ಕರ್ನಾಟಕ

karnataka

By

Published : Aug 10, 2020, 12:32 PM IST

ETV Bharat / city

ಕಪಿಲಾ‌ ನದಿ ಪ್ರವಾಹ ಇಳಿಮುಖ: ಸಹಜ ಸ್ಥಿತಿಯತ್ತ ಜನ‌ಜೀವನ

ಮೈಸೂರು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಮತ್ತು ಕಬಿನಿ ಜಲಾಶಯದಿಂದ ಹೊರಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಕಪಿಲಾ ನದಿ ಪ್ರದೇಶದಲ್ಲಿ ಪ್ರವಾಹ ಇಳಿಮುಖವಾಗಿದೆ. ಆದರೆ ಪ್ರವಾಹದಿಂದ ಅಪಾರ ಬೆಳೆ, ಮನೆ ಹಾನಿ ಸಂಭವಿಸಿದೆ.

house damage
ಮನೆ ಹಾನಿ

ಮೈಸೂರು:ಕಬಿನಿ ಜಲಾಶಯದಿಂದ ಹೊರಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಕಪಿಲಾ‌ ನದಿ ಪ್ರದೇಶದಲ್ಲಿ ಪ್ರವಾಹ ಇಳಿಮುಖವಾಗಿದೆ. ಸಹಜ ಸ್ಥಿತಿಯತ್ತ ಜನಜೀವನ ಮರಳುತ್ತಿದ್ದು, ಪ್ರವಾಹದಿಂದ ಅಪಾರ ನಷ್ಟವಾಗಿದೆ.

ನಾಲ್ಕು ದಿನಗಳಿಂದ ಕಬಿನಿ ಜಲಾಶಯ, ನುಗು ಹಾಗೂ ತಾರಕ ಜಲಾಶಯದಿಂದ ಸುಮಾರು 68,000 ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಬಿಡಲಾಗಿದೆ. ಇದರಿಂದ ಹಚ್.ಡಿ.ಕೋಟೆ, ಸರಗೂರು, ನಂಜನಗೂಡು ತಾಲೂಕಿನ ತಗ್ಗು ಪ್ರದೇಶಗಳಿಗೆ ನದಿ ನೀರು ನುಗ್ಗಿ ಅಪಾರ ಬೆಳೆ‌ ಹಾನಿಯಾಗಿದೆ.

ಮನೆ ಹಾನಿ

ಹಾಗೆಯೇ ಬಡಾವಣೆಗಳಿಗೂ ನೀರು ನುಗ್ಗಿ ಜನಜೀವನ ಅತಂತ್ರವಾಗಿದ್ದು, ಹಲವಾರು ಮನೆಗಳು ಕುಸಿದು ಬಿದ್ದಿವೆ. ಆದರೆ ಭಾನುವಾರ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಇಂದು ಕಬಿನಿ ಜಲಾಶಯದಿಂದ 16,600 ಕ್ಯೂಸೆಕ್ ನೀರನ್ನು ಮಾತ್ರ ಹೊರ ಬಿಡಲಾಗಿದೆ. ಇದರಿಂದ ಜನರಿಗೆ ಪ್ರವಾಹದ ಭೀತಿ ಇಲ್ಲದಂತಾಗಿದೆ.

ಈ ನಡುವೆ ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗನಹಳ್ಳಿ/ಹರದನಹಳ್ಳಿ ಹಾಗೂ ಮಾದಾಪುರ, ಬೆಳ್ಳುರು ಸೇತುವೆಯ ಮೇಲೆ ಹರಿಯುತ್ತಿದ್ದ ನೀರು ಕಡಿಮೆಯಾಗಿದೆ. ಈಗ ಪ್ರವಾಹ ಇಳಿಮುಖವಾಗಿದ್ದರಿಂದ ನಂಜನಗೂಡಿನ‌ ದೇವಾಲಯಗಳು ಜಲಬಂಧನದಿಂದ ಮುಕ್ತಿ ಹೊಂದಿವೆ. ಜಿಲ್ಲೆಯಲ್ಲಿ ಹಲವು ಕಡೆ ಜಿಟಿಜಿಟಿ ಮಳೆ ಮುಂದುವರೆದಿದೆ.

ಮನೆ ಹಾನಿ

ತ್ರಿವೇಣಿ ಸಂಗಮದಲ್ಲಿ ಹೆಚ್ಚಿದ ಕಾವೇರಿ ನೀರು

ಕೆ.ಆರ್.ಎಸ್ ಜಲಾಶಯ ಹಾಗೂ ಕಬಿನಿ ಜಲಾಶಯದಿಂದ ಅಧಿಕ ನೀರನ್ನು ಹೊರ ಬಿಡುತ್ತಿರುವ ಕಾರಣ ತಿ.ನರಸೀಪುರ ಬಳಿಯ ತ್ರಿವೇಣಿ ಸಂಗಮದಲ್ಲಿ ನೀರು ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಇಂದು ಅಥವಾ ನಾಳೆ ಪ್ರವಾಹ ಉಂಟಾಗುವ ಭೀತಿ ಇದೆ.

ಸಂಗಮದಲ್ಲಿರುವ ವ್ಯಾಸರಾಯ ಮಠದ ಸೋಪಾನ ಕಟ್ಟೆ ಹಾಗೂ ಕಪಿಲಾ ನದಿ ದಡದಲ್ಲಿರುವ ಗುಂಜನರಸಿಂಹಸ್ವಾಮಿ ದೇವಾಲಯದ ಮುಂಭಾಗಕ್ಕೆ ಮತ್ತು ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ತಲಕಾಡಿನ ನಿಸರ್ಗಧಾಮ ಹಾಗೂ ಮಾಲಗಿ ಗ್ರಾಮದಲ್ಲಿನ ದೇವಾಲಯಗಳು ಜಲಾವೃತಗೊಂಡಿವೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಜಿಲ್ಲಾಡಳಿತ ಸೂಚಿಸಿದೆ.

ಜಲಾಶಯದಿಂದ ಹೊರ ಬರುತ್ತಿರುವ ನೀರು

ಜಿಲ್ಲೆಯಲ್ಲಿ ಪ್ರವಾಹ ಭೀತಿ ಕಡಿಮೆಯಾಗಿದ್ದು, ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕಿನ ಹಲವು ಗ್ರಾಮಗಳು ಲಕ್ಷ್ಮಣ ತೀರ್ಥ ನದಿಯ ಪ್ರವಾಹದ ಏರಿಕೆಯಿಂದ ತೆರವುಗೊಂಡಿವೆ. ಪ್ರವಾಹದಿಂದ ಉಂಟಾದ ಅನಾಹುತಗಳು ಈಗ ಕಾಣ ಸಿಗುತ್ತಿದ್ದು, ನಷ್ಟದ ಬಗ್ಗೆ ವರದಿ ನೀಡುವಂತೆ ತಾಲೂಕು ಆಡಳಿತಕ್ಕೆ ಜಿಲ್ಲಾಡಳಿತ ಸೂಚಿಸಿದೆ.

ABOUT THE AUTHOR

...view details