ಕರ್ನಾಟಕ

karnataka

By

Published : Jan 17, 2023, 9:49 PM IST

ETV Bharat / crime

ಚಾಮರಾಜನರ.. ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರ ಬಂಧನ: ಅಪಘಾತದಲ್ಲಿ ನಾಲ್ವರಿಗೆ ತೀವ್ರ ಗಾಯ, ಇಬ್ಬರು ಆತ್ಮಹತ್ಯೆ

ಹನೂರು ತಾಲೂಕು ಪಿಜಿ‌ ಪಾಳ್ಯ ಸಮೀಪ ಹುಲಿ ಉಗುರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ - ಚಾಮರಾಜನಗರ ತಾಲೂಕಿನ ಬೇಡರಪುರ ಸಮೀಪ‌ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ - ಸಾಲಬಾಧೆಯಿಂದ ಬೇಸತ್ತ ವ್ಯಕ್ತಿಯೊಬ್ಬ ಗುಂಡ್ಲುಪೇಟೆ ತಾಲೂಕಿನ ಶಿವಪುರ ಸಮೀಪ ಕಲ್ಲುಕಟ್ಟೆ ಡ್ಯಾಂಗೆ ಹಾರಿ ಆತ್ಮಹತ್ಯೆ - ಚಿಕ್ಕಲ್ಲೂರಲ್ಲಿ ದೇವಾಲಯದ ಹುಂಡಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ನಡೆದಿದೆ.

Two arrested for carrying tiger nails
ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರ ಬಂಧನ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆತ್ಮಹತ್ಯೆ ಶರಣಾಗಿದ್ದರೆ, ಅಪಘಾತದಲ್ಲಿ ಪರಿಣಾಮ ನಾಲ್ವರು ತೀವ್ರ ಗಾಯಗೊಂಡಿದ್ದಾರೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಲ್ಲಿ ದೇವಾಲಯದ ಹುಂಡಿ ಕಿಡಿಗೇಡಿಗಳಿಂದ ಬೆಂಕಿಗಾಹುತಿಯಾಗಿದ್ದು, ಹುಲಿ ಉಗುರುಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನೂರು ತಾಲೂಕಿನ ಪಿಜಿ‌ ಪಾಳ್ಯ ಸಮೀಪ ಪೊಲೀಸರು ಬಂಧಿಸಿದ್ದಾರೆ.

ಹುಲಿ ಉಗುರು ಸಾಗಣೆ ಇಬ್ಬರ ಬಂಧನ: ಹುಲಿ ಉಗುರುಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಹನೂರು ತಾಲೂಕಿನ ಪಿ.ಜಿ‌.ಪಾಳ್ಯ ಸಮೀಪ ನಡೆದಿದೆ. ಹನೂರು ತಾಲೂಕು ಗೋಪಾಲ(35) ಹಾಗೂ ರಾಯಚೂರು ಮೂಲದ ಹನುಮೇಶ(29) ಬಂಧಿತ ಆರೋಪಿಗಳು‌. ಅಕ್ರಮವಾಗಿ ಹುಲಿ ಉಗುರು ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಅರಿತ ಕೊಳ್ಳೇಗಾಲ ಅರಣ್ಯಸಂಚಾರಿ ದಳದ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 40 ಹುಲಿ ಉಗುರು, 2 ಹಲ್ಲು , 1 ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರೈಲಿಗೆ ತಲೆಕೊಟ್ಟ ಯುವಕ: ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರ ಸಮೀಪ‌ ನಡೆದಿದೆ. ನಂಜನಗೂಡು ತಾಲೂಕಿನ ದಾಸನೂರು ಗ್ರಾಮದ ರವಿ ಎಂಬಾತ ಮೃತ ದುರ್ದೈವಿ. ರೈಲು‌ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ ಏಕಾಏಕಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಬೈಕ್ ಮೂಲಕ ಮೃತನ ಗುರುತು ಪತ್ತೆಯಾಗಿದೆ.

ಸಾಲಬಾಧೆಗೆ ಡ್ಯಾಂಗೆ ಹಾರಿ ಆತ್ಮಹತ್ಯೆ: ಸಾಲಬಾಧೆಯಿಂದ ಬೇಸತ್ತ ವ್ಯಕ್ತಿಯೊಬ್ಬ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಸಮೀಪ ಕಲ್ಲುಕಟ್ಟೆ ಜಲಾಶಯದಲ್ಲಿ ಮಂಗಳವಾರ ನಡೆದಿದೆ.ಗುಂಡ್ಲುಪೇಟೆ ತಾಲೂಕಿನ ವಡ್ಡನಹೊಸಹಳ್ಳಿ ಗ್ರಾಮದ ಸಿದ್ದರಾಜು(42) ಮೃತ ದುರ್ದೈವಿ. ಮೃತ ಸಿದ್ದಾರಾಜು ಪ್ಲಾವುಡ್​ ಅಂಗಡಿ ಇಟ್ಟುಕೊಂಡಿದ್ದ, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಸಾಲಗಾರರ ಕಿರುಕುಳ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.ಅಗ್ನಿ ಶಾಮದ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವವನ್ನು ಮೇಲೆತ್ತಿದ್ದಾರೆ. ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರುಗಳ ನಡುವೆ ಡಿಕ್ಕಿ: ಕಾರು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ‌ ಮಾದಾಪುರ ಸಮೀಪ ಮಂಗಳವಾರ ನಡೆದಿದೆ. ಸಂತೇಮರಹಳ್ಳಿ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಚಾಮರಾಜನಗರದಿಂದ ತೆರಳುತ್ತಿದ್ದ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಚಾಲಕರು ಸೇರಿದಂತೆ ಒಟ್ಟು ನಾಲ್ವರಿಗೆ ಗಾಯಗಳಾಗಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆ ರವಾನಿಸಲಾಗಿದೆ. ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


ದೇವಾಲಯದ ಹುಂಡಿಗೆ ಬೆಂಕಿ: ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಲ್ಲಿ ದೇವಾಲಯದ ಹುಂಡಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ನಡೆದಿದೆ.ಸಿದ್ದಪ್ಪಾಜಿ ಹಾಗೂ ಮಂಟೇಸ್ವಾಮಿ ದೇವಸ್ಥಾನದ ಅವರಣದಲ್ಲಿರುವ ಆಂಜನೇಯನ ಗುಡಿ ಮುಂಭಾಗದ ಹುಂಡಿ‌ ಒಳಕ್ಕೆ ಕರ್ಪೂರ ಹಚ್ಚಿಟ್ಟು ವಿಕೃತಿ ಮೆರೆದಿದ್ದಾರೆ. ಅರ್ಚಕರ ನಡುವೆ ಗಲಾಟೆ ನಡೆದ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಘಟನೆ ಜರುಗಿದ್ದು ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದು, ಬುಧವಾರ ದೇವಾಲಯದ ಹುಂಡಿಗಳ ಎಣಿಕೆ ಕಾರ್ಯ ನಡೆಯಬೇಕಿತ್ತು ಅಷ್ಟರಲ್ಲಿ ಕಿಡಿಗೇಡಿಗಳು ಹುಂಡಿಗೆ ಬೆಂಕಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ಲಾರಿ ಬೊಲೆರೋ ಅಪಘಾತ: ಸ್ಥಳದಲ್ಲಿ ಇಬ್ಬರ ಸಾವು

ABOUT THE AUTHOR

...view details