ಶಿವಮೊಗ್ಗ:ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರವಲಯದ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ 96.50ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಮೂರು ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ತಿಳಿಸಿದ್ದಾರೆ.
ಜಿಲ್ಲಾಡಳಿತ ಸಭಾಂಗಣದಲ್ಲಿ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಾಲಿಕೆ ಹೊರವಲಯದ 13 ಪ್ರದೇಶಗಳಲ್ಲಿ ಸುಮಾರು 325 ಕಿ.ಮೀ ವಿತರಣಾ ಕೊಳವೆ ಮಾರ್ಗ ಮತ್ತು 11 ಸಾವಿರ ಗೃಹ ಸಂಪರ್ಕ ಕಲ್ಪಿಸಲು 96.50 ಕೋಟಿ ರೂ. ಅಂದಾಜು ಯೋಜನೆಗೆ ಮಂಡಳಿ ಅನುಮೋದನೆ ನೀಡಿದ್ದು, ಹಣಕಾಸು ಇಲಾಖೆ ಸಹ ಅಂಗೀಕಾರ ನೀಡಿದೆ.
ಇದೇ ರೀತಿ ವಿರೂಪನಕೊಪ್ಪಕ್ಕೆ ಸೋಮಿನಕೊಪ್ಪದಿಂದ ಪೈಪ್ಲೈನ್ ಅಳವಡಿಸುವ 70 ಲಕ್ಷ ರೂ. ಪ್ರಸ್ತಾವನೆಗೆ ಹಾಗೂ ಗೋವಿಂದಪುರ-ಗೋಪಿಶೆಟ್ಟಿಕೊಪ್ಪಕ್ಕೆ ತುಂಗಾ ನದಿಯಿಂದ ಸುಮಾರು 10 ಕಿ.ಮೀ ಪೈಪ್ಲೈನ್ ಮೂಲಕ ನೀರು ಪೂರೈಕೆ ಮಾಡುವ 12 ಕೋಟಿ ರೂ. ಪ್ರಸ್ತಾವನೆಗೂ ಆದಷ್ಟು ಬೇಗನೆ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದರು.
ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಲು ಗಡುವು: ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಕಾಮಗಾರಿಗಳನ್ನು ಮುಂದಿನ ಸೆಪ್ಟಂಬರ್ ಒಳಗಾಗಿ ಪೂರ್ಣಗೊಳಿಸಬೇಕು. 124 ಕೋಟಿ ರೂ. ವೆಚ್ಚದಲ್ಲಿ 466 ಕಿ.ಮೀ ಉದ್ದದ ಪೈಪ್ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಆಗಸ್ಟ್ ನಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಮುಂದಿನ ಸೆಪ್ಟಂಬರ್ ಒಳಗಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಮಂಡಳಿಯ ಕಾಮಗಾರಿಗಳ ಅನುಷ್ಟಾನಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್ಗಳ ನೇಮಕಕ್ಕೆ ಅನುಮತಿ ನೀಡಲಾಗುವುದು ಎಂದರು.