರನಾಗುವುದರ ಜೊತೆಗೆ ಸಖತ್ ಗೂಸಾ ತಿಂದ ಆರೋಪಿ.
ನಿನ್ನೆ ಸಂಜೆ ನಗರದ ಮಹಾರಾಜ ಪಾರ್ಕ್ನಲ್ಲಿ ಯುವತಿಯೊಬ್ಬಳ ಕೈ ಹಿಡಿದು ಎಳೆದಾಡಿದ ಆರೋಪ ಹಿನ್ನೆಲೆಯಲ್ಲಿ ಸ್ಥಳೀಯರು ಆತನನ್ನು ಹಿಡಿದು ನಡುರಸ್ತೆಯಲ್ಲಿಯೇ ಥಳಿಸಿದ್ದಾರೆ.
ಏನಿದು ಪ್ರಕರಣ:
ವಿದ್ಯಾರ್ಥಿನಿಯೊಬ್ಬಳು ಕಾಲೇಜು ಮುಗಿದ ಬಳಿಕ ವಿಹಾರಕ್ಕೆಂದು ನಗರದ ಮಹಾರಾಜ ಪಾರ್ಕ್ಗೆ ಬಂದಿದ್ದು, ಈ ಸಮಯದಲ್ಲಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕ ಯುವಕನೋರ್ವ ಕುಡಿದ ಅಮಲಿನಲ್ಲಿ ಪಾರ್ಕ್ನಲ್ಲಿ ವಿಹರಿಸುತ್ತಿದ್ದ ವಿದ್ಯಾರ್ಥಿನಿಯ ಕೈ ಹಿಡಿದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ವೇಳೆ ಸ್ಥಳೀಯರೊಬ್ಬರು ಈತನ ಕೃತ್ಯವನ್ನು ವಿರೋಧಿಸಿದಾಗ ಈಕೆ ನಿನ್ನ ತಂಗಿಯೇ ಅಥವಾ ನಿನ್ನ ಸಂಬಂಧಿಯೇ ? ಎಂದು ಪ್ರಶ್ನಿಸಿದಾಗ ಕುಪಿತಗೊಂಡ ಸ್ಥಳೀಯರೊಬ್ಬರು ಆತನ ಕೆನ್ನೆಗೆ ಎರಡು ಬಾರಿಸಿ ಸುತ್ತಮುತ್ತಲ ಮಂದಿಯನ್ನು ಕರೆದು ಚೆನ್ನಾಗಿ ಥಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕೆಲ ಪುಂಡ ಯುವಕರು ಇದನ್ನೇ ಬಂಡವಾಳ ಮಾಡಿಕೊಂಡು ಪ್ರಚಾರಗಿಟ್ಟಿಸಿಕೊಳ್ಳಲು ಆರೋಪಿ ಯುವಕನನ್ನು ಬಲವಂತವಾಗಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಕರೆ ತಂದು ಆತನ ಬಟ್ಟೆ ಬಿಚ್ಚಿಸಿದಷ್ಟೆಯಲ್ಲದೇ ನೈತಿಕ ಪೊಲೀಸ್ಗಿರಿ ಮೂಲಕ ವಿಕೃತಿ ಮೆರೆಯುತ್ತಿದ್ದರೂ, ಸ್ಥಳೀಯರು ಮೂಕ ವಿಸ್ಮಿತರಾಗಿ ನೋಡುತ್ತಿದ್ದರು.