ಕರ್ನಾಟಕ

karnataka

ETV Bharat / city

ಪಕ್ಷದಲ್ಲಿ ರಮ್ಯಾ ಸ್ಥಾನಮಾನ ಏನೆಂಬುದು ನನಗೆ ಗೊತ್ತಿಲ್ಲ: ನಲಪಾಡ್ - Ramya tweet on Nalapad

ರಮ್ಯಾ ಅವರು ಮಾಜಿ ಸಂಸದೆ ಎನ್ನುವುದು ಬಿಟ್ಟರೆ ಪಕ್ಷದಲ್ಲಿ ಸದ್ಯ ಅವರೇನು ಎಂಬುದು ನನಗೆ ಗೊತ್ತಿಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಿಳಿಸಿದ್ದಾರೆ.

Ramya Nalapad tweet war
ರಮ್ಯಾ ನಲಪಾಡ್ ಟ್ವೀಟ್ ವಾರ್

By

Published : May 13, 2022, 4:45 PM IST

ಮೈಸೂರು: ಮಾಜಿ ಸಂಸದೆ ರಮ್ಯಾ ಅವರ ಸ್ಥಾನಮಾನ ಈಗ ಪಕ್ಷದಲ್ಲಿ ಏನೆಂಬುದು ನನಗೆ ಗೊತ್ತಿಲ್ಲ. ರಮ್ಯಾ ಅವರ ಟ್ವೀಟ್​ಗೆ ನಾನು ಪ್ರತಿ ಟ್ವೀಟ್ ಮಾಡಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಿಳಿಸಿದ್ದಾರೆ. ಮೈಸೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಲಪಾಡ್, ರಮ್ಯಾ ಅವರು ಆ ರೀತಿಯ ಟ್ವೀಟ್ ಮಾಡಬಾರದಿತ್ತು. ಅವರು ಮಾಜಿ ಸಂಸದೆ ಎನ್ನುವುದು ಬಿಟ್ಟರೆ ಪಕ್ಷದಲ್ಲಿ ಸದ್ಯ ಅವರೇನು ಎಂಬುದು ನನಗೆ ಗೊತ್ತಿಲ್ಲ ಎಂದರು.

ನಾನು ರಮ್ಯಾ ಅವರ ವಿರುದ್ಧವಲ್ಲ. ಕಿರಿಯ ವಯಸ್ಸಿನಲ್ಲೇ ಅವರು ಸಂಸದರಾಗಿದ್ದವರು. ರಮ್ಯಾ ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯಾವುದೇ ವಿಚಾರಗಳನ್ನು ತಿಳಿಸಬೇಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಏನನ್ನೂ ಹಾಕಬಾರದು, ಏನೇ ಇದ್ದರೂ ದೂರವಾಣಿಯ ಮೂಲಕ ತಿಳಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆಂದರು.

ಕೇಂದ್ರ, ರಾಜ್ಯ ಸರ್ಕಾರಗಳು ಜನರಿಗೆ ನೀಡಿದ ಭರವಸೆಗಳು ಹುಸಿಯಾಗಿವೆ. ಕೋವಿಡ್​ನಿಂದಾಗಿ ದೇಶಾದ್ಯಂತ 47 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಆದರೆ, ಕೇಂದ್ರ ಸರ್ಕಾರ ಕೇವಲ 4.47 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದೆ. ಕೋವಿಡ್​ನಿಂದ ಸಾವನ್ನಪ್ಪಿದವರಿಗೆ ಪರಿಹಾರ ನೀಡಬೇಕಾಗಿರುವುದರಿಂದ ಕೇಂದ್ರ ಸರ್ಕಾರ ಸತ್ಯಾಂಶವನ್ನು ಮುಚ್ಚಿಡುತ್ತಿದೆಯೆಂದು ಆರೋಪಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್

ಕೋವಿಡ್ ಸಂದರ್ಭದಲ್ಲಿ ಸರ್ಕಾರ ಕಮಿಷನ್ ಹೊಡೆಯುವುದರಲ್ಲಿ ಬ್ಯುಸಿಯಾಗಿತ್ತು. ಆ ಸಮಯದಲ್ಲಿ ರಾಜ್ಯದ ಯುವ ಕಾಂಗ್ರೆಸ್ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿತ್ತು. ಸರ್ಕಾರ ಮಾಡಬೇಕಾದ ಕೆಲಸವನ್ನು ಯುವ ಕಾಂಗ್ರೆಸ್ ಮಾಡಿತ್ತು. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಜನಸಾಮಾನ್ಯರಿಗೆ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿದೆ ಎಂದರು.

ಇದನ್ನೂ ಓದಿ:'ಈ ಹುಡುಗ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾನೆ, ವಾಹ್!': ನಲಪಾಡ್‌ ವಿರುದ್ಧ ಗುಡುಗಿದ ರಮ್ಯಾ

ಬಿಜೆಪಿ ಸರ್ಕಾರ ಸಮಾಜವನ್ನು ವಿಭಜಿಸುವುದರಲ್ಲಿ ನಿರತವಾಗಿದೆ. ಈ ಮೂಲಕ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಯತ್ನಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರಕ್ಕೆ ಬಂದ ನಂತರ ಮೈ ಶುಗರ್ಸ್ ಕಾರ್ಖಾನೆಯನ್ನು ಪುನಶ್ಚೇತನ ಮಾಡಲಾಗುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹುಟ್ಟುಹಬ್ಬದ ದಿನದಂದು ಮಂಡ್ಯದ ಮೈ ಶುಗರ್ಸ್ ಕಾರ್ಖಾನೆಯ ಆವರಣವನ್ನು ಯುವ ಕಾಂಗ್ರೆಸ್ ಶ್ರಮದಾನದ ಮೂಲಕ ಸ್ವಚ್ಛ ಮಾಡಲಾಗುತ್ತದೆ ಎಂದು ತಿಳಿಸಿದರು. ಇನ್ನೂ ನಲಪಾಡ್ ಜೈಲಿಗೆ ಹೋಗಿ ಬಂದವನು ಎಂದು ಬಿಂಬಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.

ABOUT THE AUTHOR

...view details