ಕರ್ನಾಟಕ

karnataka

By

Published : Jun 2, 2022, 2:31 PM IST

ETV Bharat / city

ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತ್ತಿತ್ತು: ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನಾನು ನನ್ನ ಯಾವುದೇ ನಿಲುವನ್ನು ಪ್ರಕಟಿಸುತ್ತಿಲ್ಲ. ಆದರೆ ಬಹಳ ವರ್ಷಗಳಿಂದ ಅನೇಕ ಸಂದರ್ಭಗಳಲ್ಲಿ ನಡೆದ ಎಲ್ಲವನ್ನೂ ಕೂಡ ಹೇಳಿದ್ದೇನೆ ಅಷ್ಟೇ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್​.ಎಲ್. ಭೈರಪ್ಪ ಹೇಳಿದ್ದಾರೆ.

senior-literature-sl-bairappa-statement
ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ

ಮೈಸೂರು: ಯಾರೋ ಯುವಕರು ಶಿಕ್ಷಣ ಸಚಿವ ನಾಗೇಶ್ ಅವರ ಮನೆಯನ್ನು ಸುಟ್ಟುಹಾಕಲು ಹೋಗಿದ್ದರು. ಯಾರೂ ಇದನ್ನು ಸುಮ್ಮನೆ ಮಾಡುವುದಿಲ್ಲ. ಯಾರೋ ಹಿಂದೆ ಕುಳಿತು ಈ ಕೃತ್ಯವನ್ನು ಮಾಡಿಸುತ್ತಿದ್ದಾರೆ. ಪೊಲೀಸರು ಇಲ್ಲದೇ ಇದ್ದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತ್ತಿತ್ತು ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

ಪಠ್ಯದಲ್ಲಿ ಸತ್ಯ ಇರಬೇಕು:ಪಠ್ಯಪುಸ್ತಕ ಪರಿಷ್ಕರಣೆ ವಿವಾದವನ್ನು ಕುರಿತು ಮಾತನಾಡಿದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ, ಪಠ್ಯದಲ್ಲಿ ಸತ್ಯ ಇರಬೇಕೆ ಹೊರತು ನಿಮ್ಮ ಐಡಿಯಾಲಜಿಗಳು ಇರಬಾರದು. ನಾನು ಲೇಖಕ, ಕಾರ್ಯಕರ್ತನಲ್ಲ. ವಾಜಪೇಯಿ ಕಾಲದಲ್ಲೂ ಕೂಡ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ಆಗ ಸಾಹಿತಿಗಳು ದೇಶದ ತುಂಬೆಲ್ಲ ಪ್ರಶಸ್ತಿ ವಾಪಸ್ ಮಾಡಿ ಚಳವಳಿಯನ್ನು ಆರಂಭಿಸಿದ್ದರು. ಆಗ ನಾನು ಪ್ರಶಸ್ತಿಗಳ ಜೊತೆಗೆ ಹಣವನ್ನು ಕೂಡ ವಾಪಸ್ ಕೊಡಿ ಅಂತ ಸಲಹೆ ಕೊಟ್ಟಿದ್ದೆ. ಆಗ 15 ದಿನಗಳೊಳಗೆ ಎಲ್ಲರೂ ಸುಮ್ಮನಾಗಿದ್ದರು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ತಿಳಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನನ್ನ ಯಾವುದೇ ನಿಲುವನ್ನು ಪ್ರಕಟಿಸುತ್ತಿಲ್ಲ:ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನಾನು ನನ್ನ ಯಾವುದೇ ನಿಲುವನ್ನು ಪ್ರಕಟಿಸುತ್ತಿಲ್ಲ. ಆದರೆ ಬಹಳ ವರ್ಷಗಳಿಂದ ಅನೇಕ ಸಂದರ್ಭಗಳಲ್ಲಿ ನಡೆದ ಎಲ್ಲವನ್ನೂ ಕೂಡ ಹೇಳಿದ್ದೇನೆ ಅಷ್ಟೇ ಎಂದರು.

ಟಿಪ್ಪುವಿನ ನಿಜಸ್ವರೂಪ ಪುಸ್ತಕವನ್ನು ಯಾರು ಓದುವುದಿಲ್ಲ:ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲ ಮಾಡಿದ ಅನ್ನೋದು ಕಾರ್ಯಪ್ಪ ಅವರಿಗೆ ಗೊತ್ತು. ಅದನ್ನು ಭಾಷಣದಲ್ಲಿಯೂ ಕೂಡ ಪ್ರಸ್ತಾಪ ಮಾಡಿದ್ದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು ಸಿಎಂಗೆ ಪತ್ರ ಬರೆದು ಚಳವಳಿಯನ್ನು ಶುರುಮಾಡಿದ್ದರು. ಸ್ವಲ್ಪ ದಿನಗಳ ನಂತರ ಎಲ್ಲರೂ ಕೂಡ ಸುಮ್ಮನಾದರು. ನಾಟಕ ಇರೋದು ಚಳವಳಿ ಮಾಡೋಕೆ. ಕಾವ್ಯ, ಕಾದಂಬರಿ ಹೇಗೆ ರಸಾನುಭವವೋ ಹಾಗೆ ನಾಟಕವು ಕೂಡ ರಸಾನುಭವ. ಅಡ್ಡಂಡ ಕಾರ್ಯಪ್ಪ ಅವರನ್ನು ತೆಗೆದುಹಾಕಲು ಚಳವಳಿ ಮಾಡಿದವರಿಗೆ ಸಾಧ್ಯ ಆಗಲಿಲ್ಲ. ಟಿಪ್ಪು ವಿಚಾರದಲ್ಲಿ ಲೆಫ್ಟಿಸ್ಟ್, ಮುಸ್ಲಿಂಗಳು ಅವರದೇ ಐಡಿಯಾಲಜಿ ಮಾಡುತ್ತಾರೆ. ಟಿಪ್ಪು ಎಕ್ಸ್​ಪ್ರೆಸ್​ ರೈಲಿನ ಹೆಸರನ್ನು ಬದಲಾಯಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಟಿಪ್ಪುವಿನ ನಿಜಸ್ವರೂಪ ಪುಸ್ತಕವನ್ನು ಯಾರೂ ಓದುವುದಿಲ್ಲ ಎಂದು ಸಾಹಿತಿ ಎಸ್​.ಎಲ್​. ಭೈರಪ್ಪ ಹೇಳಿದರು.

ಇಂದಿರಾಗಾಂಧಿ ಕಾಲದಲ್ಲಿ ನನ್ನನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು:ಇಂದಿರಾಗಾಂಧಿ ಕಾಲದಲ್ಲೂ ಕೂಡ ಪಠ್ಯ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಸತ್ಯವನ್ನು ಹೇಳಬೇಕು ಎಂದಿದ್ದಕ್ಕೆ ನನ್ನನ್ನ ಹೊರಗಿಟ್ಟಿದ್ದರು. ಆಗಲು ಅವರಿಗೆ ಬೇಕಾದವರನ್ನು ಸೇರಿಸಿಕೊಂಡು ಪಠ್ಯ ರಚನೆ ಮಾಡಿದ್ದರು. ಅವತ್ತಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಪಠ್ಯವನ್ನು ಒಪ್ಪಿಕೊಂಡು ಅಳವಡಿಸಿಕೊಂಡಿದ್ದರು ಎಂದು ಟೀಕಿಸಿದರು.

ಮಹಾಬಲೇಶ್ವರದಲ್ಲಿ ಇತಿಹಾಸವನ್ನು ಮರೆಮಾಚಲಾಗಿದೆ:ಮಹಾಬಲೇಶ್ವರದಲ್ಲಿ ಇತಿಹಾಸವನ್ನು ಮರೆಮಾಚಲಾಗಿದೆ. ಶಿವಾಜಿಯನ್ನು ಕೊಲ್ಲಲು ಬಂದಿದ್ದ ಅಫ್ಜಲ್ ಖಾನ್​ನನ್ನು ನಾಯಕನನ್ನಾಗಿ ಮಾಡಲಾಗಿದೆ. ನಾನು ಕೂಡ ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿದ್ದ ಗೈಡ್ ಮೊದಲು ನನಗೆ ಸತ್ಯವನ್ನು ಹೇಳಲಿಲ್ಲ. ಐದು ರೂಪಾಯಿ ಕೊಟ್ಟ ನಂತರ ಘಟನಾ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದ. ಅಫ್ಜಲ್ ದಾಳಿ ಬಗ್ಗೆ ಅಲ್ಲಿ ನಾಮಫಲಕವನ್ನು ಹಾಕಲಾಗಿತ್ತು. ಸರ್ಕಾರ ನಂತರ ಅದನ್ನು ತೆಗೆದುಹಾಕಿದೆ. ಯಾರಿಗೂ ಹೇಳಬೇಡಿ ಎಂದು ಆ ಗೈಡ್ ಕೇಳಿಕೊಂಡಿದ್ದನು. ಸರ್ಕಾರವೇ ನಂತರ ಆ ನಾಮಫಲಕವನ್ನು ತೆಗೆದುಹಾಕಿದೆ. ಇದೆಲ್ಲವೂ ಚುನಾವಣೆಗಾಗಿ ಮಾಡುತ್ತಿರುವುದು ಎಂದು ಸಾಹಿತಿ ಎಸ್​.ಎಲ್. ಭೈರಪ್ಪ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಸಚಿವ ನಾಗೇಶ್​ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ 15 ಮಂದಿ ಪೊಲೀಸ್​ ವಶಕ್ಕೆ : ಆರಗ ಜ್ಞಾನೇಂದ್ರ

ABOUT THE AUTHOR

...view details