ಕರ್ನಾಟಕ

karnataka

By

Published : Jun 4, 2022, 4:14 PM IST

ETV Bharat / city

ನಮಗೆ ಚಡ್ಡಿಯೇ ಸಾಕಷ್ಟು ಕಲಿಸಿದೆ, ಆರ್​ಎಸ್​ಎಸ್​ ಟೀಕಿಸುವ ಸಿದ್ದರಾಮಯ್ಯಗೆ ಎಲ್ಲೂ ಚಿಕಿತ್ಸೆ ಇಲ್ಲ: ಕೆ.ಎಸ್. ಈಶ್ವರಪ್ಪ

ಸಿದ್ದರಾಮಯ್ಯನಿಗೆ ಗೌರವ ಕೊಡಲು ನನಗೆ ಮನಸ್ಸು ಬರುತ್ತಿಲ್ಲ. ಆರ್​ಎಸ್​ಎಸ್ ಬಗ್ಗೆ ಮಾತನಾಡಿದರೆ ನಾನಲ್ಲ, ರಸ್ತೆಯಲ್ಲಿ ಹೋಗುವ ನಾಯಿಯು ಸಹ ಬೆಲೆ ಕೊಡುವುದಿಲ್ಲ ಎಂದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಕಿಡಿಕಾರಿದ್ದಾರೆ.

K.S.Ishwarappa talked in Pressmeet
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯ ಆರ್​ಎಸ್​ಎಸ್​ ಬಗ್ಗೆ ಮಾತನಾಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸುತ್ತ ಹುಚ್ಚ..ಹುಚ್ಚ ಎಂದು ಕರೆದಿದ್ದಾರೆ.

ಸಿದ್ದರಾಮಯ್ಯ ಆರ್​ಎಸ್​ಎಸ್​ ಚಡ್ಡಿ ಸುಡುವ ಚಳವಳಿಗೆ ಕರೆ ನೀಡಿರುವುದರ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಚಡ್ಡಿ ಹಾಕಿದ್ದವರೇ ಇಂದು ದೇಶವನ್ನು ಆಳುತ್ತಿದ್ದಾರೆ. ಚಡ್ಡಿಯೇ ಇಂದು ನಮಗೆ ಸಾಕಷ್ಟು ಕಲಿಸಿಕೊಟ್ಟಿದ್ದು, ಚಡ್ಡಿ ದೇಶವನ್ನು ಸುಸಂಸ್ಕೃತ ದೇಶವನ್ನಾಗಿಸಿದೆ. ಸಿದ್ದರಾಮಯ್ಯ ಹುಚ್ಚಾಟದ ಹೇಳಿಕೆಗಳಿಂದ ಪ್ರಚಾರವನ್ನು ಪಡೆಯುತ್ತಿದ್ದಾರೆ. ಅವರನ್ನು ನಿಮ್ಹಾನ್ಸ್ ಗೆ ಸೇರಿಸಿದ್ರು ಅಲ್ಲಿಯೂ ಕೂಡ ಔಷಧಿ ಇಲ್ಲ. ದೇಶದ ಯಾವುದೇ ಆಸ್ಪತ್ರೆಯಲ್ಲೂ ಔಷಧವಿಲ್ಲ ಎಂದು ಹರಿಹಾಯ್ದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ

ಹುಚ್ಚನನ್ನು ಕಟ್ಟಿಕೊಂಡು ಹೇಗಪ್ಪ ನಾವು ಸರ್ಕಾರ ಮಾಡೋದು ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ತನ್ನುನ್ನು ಮುಂದಿನ ಸಿಎಂ ಎಂದು ಕರೆಯಬೇಡಿ ಎಂದು ಮುಂದೆ ಹೇಳುತ್ತಾರೆ. ಆದ್ರೆ ಹಿಂದೆ ಹೋಗಿ ನಾನೇ ಸಿಎಂ ಎಂದು ಹೇಳಿ ಎಂದು ಬೆಂಬಲಿಗರಿಗೆ ಸಿದ್ದರಾಮಯ್ಯ ಹೇಳಿ ಕೊಡುತ್ತಿದ್ದಾರೆ. ಚಡ್ಡಿ ವಿಚಾರಕ್ಕೆ ಬಂದ್ರೆ ಹುಷಾರ್, ಕಾಂಗ್ರೆಸ್ ಮೂಲೆ ಸೇರುತ್ತಿದೆ. ಸೋನಿಯಾ ಗಾಂಧಿ ಬುದ್ಧಿ ಹೇಳಿದರೂ ಕೇಳುತ್ತಿಲ್ಲ. ರಾಹುಲ್​ಗೆ ಬುದ್ಧೀನೆ ಇಲ್ಲ. ಖರ್ಗೆ ದೆಹಲಿಗೆ ಹೋಗಿ ವಾಪಸ್ ಬಂದ್ರು. ದೇಶದ ಎಲ್ಲಾ ಕಡೆ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ನಿಮಗೆ ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬುದು ಗೊತ್ತಾಗುತ್ತಿಲ್ಲ. ನೀವು 20 ಕಡೆ ನಿಂತರೂ ಅಲ್ಲಿ ಚಡ್ಡಿ ನಿಮ್ಮನ್ನು ಸೋಲಿಸುತ್ತದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರಿಗೆ ಗೌರವ ನೀಡಲು ಮನಸ್ಸು ಬರುತ್ತಿಲ್ಲ:ಸಿದ್ದರಾಮಯ್ಯನಿಗೆ ಗೌರವ ಕೊಡಲು ನನಗೆ ಮನಸ್ಸು ಬರುತ್ತಿಲ್ಲ. ಆರ್​ಎಸ್​ಎಸ್ ಬಗ್ಗೆ ಮಾತನಾಡಿದರೆ, ನಾನಲ್ಲ, ರಸ್ತೆಯಲ್ಲಿ ಹೋಗುವ ನಾಯಿಯು ಸಹ ಬೆಲೆ ಕೊಡುವುದಿಲ್ಲ. ಪ್ರತಿಪಕ್ಷ ನಾಯಕ ಸ್ಥಾನದ ಗೌರವ ಉಳಿಸದ ವ್ಯಕ್ತಿ ಸಿದ್ದರಾಮಯ್ಯ. ಆರ್​ಎಸ್​ಎಸ್​ನ ಚಡ್ಡಿಯ ಭಯ ಸಿದ್ದರಾಮಯ್ಯನಿಗೆ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮಂತ್ರಿ ಮನೆಗೆ ಹೋಗಿ ಬೆಂಕಿ ಹಚ್ಚುವ ಕಾಂಗ್ರೆಸ್ಸಿಗರಿಗೆ ಬುದ್ಧಿ ಹೇಳಿದ್ರೆ, ಅದು ಒಪ್ಪುವಂತದ್ದು. ಆದರೆ ಸಿದ್ದರಾಮಯ್ಯ ಹಾಗೆ ಮಾಡ್ತಾ ಇಲ್ಲ. ಹಿಂದು ಯುವಕ ಹರ್ಷನನ್ನು ಕೊಲೆ ಮಾಡಿದಾಗ ಮನೆಯವರಿಗೆ ಸಮಾಧಾನ ಹೇಳಿ‌ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದು ಅವರಿಗೆ ತಪ್ಪು ಎಂದೆನ್ನಿಸುತ್ತದೆ. ಆದರೆ ಅವರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು ತಪ್ಪಾಗಿ ಕಾಣುತ್ತಿಲ್ಲ. ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಗೌರವಯುತವಾಗಿ ಮಾತನಾಡಿದ್ರೆ, ಆ ಸ್ಥಾನಕ್ಕೆ‌ ನಾವು ಗೌರವ ನೀಡುತ್ತೇವೆ. ಆದರೆ ಈಗ ಅದೂ ಇಲ್ಲದಂತಾಗಿದೆ ಎಂದು ಈಶ್ವರಪ್ಪ ಟೀಕಿಸಿದರು.

ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಪಕ್ಷ. ಆದರೆ ಈಗ ಕಾಂಗ್ರೆಸ್​ನವರೇ ಸಿದ್ದರಾಮಯ್ಯನಂತ ಗೂಂಡಾಗಳು ಇರುವುದಕ್ಕೆ ಬೇಸರಿಸಿಕೊಳ್ಳುತ್ತಿದ್ದಾರೆ. ಬಲಹೀನ ಸಿದ್ದರಾಮಯ್ಯ ಆರ್​ಎಸ್​ಎಸ್ ಬಲಶಾಲಿಗೆ ಏನೂ ಮಾಡಲಾಗದೆ ಈ ರೀತಿ ಮಾತನಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಉಳಿಸುತ್ತಿರುವುದು ಆರ್​ಎಸ್​ಎಸ್. ಸಂವಿಧಾನಕ್ಕೆ ವಿರುದ್ಧವಾದ ಒಂದೇ ಒಂದು ಕೆಲಸವನ್ನು ಆರ್​ಎಸ್​ಎಸ್ ಮಾಡಿಲ್ಲ. ನಮಗೆ ಹಿಂದಿನ ಕಾಂಗ್ರೆಸ್​ನ ವಲ್ಲಭ್​ಭಾಯ್ ಪಟೇಲ್ ರಂತವರು ಆದರ್ಶ. ಸಿದ್ದರಾಮಯ್ಯ, ಡಿ.ಕೆ.ಶಿ, ನಲಪಾಡ್ ರಂತಹ ಗೂಂಡಾಗಳಲ್ಲ. ಚಡ್ಡಿ ಸುಟ್ಟು, ಮಂತ್ರಿ‌ಮನೆಗೆ ನುಗ್ಗಿದ್ದನ್ನು ಸಂವಿಧಾನ ಹೇಳಿ ಕೊಟ್ಟಿದೆಯೇ. ಈಗ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಆ ಸ್ಥಾನವೂ ಸಹ ಇರಲ್ಲ ಎಂದು ಕಿಡಿಕಾರಿದರು.

ರಾಜ್ಯಸಭ ಚುನಾವಣೆಯಲ್ಲಿ ಗೆಲ್ಲುತ್ತೇವೆ:ಚುನಾವಣೆಯಲ್ಲಿ ಸೋತು ಸೋತು ಅವರಿಗೆ ಟೀಕೆ ಮಾಡುವುದೇ ಅಭ್ಯಾಸವಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್​ನ ಅಸಮಾಧಾನದ ಲಾಭ ಪಡೆದು ಗೆಲ್ಲುತ್ತೇವೆ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:ಸುದ್ದಿಯಲ್ಲಿರಲು ಕಾಂಗ್ರೆಸ್ ನಾಯಕರಿಂದ ಆರ್‌ಎಸ್ಎಸ್ ಟಾರ್ಗೆಟ್: ಸಚಿವ ಅಶ್ವತ್ಥನಾರಾಯಣ

ABOUT THE AUTHOR

...view details