ಶಿವಮೊಗ್ಗ:ಕೋವಿಡ್ನಿಂದಾಗಿ ಪ್ರವಾಸೋದ್ಯಮ ಭಾರಿ ಕುಸಿತ ಕಂಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ನೇಪಾಳ ಆರ್ಥಿಕ ಸಮಸ್ಯೆ ಎದುರಿಸಿದ್ದನ್ನೇ ನಾವು ಕಾಣಬಹುದಾಗಿದೆ. ಪ್ರವಾಸೋದ್ಯಮದಲ್ಲಿ ಇತ್ತಿಚಿನ ದಿನಗಳಲ್ಲಿ ಚೇತರಿಕೆ ಕಂಡು ಬರುತ್ತಿದೆ. ಕೋವಿಡ್ನ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಪ್ರವಾಸಿ ತಾಣಗಳನ್ನು ತೆರೆಯಲಾಗಿದೆ.
ಇದರಿಂದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡಿದ್ದಾರೆ. ನವೆಂಬರ್ನಿಂದ ಜನವರಿವರೆಗೆ ಪ್ರವಾಸಕ್ಕೆ ಸೂಕ್ತ ಕಾಲವಾಗಿದ್ದು, ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಆದರೆ, ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಶೇಕಡಾ 30 ರಷ್ಟು ಕಡಿಮೆ ಇದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳುತ್ತದೆ.
ಕವಿ ಮನೆ, ಜಲಪಾತ, ಬೆಟ್ಟ ಗುಡ್ಡಗಳ ಟ್ರಕ್ಕಿಂಗ್, ರಿವರ್ ರ್ಯಾಪ್ಟಿಂಗ್, ಪಕ್ಷಿಧಾಮ ಮತ್ತು ಪ್ರಾಣಿಧಾಮಗಳಂತಹ 52ಕ್ಕೂ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಶಿವಮೊಗ್ಗದ ಪ್ರವಾಸೋದ್ಯಮದಲ್ಲಿ ಚೇತರಿಕೆ ಕಂಡಿದೆ. ಜೋಗ, ಸಿಗಂದೂರು, ಹುಲಿ- ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ. ಶಿವಪ್ಪ ನಾಯಕ ಅರಮನೆ, ಕೆಳದಿ ದೇವಾಲಯ, ಚಂದ್ರಗುತ್ತಿ ದೇವಾಲಯ, ಗುಡವಿ ಪಕ್ಷಿಧಾಮ, ಕುಪ್ಪಳ್ಳಿ ವಸ್ತು ಸಂಗ್ರಹಾಲಯ ಒಳಗೊಂಡಿವೆ. ಈ ಮೇಲಿನ ಎಲ್ಲ ಪ್ರವಾಸಿತಾಣಗಳಿಗೆ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಹುಲಿ ಮತ್ತು ಸಿಂಹಧಾಮ ಕೋವಿಡ್ ನಂತರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಪ್ರತಿ ತಿಂಗಳು ಸರಾಸರಿ 40 ರಿಂದ 50 ಸಾವಿರ ತನಕ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವರ್ಷ ನವೆಂಬರ್ನಲ್ಲಿ 1,81,323, ಡಿಸೆಂಬರ್ನಲ್ಲಿ 26,228, ಜನವರಿಯಲ್ಲಿ 2,07,551 ಪ್ರವಾಸಿಗರು ಆಗಮಿಸಿದ್ದಾರೆ.