ಹಾಸನ: ನಗರದಲ್ಲಿ ಕೊಲೆ ಪ್ರಕರಣಗಳು ಮತ್ತು ಕಳ್ಳತನ ಪ್ರಕರಣಗಳು ಹೊಸತೇನಲ್ಲ. ಆದರೆ ಬುಧವಾರ ರಾತ್ರಿ ನಡೆದ ಕಳ್ಳತನ ಪ್ರಕರಣ ಪೊಲೀಸ್ ಇಲಾಖೆ ಮಾತ್ರವಲ್ಲದೆ ಇಡೀ ಹಾಸನ ನಗರವನ್ನು ಬೆಚ್ಚಿ ಬೀಳಿಸಿದೆ.
ಮದುವೆ ಸಂಭ್ರಮದಲ್ಲಿದ್ದವರಿಗೆ ಬಿಗ್ ಶಾಕ್; ಮನೆ ಬೀಗ ಒಡೆದು ಕೆಜಿಗಟ್ಟಲೆ ಚಿನ್ನ, ಕೋಟಿ ಕೋಟಿ ನಗದು ಕಳ್ಳತನ! - ಹಾಸನ ಜಿಲ್ಲಾ ಸುದ್ದಿ
ಮದುವೆಯ ಸಂಭ್ರಮದಲ್ಲಿದ್ದ ಮನೆಯ ಬೀಗ ಒಡೆದು ಕೆಜಿಗಟ್ಟಲೆ ಚಿನ್ನ, ಕೋಟಿ ಕೋಟಿ ನಗದು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
![ಮದುವೆ ಸಂಭ್ರಮದಲ್ಲಿದ್ದವರಿಗೆ ಬಿಗ್ ಶಾಕ್; ಮನೆ ಬೀಗ ಒಡೆದು ಕೆಜಿಗಟ್ಟಲೆ ಚಿನ್ನ, ಕೋಟಿ ಕೋಟಿ ನಗದು ಕಳ್ಳತನ! Burglary of home, kilos of gold and crores of cash stolen in hassan](https://etvbharatimages.akamaized.net/etvbharat/prod-images/768-512-13014729-thumbnail-3x2-hsncrime.jpg)
ಹೌದು, ಒಂದು ಸಣ್ಣ ಸುಳಿವನ್ನೂ ನೀಡದ ಕಳ್ಳರು ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಹಾಸನ ಹೊರವಲಯದ ರಿಂಗ್ ರೋಡ್ ಸಮೀಪದ ಗ್ರಾನೈಟ್ ಉದ್ಯಮಿ ರಘು ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಏನಿದು ಪ್ರಕರಣ?
ಹಾಸನದ ರಿಂಗ್ ರಸ್ತೆಯಲ್ಲಿರುವ ಉದ್ಯಮಿ ರಘು ಎಂಬುವರ ಮನೆಯಲ್ಲಿ ಅಕ್ಟೋಬರ್ 1 ಮತ್ತು 2 ರಂದು, ಮದುವೆ ಸಮಾರಂಭ ನಡೆಯಲಿದೆ. ಇದಕ್ಕೆಂದು ಬ್ಯಾಂಕಿನಲ್ಲಿ ಇಟ್ಟಿದ್ದ ಒಡವೆಗಳನ್ನು ಬಿಡಿಸಿಕೊಂಡು ಮನೆಗೆ ತಂದಿದ್ದರು. ಮದುವೆ ಕಾರ್ಯಕ್ಕೆ ಕುಟುಂಬಸ್ಥರು ಓಡಾಡುತ್ತಿದ್ದರು. ಜೊತೆಗೆ ಗ್ರಾನೈಟ್ ಉದ್ಯಮಿಯಾಗಿರುವ ರಘು ಅವರು ತಮ್ಮ ಉದ್ದಿಮೆಯಲ್ಲಿ ಬಂದಂತ ಹಣವನ್ನು ಕೂಡ ಮದುವೆ ಖರ್ಚಿಗೆಂದು ಮನೆಯಲ್ಲಿ ತಂದಿಟ್ಟಿದ್ದರು. ಆದರೆ ನಿನ್ನೆ ರಾತ್ರಿ ಮನೆಯ ಮುಂಭಾಗ ಮತ್ತು ಹಿಂಭಾಗದ ಬಾಗಿಲನ್ನು ಕಬ್ಬಿಣದ ಹಾರೆಯಿಂದ ಮೀಟಿ ಮನೆಯಲ್ಲಿದ್ದ ಸುಮಾರು 2 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ.
ಪರಿಚಯಸ್ಥರಿಂದಲೇ ಕೃತ್ಯದ ಶಂಕೆ!
ಮೇಲ್ನೋಟಕ್ಕೆ ಚಿನ್ನಾಭರಣ ಬಿಡಿಸಿಕೊಂಡು ಬಂದಿರುವುದು ಹಾಗೂ ಉದ್ದಿಮೆಯಿಂದ ಬಂದ ಲಾಭದ ಹಣವನ್ನು ಮನೆಯಲ್ಲಿ ಇಟ್ಟಿರುವುದನ್ನು ಕೆಲವರು ಗಮನಿಸಿರಬಹುದು. ಮನೆಯಲ್ಲಿ ಹಣ ಮತ್ತು ಒಡವೆ ಇಟ್ಟಿರುವ ವಿಚಾರ ತಿಳಿದು ಪರಿಚಯಸ್ಥರೋ ಅಥವಾ ಕುಟುಂಬದವರಿಗೆ ವಿಚಾರ ಗೊತ್ತಿರುವವರೇ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈಗಾಗಲೇ ಹಾಸನದ ಎಸ್ಪಿ ಆರ್. ಶ್ರೀನಿವಾಸಗೌಡ ನೇತೃತ್ವದಲ್ಲಿ 4 ವಿಶೇಷ ತಂಡಗಳನ್ನು ರಚನೆ ಮಾಡಿ ಖದೀಮರ ಹೆಡೆಮುರಿಕಟ್ಟಲು ಸಜ್ಜಾಗಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಆಗಮಿಸಿ ಕೆಲವು ಮಾಹಿತಿಗಳನ್ನು ಕಲೆ ಹಾಕಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಐಜಿಪಿ ಪ್ರವೀಣ್ ಮಧುಕರ್ ವ್ಯಕ್ತಪಡಿಸುತ್ತಾರೆ.
ಹಾಸನ ಜಿಲ್ಲೆಯಲ್ಲಿ ಕೇವಲ ಕೊಲೆ ಪ್ರಕರಣಗಳು ಕುಡುಕರ ಹಾವಳಿಗಳು ಹಾಗೂ ಪುಡಿ ರೌಡಿಗಳ ಅಟ್ಟಹಾಸ ಮಾತ್ರವಲ್ಲದೆ ಈಗ ಸಂಕಷ್ಟದ ಸಮಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಪೊಲೀಸರ ನಿದ್ದೆಗೆಡಿಸಿದೆ.