ಕರ್ನಾಟಕ

karnataka

ಮಲೆನಾಡ ಹೆಬ್ಬಾಗಿಲಲ್ಲಿ ಮಹಾತ್ಮನ ಹೆಜ್ಜೆಯ ಗುರುತುಗಳು..

By

Published : Oct 2, 2021, 7:06 PM IST

ಸ್ವಾತಂತ್ರ್ಯ ಚಳವಳಿಯಲ್ಲಿ ದೇಶದ ಜನರನ್ನು ಒಗ್ಗೂಡಿಸುವ ಸಂದರ್ಭದಲ್ಲಿ ಕರ್ನಾಟಕಕ್ಕೂ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವರು, ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿದ್ದರು. ಇಂದಿಗೂ ಸಹ ಅವರು ನೆಟ್ಟ ತೆಂಗಿನ ಮರಗಳು ಮತ್ತು ಸಭೆ ನಡೆಸಿದ ಸ್ಥಳ, ವಾಸ್ತವ್ಯ ಹೂಡಿದ್ದ ವಸತಿ ಗೃಹವನ್ನು ನಾವು ಕಾಣಬಹುದು..

mahatma-gandhi-visited-shivamogga-city
ಮಹಾತ್ಮ ಗಾಂಧೀಜಿ

ಶಿವಮೊಗ್ಗ :ಮಹಾತ್ಮ ಗಾಂಧೀಜಿಗೂ, ಶಿವಮೊಗ್ಗ ಜಿಲ್ಲೆಗೂ ನಂಟಿದೆ. ಗಾಂಧೀಜಿ ಅವರು ದೇಶಾದ್ಯಂತ ಸಂಚರಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ನಾಡಿನ ಜನರನ್ನು ಒಗ್ಗೂಡಿಸುವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಪ್ರತಿ ಜಿಲ್ಲೆಯಲ್ಲಿಯೂ ತಮ್ಮ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅಂತೆಯೇ ಗಾಂಧೀಜಿಯವರು ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಹ ಒಂದು ವಾರ ಕಾಲ ನೆಲೆಸಿದ್ದರು.

ಶಿವಮೊಗ್ಗ ನಗರದಲ್ಲಿ ಗಾಂಧೀಜಿಯವರ ನೆನಪಿನ ಹಲವು ಹೆಜ್ಜೆ ಗುರುತು

ಗಾಂಧಿ ಪಾರ್ಕ್
ಗಾಂಧಿ ಪಾರ್ಕ್

ಗಾಂಧಿ ಪಾರ್ಕ್ :ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್, ಗಾಂಧೀಜಿಯವರು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜನತೆಯನ್ನ ಒಗ್ಗೂಡಿಸಿದ ಸ್ಥಳ. ಆದ್ದರಿಂದ ಗಾಂಧೀಜಿ ಅವರ ನೆನಪಿಗಾಗಿ ಈ ಉದ್ಯಾನವನನ್ನು ನಿರ್ಮಿಸಲಾಗಿದೆ. ಅಲ್ಲದೆ ಗಾಂಧಿ ಪಾರ್ಕ್​ ಎಂದು ಹೆಸರಿಟ್ಟು ಪ್ರತಿಮೆಯನ್ನೂ ಸಹ ಸ್ಥಾಪಿಸಲಾಗಿದೆ.

ಗಾಂಧಿ ಬಜಾರ್​​

ಗಾಂಧಿ ಬಜಾರ್ :ಗಾಂಧೀಜಿಯವರು 1924ರಲ್ಲಿ ಶಿವಮೊಗ್ಗಕ್ಕೆ ಬಂದು ಹೋದ ನೆನಪಿಗಾಗಿ ನಗರದ ಬಿ ಹೆಚ್‌ ರೋಡ್​ನ ಕೆಆರ್‌ಪುರಂನಲ್ಲಿರುವ ಪ್ರಮುಖ ವ್ಯಾಪಾರ ಕೇಂದ್ರಕ್ಕೆ ಗಾಂಧಿ ಬಜಾರ್ ಎಂದು ಹೆಸರಿಡಲಾಗಿದೆ.

ಮಹಾತ್ಮ ಗಾಂಧೀಜಿ ನೆಟ್ಟಿದ್ದ ತೆಂಗಿನ ಮರಗಳು

ಕಲ್ಪವೃಕ್ಷಗಳು :ನಗರದ ದುರ್ಗಿಗುಡಿ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯ ಎದುರು ಇಂದಿಗೂ ಸಹ ಎರಡು ತೆಂಗಿನ ಮರಗಳು ಆಕಾಶದೆತ್ತರಕ್ಕೆ ಬೆಳೆದು ನಿಂತಿವೆ. ಗಾಂಧೀಜಿಯವರು ನಗರಕ್ಕೆ ಬಂದಾಗ ಅಂದಿನ ನ್ಯಾಷನಲ್ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಲಾಡ್ಜ್ ಮಾಲೀಕರು ಮತ್ತು ಅವರ ಪತ್ನಿ ಗಾಂಧೀಜಿಯವರ ಕೈಯಿಂದ ಈ ವೃಕ್ಷಗಳನ್ನು ನೆಡಿಸಿದ್ದರಂತೆ.

ನ್ಯಾಷನಲ್ ಲಾಡ್ಜ್ : 1924ರಲ್ಲಿ ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿಯವರ ಭಾಷಣದಿಂದ ಪ್ರೇರಿತರಾದ ಖ್ಯಾತ ವಕೀಲ ದಿವಂಗತ ವೆಂಕಟಸುಬ್ಬಶಾಸ್ತ್ರಿಯವರು ಗಾಂಧೀಜಿಯವರನ್ನು ಶಿವಮೊಗ್ಗಕ್ಕೆ ಕರೆ ತಂದಿದ್ದರು. ಅಂದು ಗಾಂಧೀಜಿ ಅವರಿಗೆ ನಗರದ ನ್ಯಾಷನಲ್ ಲಾಡ್ಜ್​ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಈ ಲಾಡ್ಜ್ ಬೃಂದಾವನ ಹೋಟೆಲ್ ಆಗಿ ಪರಿವರ್ತನೆಗೊಂಡು ನಂತರದಲ್ಲಿ ಶಿಥಿಲಗೊಂಡ ಬಳಿಕ ಕೆಡವಲಾಗಿದೆ.

ಆದರೆ, ಈ ಲಾಡ್ಜ್ ಮುಂದೆ ಗಾಂಧೀಜಿ ದಂಪತಿ ನೆಟ್ಟ ತೆಂಗಿನ ಸಸಿಗಳು ಹೆಮ್ಮರವಾಗಿ ಈಗಲೂ ಉಳಿದಿವೆ. ಅಲ್ಲದೆ, ಗಾಂಧೀಜಿಯವರನ್ನು ಶಿವಮೊಗ್ಗಕ್ಕೆ ಕರೆತರಲು ಪ್ರಮುಖ ರೂವಾರಿಯಾಗಿದ್ದ ವಕೀಲ ವೆಂಕಟಶಾಸ್ತ್ರಿಯವರ ಮನೆಯಲ್ಲೂ ಗಾಂಧೀಜಿ ದಂಪತಿಯು ಆತಿಥ್ಯ ಸ್ವೀಕರಿಸಿದ್ದರು. ಇದೇ ಸಂದರ್ಭದಲ್ಲಿ ವೆಂಕಟಶಾಸ್ತ್ರಿಯವರ ತಾಯಿಯಾದ ಶೇಷಮ್ಮನವರು ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಚಿನ್ನದ ಸರವನ್ನೇ ಕಸ್ತೂರಬಾ ಅವರಿಗೆ ಅರ್ಪಿಸಿ ದೇಶಭಕ್ತಿ ತೋರಿದ್ದರಂತೆ.

ಗಾಂಧಿ ಕನ್ನಡ ಸಹಿಗೂ ಶಿವಮೊಗ್ಗ ನಂಟು : ಶಿವಮೊಗ್ಗದ ಹಿರಿಯ ಸಾಹಿತಿ ವಸುದೇವ ಭೂಪಾಳಂ ಅವರು 1945ರಲ್ಲಿ ಗಾಂಧೀಜಿ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಸಬರಮತಿ ಆಶ್ರಮಕ್ಕೆ ತೆರಳಿದ್ದರಂತೆ. 3-4 ದಿನದ ಬಳಿಕ ಭೇಟಿಗೆ ಅವಕಾಶ ಸಿಕ್ಕಾಗ ಬಹಳ ಆತ್ಮೀಯವಾಗಿ ಮಾತನಾಡಿ, ಪುಸ್ತಕವೊಂದಕ್ಕೆ ಕನ್ನಡದಲ್ಲಿ ಸಹಿ ಮಾಡುವಂತೆ ಭೂಪಾಳಂ ಅವರು ಕೋರಿದಾಗ ಗಾಂಧೀಜಿ ಬರೆದು ತೋರಿಸುವಂತೆ ಹೇಳಿ ಹಲವು ಬಾರಿ ಬರೆದು ಕಲಿತ ಬಳಿಕ ಕನ್ನಡದಲ್ಲೇ ಸಹಿ ಮಾಡಿದರಂತೆ. ಅಲ್ಲದೆ ಕನ್ನಡದ ಅಕ್ಷರಗಳು ಎಷ್ಟೊಂದು ಸುಂದರವಾಗಿವೆಯಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ. ಈ ರೀತಿ ಗಾಂಧೀಜಿಯವರ ನೆನಪುಗಳು ಶಿವಮೊಗ್ಗ ನಗರವಾಸಿಗಳ ಮನದಲ್ಲಿ ಚಿರಸ್ಥಾಯಿಯಾಗುವಂತಹ ಹಲವು ಕುರುಹುಗಳು ಇಂದಿಗೂ ಉಳಿದಿವೆ.

ABOUT THE AUTHOR

...view details