ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಅಪವಿತ್ರ ಮೈತ್ರಿ ಸರ್ಕಾರ, 10 ತಿಂಗಳಾದರೂ ಹೊಂದಾಣಿಕೆ ಇಲ್ಲ: ಬಿ.ಸೋಮಶೇಖರ್​​

ದೇವೇಗೌಡರ ಮಗ ಮುಖ್ಯಮಂತ್ರಿ, ಮತ್ತೊಬ್ಬ ಮಗ ಸಚಿವ. ಇಬ್ಬರು ಮೊಮ್ಮಕ್ಕಳು ಸಹ ಲೋಕಸಭೆಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ನಿಂತಿದ್ದಾರೆ. ಇಂತಹ ಕುಟುಂಬ ರಾಜಕಾರಣವನ್ನು ಎಲ್ಲಿಯೂ ಕಂಡಿಲ್ಲ. ಇದು ವಿಪರ್ಯಾಸದ ಸಂಗತಿ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ. ಸೋಮಶೇಖರ್ ಜೆಡಿಎಸ್​ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ್ದಾರೆ.

By

Published : Apr 8, 2019, 4:27 PM IST

ಬಿ. ಸೋಮಶೇಖರ್

ತುಮಕೂರು: ಕಾಂಗ್ರೆಸ್-ಜೆಡಿಎಸ್​ ಮೈತ್ರಿಯಿಂದ ರಾಜ್ಯದಲ್ಲಿ ಅಪವಿತ್ರ ಮೈತ್ರಿ ಸರ್ಕಾರ ರಚನೆಯಾಗಿದ್ದು, 8ರಿಂದ 10 ತಿಂಗಳಾದರೂ ಅವರ ನಡುವೆ ಹೊಂದಾಣಿಕೆ ಕಂಡುಬರುತ್ತಿಲ್ಲ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ. ಸೋಮಶೇಖರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮೋದಿಯವರು ಐದು ವರ್ಷದ ಆಡಳಿತದಲ್ಲಿ ಭ್ರಷ್ಟ ರಾಜಕಾರಣ ಮಾಡುತ್ತಿರುವ ರಾಜಕೀಯ ಪಕ್ಷ ಹಾಗೂ ಮುಖಂಡರ ಬಣ್ಣ ಬಯಲು ಮಾಡುತ್ತಿದ್ದಾರೆ. ಹೀಗಾಗಿ ಅದರಿಂದ ತಪ್ಪಿಸಿಕೊಳ್ಳಲು ಮೋದಿ ಸರ್ಕಾರದ ವಿರುದ್ಧ ಎಲ್ಲಾ ಪಕ್ಷಗಳು ಒಟ್ಟುಗೂಡಿ, ಬಿಜೆಪಿಯನ್ನು ಸೋಲಿಸುವ ಮೂಲಕ ಮೋದಿಯನ್ನು ಸೋಲಿಸುವ ಪ್ರಯತ್ನ ಮಾಡುತ್ತಿವೆ. ಮಾಜಿ ಪ್ರಧಾನಮಂತ್ರಿ ದೇವೇಗೌಡರ ಮಗ ರೇವಣ್ಣ, ಪಿಡಬ್ಲ್ಯೂಡಿನಲ್ಲಿ ಅನೇಕ ಕೆಲಸಗಳು ಆಗದೆ ಇದ್ದರೂ ಸಾವಿರದ ಮುನ್ನೂರ ಐವತ್ತು ಕೋಟಿ ಬಿಲ್ ಮಾಡಿದ್ದಾರೆ. ದೇವೇಗೌಡ ಅವರ ಕುಟುಂಬದಿಂದ ಭ್ರಷ್ಟಾಚಾರ ಆರಂಭವಾಗಿ ಕುಟುಂಬ ರಾಜಕಾರಣ, ಜಾತಿ ರಾಜಕಾರಣ ಪ್ರಾರಂಭವಾಯಿತು ಎಂದು ದೂರಿದರು.

ಬಿ. ಸೋಮಶೇಖರ್

ಇನ್ನು ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಮೀಸಲಾತಿಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ. ರಾಜಕೀಯದ ದುರಾಸೆಯಿಂದ ಅವರ ಜಾತಿಯವರೇ ಆದ ಮುದ್ದಹನುಮೇಗೌಡ, ವೈ.ಕೆ.ರಾಮಯ್ಯ ಅವರನ್ನು ರಾಜಕೀಯದಿಂದಲೇ ಮುಕ್ತಿ ಪಡೆಯುವಂತೆ ಮಾಡಿದ್ದಾರೆ ಎಂದು ಜೆಡಿಎಸ್ ಪಕ್ಷದ ವಿರುದ್ಧ ಆರೋಪಿಸಿದರು.

ದೇವೇಗೌಡರ ಮಗ ಮುಖ್ಯಮಂತ್ರಿ, ಮತ್ತೊಬ್ಬ ಮಗ ಸಚಿವ. ದೇವೇಗೌಡರು ಲೋಕಸಭೆಯ ಅಭ್ಯರ್ಥಿ. ಇವರ ಜೊತೆಗೆ ಇಬ್ಬರು ಮೊಮ್ಮಕ್ಕಳು ಸಹ ಲೋಕಸಭೆಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ನಿಂತಿದ್ದಾರೆ. ಇಂತಹ ಕುಟುಂಬ ರಾಜಕಾರಣವನ್ನು ಎಲ್ಲಿಯೂ ಕಂಡಿಲ್ಲ. ಇದು ವಿಪರ್ಯಾಸದ ಸಂಗತಿ. ಹಾಗಾಗಿ ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ ಎಂದರು.

ಹೇಮಾವತಿ ನೀರಿನ ವಿಷಯದಲ್ಲಿ ತುಮಕೂರಿಗೆ ಅನ್ಯಾಯವಾಗಿದೆ ಎಂದರೆ ಅದಕ್ಕೆ ದೇವೇಗೌಡ ಅವರ ಕುಟುಂಬವೇ ಕಾರಣ. ಇನ್ನು ರೈತರ ಪರ ಇದ್ದೇವೆ ಎಂದು ಹೇಳುವ ಈ ಕುಟುಂಬವು ರೈತರಿಗೆ ಅನ್ಯಾಯವನ್ನು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

BJP

ABOUT THE AUTHOR

...view details