ಶಿವಮೊಗ್ಗ: ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಗರಂ ಆದ ಘಟನೆ ಶಿವಮೊಗ್ಗದಲ್ಲಿ ನಡೆಯಿತು.
ಇಂದು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆಯಲ್ಲಿ ಭಾಗಿಯಾದ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಯಡಿಯೂರಪ್ಪನವರು ಕೇಂದ್ರದ ನಾಯಕರ ಜೊತೆ ಮಾತನಾಡಿದ್ದಾರೆ. ಅವರು ಯಾವಾಗ ವಿಸ್ತರಣೆ ಮಾಡಬೇಕು ಎಂದು ತೀರ್ಮಾನ ತೆಗೆದು ಕೊಳ್ಳುತ್ತಾರೋ ಅಂದು ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.
ಸಚಿವ ಸಂಪುಟದ ವಿಸ್ತರಣೆಯಲ್ಲಿ ಸೋತವರನ್ನು ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಇದೆಲ್ಲಾ ನೀವು ಕೇಳಿರುವ ಪ್ರಶ್ನೆಗಳೇ. ಮತ್ತೆ ಮತ್ತೆ ಅದನ್ನೇ ಕೇಳಬೇಡಿ ಎಂದು ಗರಂ ಅದರು. ಸಚಿವ ಸಂಪುಟಕ್ಕೆ ಹೊಸಬರನ್ನು ತೆಗೆದುಕೊಳ್ಳುವುದು, ಹಳಬರನ್ನು ತೆಗೆದುಹಾಕುವುದು ಸಿಎಂ ಹಾಗೂ ಕೇಂದ್ರದ ನಾಯಕರಿಗೆ ಬಿಟ್ಟ ವಿಷಯ. ಸಚಿವ ಸಂಪುಟ ಯಾವಾಗ ವಿಸ್ತರಣೆ ಆಗುತ್ತದೆ ಎಂದು ನನಗೂ ತಿಳಿದಿಲ್ಲ. ಈ ಬಗ್ಗೆ ಹೈಕಮಾಂಡ್ ಹಾಗೂ ಸಿಎಂ ಅವರ ತೀರ್ಮಾನವೇ ಅಂತಿಮ ಎಂದರು.