ಮೈಸೂರು: ಪತಿ ಕಿರುಕುಳಕ್ಕೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಮಹದೇವನಗರದಲ್ಲಿ ನಡೆದಿದೆ.
ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ - ಗುಂಡ್ಲುಪೇಟೆ ಭಾಗ್ಯಾ ಆತ್ಮಹತ್ಯೆ
ಪತಿ ಸೋಮಣ್ಣನ ಕಿರುಕುಳಕ್ಕೆ ಮನನೊಂದು ಪತ್ನಿ ಭಾಗ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಮಹದೇವನಗರದಲ್ಲಿ ಬೆಳಕಿಗೆ ಬಂದಿದೆ. ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೆ ಪತಿ ಸೋಮಣ್ಣ ನಾಪತ್ತೆಯಾಗಿದ್ದಾನೆ.

ಭಾಗ್ಯಾ(29)ಮೃತ ದುರ್ದೈವಿ. ಗುಂಡ್ಲುಪೇಟೆಯ ಭಾಗ್ಯಾ ಅವರಿಗೆ 10 ವರ್ಷಗಳ ಹಿಂದೆ ಮಹದೇವನಗರದ ಸೋಮಣ್ಣ ಜೊತೆ ವಿವಾಹವಾಗಿತ್ತು. ಮದುವೆ ಆಗಿ ಹತ್ತು ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಪತಿ ಸೋಮಣ್ಣ ಬೇರೊಂದು ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ.
ಈ ವಿಚಾರದಲ್ಲೂ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಬೇಸತ್ತ ಭಾಗ್ಯಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮನೆಯ ಆಚೆ ಮಲಗಿದ್ದ ಪತಿ ಸೋಮಣ್ಣ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೋಡುತ್ತಿದ್ದಂತೆಯೇ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.