ಶಿವಮೊಗ್ಗ:ನಗರದಿಂದ ಚೆನ್ನೈ ಮಹಾನಗರಕ್ಕೆ ವಾರಕ್ಕೊಮ್ಮೆ ಹೋಗುತ್ತಿದ್ದ ಶಿವಮೊಗ್ಗ-ಚೆನ್ನೈ ತತ್ಕಾಲ್ ಎಕ್ಸಪ್ರೆಸ್ ರೈಲು ಇನ್ಮುಂದೆ ವಾರದಲ್ಲಿ ಎರಡು ದಿನ ಸಂಚಾರ ಮಾಡಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಬೆಂಗಳೂರಿನ ರೈಲ್ವೆ ವಿಭಾಗೀಯ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ರೈಲು ಸೇವೆ ಫೆಬ್ರವರಿ 28ರಿಂದ ವಾರದಲ್ಲಿ ಎರಡು ದಿನ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದಿಂದ ಪ್ರತಿ ಸೋಮವಾರ ಹಾಗೂ ಶುಕ್ರವಾರ ರಾತ್ರಿ 11:55ಕ್ಕೆ ಹೊರಟು ಮರು ದಿನ ಬೆಳಗ್ಗೆ 11:45 ಗಂಟೆಗೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಚೆನ್ನೈ ಸೆಂಟ್ರಲ್ನಿಂದ ಮಂಗಳವಾರ ಮತ್ತು ಶನಿವಾರ ಮಧ್ಯಾಹ್ನ 3 ಗಂಟೆಗೆ ಹೊರಟು ಮರು ದಿನ ಬೆಳಗ್ಗೆ 3:55ಕ್ಕೆ ಶಿವಮೊಗ್ಗ ತಲುಪಲಿದೆ.