ಕರ್ನಾಟಕ

karnataka

By

Published : Mar 23, 2019, 7:55 PM IST

ETV Bharat / city

ರಾಜ್ಯದಲ್ಲಿ ಮೈತ್ರಿಯಿಂದ ಕಾಂಗ್ರೆಸ್​ಗೆ ಸಾಕಷ್ಟು ನಷ್ಟ : ಮಾಜಿ ಶಾಸಕ ಕೆ.ಎನ್. ರಾಜಣ್ಣ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಂದು ರೀತಿ ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಹಾಕಿದಂತೆ, ದೊಡ್ಡಗೌಡರಾದ ದೇವೇಗೌಡರು ಸಣ್ಣಗೌಡರಾಗಿರುವ ಮುದ್ದ ಹನುಮೇಗೌಡರನ್ನು ತಿನ್ನಲು ಬರುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಎನ್ ರಾಜಣ್ಣ ಟೀಕಿಸಿದ್ದಾರೆ.

ಕೆ.ಎನ್ ರಾಜಣ್ಣ

ತುಮಕೂರು: ದೇಶದಲ್ಲಿ ಕೋಮುವಾದಿಗಳನ್ನು ದೂರ ಇಡಬೇಕು ಮತ್ತು ಜಾತ್ಯಾತೀತ ವಾದಿಗಳು ಒಗ್ಗೂಡಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಚುನಾವಣಾ ಮೈತ್ರಿ ಮಾಡಿಕೊಂಡಿದೆ. ಆದರೆ, ಈ ಮೈತ್ರಿಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ನಷ್ಟ ಆಗುತ್ತಿದೆ. ಇದು ಲೋಕಸಭಾ ಚುನಾವಣೆ ನಂತರ ಬೆಳಕಿಗೆ ಬರಲಿದೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.ತುಮಕೂರು ತಾಲೂಕು ಹೆಬ್ಬೂರು ಗ್ರಾಮದ ಸಂಸದ ಮುದ್ದಹನುಮೇಗೌಡ ಅವರ ತೋಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.ರಾಜ್ಯದಲ್ಲಿ ಮೈತ್ರಿ ಸರ್ಕಾರ ಮಾಡಿರುವುದು ಸರಿಯಲ್ಲ. ರಾಜ್ಯದ ಹೆಚ್ಚಿನ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದವರು ತುಮಕೂರು ಲೋಕಸಭೆ ಕ್ಷೇತ್ರದ ಸಂಸದ ಮುದ್ದಹನುಮೇಗೌಡ. ಆದರೆ ಎಲ್ಲಾ ಹಾಲಿ ಕಾಂಗ್ರೆಸ್ ಸಂಸದರಿಗೆ ಟಿಕೆಟ್ ಕೊಟ್ಟು ಮುದ್ದ ಹನುಮೇಗೌಡರಿಗೆ ನಿರಾಕರಿಸಿರುವುದು ಸರಿಯಲ್ಲ ಎಂದು ಈಗಾಗಲೇ ಕಾಂಗ್ರೆಸ್ ಮುಖಂಡರಿಗೆ ಮನವರಿಕೆ ಆಗಿದೆ. ಇದನ್ನು ಕಾಂಗ್ರೆಸ್ ಪಕ್ಷ ಹೈಕಮಾಂಡ್​ಗೆ ಸರಿಯಾಗಿ ಮನವರಿಕೆ ಮಾಡಿಕೊಡದೇ ಇರುವುದರಿಂದ ಈ ರೀತಿಯಾದ ಒಂದು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರಿಗೆ ಮೊಮ್ಮಕ್ಕಳ ಕಾಟ ಆಗಿದೆ. ಹೀಗಾಗಿ, ಅವರು ತುಮಕೂರು ಲೋಕಸಭಾ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದಾರೆ, ಇಬ್ಬರು ಜೆಡಿಎಸ್ ಶಾಸಕರಿದ್ದಾರೆ. ಹೀಗಿದ್ದರೂ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಂದು ರೀತಿ ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಹಾಕಿದಂತೆ, ದೊಡ್ಡಗೌಡರಾದ ದೇವೇಗೌಡರು ಸಣ್ಣಗೌಡರಾಗಿರುವ ಮುದ್ದ ಹನುಮೇಗೌಡರನ್ನು ತಿನ್ನಲು ಬರುತ್ತಿದ್ದಾರೆ ಎಂದು ವ್ಯಾಖ್ಯಾನಿಸಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿನಿಂದಲೂ ಈ ಮೈತ್ರಿ ಬೇಡ ಎಂದು ಪ್ರತಿಪಾದನೆ ಮಾಡಿಕೊಂಡು ಬಂದಿದ್ದರು. ಅಲ್ಲದೆ ಸಂಸದ ಮುದ್ದಹನುಮೇಗೌಡರ ಪರವಾಗಿಯೇ ಇದ್ರು. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಏನಿದ್ದರೂ ಲೋಕಸಭೆ ಚುನಾವಣೆವರೆಗೂ ಮಾತ್ರ ಈ ಬಗ್ಗೆ ಹೈಕಮಾಂಡ್ ಕೂಡ ಚಿಂತನೆ ನಡೆಸಲಿದೆ ಎಂದು ಹೇಳಿದರು.

ABOUT THE AUTHOR

...view details