ಶಿವಮೊಗ್ಗ: ನೀನು ಯಾವಾಗ ಕಾಂಗ್ರೆಸ್ ಪಕ್ಷ ಬಿಟ್ಟು ಬರ್ತಿಯಾ ಅಂತ ನನಗೆ ಗೊತ್ತಿದೆ ಎಂದು ಸಚಿವ ಈಶ್ವರಪ್ಪ, ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ಬಹಿರಂಗವಾಗಿಯೇ ಬಿಜೆಪಿಗೆ ಹಾಸ್ಯಾಸ್ಪದ ರೀತಿಯಲ್ಲಿ ಸ್ವಾಗತ ಮಾಡಿದ ಘಟನೆ ಶಿವಮೊಗ್ಗದ ಕೆಡಿಪಿ ಸಭೆಯಲ್ಲಿ ನಡೆಯಿತು.
ಇಂದು ಜಿಲ್ಲಾ ಪಂಚಾಯತ್ನಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಗೆ ಭದ್ರಾವತಿ ಶಾಸಕ ಸಂಗಮೇಶ್ ತಡವಾಗಿ ಆಗಮಿಸಿದರು. ಈ ವೇಳೆ ಸಚಿವರು ಸಭೆಗೆ ಬೇಗ ಬರಬೇಕು ಎಂದರು. ಸಭೆಗೆ ತಡವಾಗಿ ಬಂದರೆ ಮುಂದಿನ ಬಾರಿ ಕಾಂಗ್ರೆಸ್ನ ಬಿ ಫಾರಂ ಸಿಗುವುದಿಲ್ಲ ಎಂದು ಸಂಗಮೇಶರನ್ನು ಕಿಚಾಯಿಸಿದರು.
ಕೆಡಿಪಿ ಸಭೆಯಲ್ಲಿಯೇ ಶಾಸಕ ಸಂಗಮೇಶರನ್ನು ಕಿಚಾಯಿಸಿದ ಸಚಿವ ಈಶ್ವರಪ್ಪ ಇದಕ್ಕೆ ಸಂಗಮೇಶ್, ನನಗೆ ಯಾವುದೇ ಪಕ್ಷ ಬೇಕಿಲ್ಲ, ಭದ್ರಾವತಿ ಜನರೇ ನನಗೆ ಪಕ್ಷ. ಜನರೇ ನನಗೆ ಗೆಲ್ಲಿಸುವವರು ಎಂದರು. ಇದರಿಂದ ಸಭೆಯು ನಗೆಯಲ್ಲಿ ತೇಲಿತು. ನಿನ್ನ ಹೇಳಿಕೆ ರೆಕಾರ್ಡ್ ಆಗುತ್ತಿದೆ. ನಾನು ಈ ವಿಚಾರವನ್ನು ಸಿದ್ದರಾಮಯ್ಯ, ನಿಮ್ಮ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪಕ್ಷಕ್ಕೆ ತಿಳಿಸುತ್ತೇನೆ ಎಂದು ಸಚಿವ ಈಶ್ವರಪ್ಪ ಹೇಳಿದರು. ನಮ್ಮ ಪಕ್ಷಕ್ಕಂತೂ ನಿಮ್ಮನ್ನು ಕರೆಯೋದಿಲ್ಲ ಎಂದು ಈಶ್ವರಪ್ಪ ಹೇಳಿದರು. ಇದಕ್ಕೆ ಉತ್ತರಿಸಿದ ಸಂಗಮೇಶ್, ನಾನೇನು ಬರುತ್ತೀನಿ ಅಂತೇನು ಹೇಳಿಲ್ಲ ಎಂದಾಗ ಸಭೆ ಮತ್ತೆ ನಗೆಗಡಲಲ್ಲಿ ತೇಲಿತು.
ಭದ್ರಾವತಿಯಲ್ಲಿ ಶಾಲೆ ದುರಸ್ತಿಗೆ ನಿಮ್ಮ ಮೂರನೇ ಕಣ್ಣು ಬಿಡಿ ಎಂದು ಶಾಸಕ ಸಂಗಮೇಶ್ ಮನವಿ ಮಾಡಿದರು. ಈ ವೇಳೆ ನನ್ನ ಮೂರನೇ ಕಣ್ಣು ಬಿಟ್ಟರೆ, ನೀನು ಸುಟ್ಟು ಹೋಗುತ್ತಿಯಾ ಎಂದು ಈಶ್ವರಪ್ಪ ಕಿಚಾಯಿಸಿದರು. ಅಭಿವೃದ್ಧಿ ವಿಚಾರ ಬಂದಾಗ ನಾನು ಸುಟ್ಟು ಹೋದರೂ ಪರವಾಗಿಲ್ಲ. ನನಗೆ ಅಭಿವೃದ್ಧಿ ಮುಖ್ಯ ಎಂದು ಸಂಗಮೇಶ್ ಉತ್ತರಿಸಿದರು.
ಜ. 24ರಂದು ನಾನು ನಿಮ್ಮ ಊರಿಗೆ ಬರುತ್ತೇನೆ. ಕುಡಿಯುವ ನೀರು, ಶಾಲೆ ಸೇರಿದಂತೆ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡೋಣ. ನಾನು ನಿಮ್ಮ ಮನೆಗೆ ಬಂದಿದ್ದೇನೆ. ಯಾರಾದರೂ ಸಚಿವರು ನಿಮ್ಮನೆಗೆ ಬಂದಿದ್ದಾರಾ ಹೇಳು ಎಂದು ಸಚಿವ ಈಶ್ವರಪ್ಪ ನಗೆ ಚಟಾಕಿ ಹಾರಿಸಿದರು. ಈ ವೇಳೆ ಸಭೆ ಮತ್ತೊಮ್ಮೆ ನಗೆಗಡಲಲ್ಲಿ ತೇಲಿತು.