ಮೈಸೂರು:ನಾನು ಹಲಾಲ್ ಕಟ್, ಜಟ್ಕಾ ಕಟ್ ವಿಷಯ ಇಟ್ಟುಕೊಂಡು ವೋಟ್ ಕೇಳಲ್ಲ. ನನಗೆ ಸ್ವತಂತ್ರ ಸರ್ಕಾರ ನೀಡಿ. ನಾನು 'ರಾಮರಾಜ್ಯ' ಕೊಡಲಿಲ್ಲ ಅಂದರೆ ಜೆಡಿಎಸ್ ವಿಸರ್ಜನೆ ಮಾಡಿ ಹೋಗುತ್ತೇನೆ. ಇನ್ನು ಮುಂದೆ ನಾನು ನಿಮ್ಮ ಮುಂದೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಬನ್ನೂರಿನಲ್ಲಿ ಭಾನುವಾರ ರಾತ್ರಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಣ್ಣ ಸಣ್ಣ ಮಕ್ಕಳ ಹೃದಯದಲ್ಲಿ ಧರ್ಮದ ಹೆಸರಿನ ಕಿಚ್ಚನ್ನು ಹಚ್ಚುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಭೆಯಲ್ಲಿ ಹಿಂದೂ ಮುಸ್ಲಿಮರು ಒಟ್ಟಿಗೆ ಇದ್ದೇವೆ. ಒಟ್ಟಿಗೆ ಗಾಳಿಯಲ್ಲಿ ಉಸಿರಾಡುತ್ತಿದ್ದೇವೆ. ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದಾರೆ. ಬಿಜೆಪಿಯವರು ಇದಕ್ಕೆ ಬೆಂಕಿ ಹಚ್ಚಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಬ್ಬ ಮುಸಲ್ಮಾನ ಸಮಾಜದವರು ಕಲ್ಲಂಗಡಿ ವ್ಯಾಪಾರ ಮಾಡುವಾಗ ಕೇಸರಿ ಶಾಲು ಹಾಕಿರುವ ಯುವಕರ ಗುಂಪೊಂದು ದಾಳಿ ಮಾಡಿ ಹಣ್ಣನ್ನು ನಾಶಮಾಡುತ್ತಾರೆ. ಇದು ರೈತ ಬೆಳೆದ ಬೆಳೆ ಕಲ್ಲಂಗಡಿ. ಹಣ್ಣುಗಳಿಗೆ ಧರ್ಮ ಇದ್ಯಾ? ಎಂದು ಪ್ರಶ್ನಿಸಿದರು.
ವಿಷ ಬೀಜ ಬಿತ್ತುವುದೇ ಬಿಜೆಪಿಯವರ ಸಾಧನೆ:ಒಂದು ವರ್ಷ ಚುನಾವಣೆ ಇರುವಾಗಲೇ ಬಿಜೆಪಿಯವರು ಶುರು ಮಾಡಿದ್ದಾರೆ. ಅವರು ಹಲಾಲ್ ಕಟ್ ಮಾಂಸ ತಿನ್ನಬೇಡಿ, ಮುಸ್ಲಿಂ ಆಟೋ ಹತ್ತಬೇಡಿ ಎಂದು ಹೇಳುತ್ತಾರೆ. ನಾವು ಹಿಂದೂ ರಾಷ್ಟ್ರ ಮಾಡುತ್ತೇವೆ ಅಂತಾ ಹೇಳ್ತಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಒಬ್ಬ ಯುವಕನ ಹತ್ಯೆಯಾಗುತ್ತದೆ. ಗೃಹ ಸಚಿವರು ಹತ್ಯೆಯಾದ ಯುವಕ ದಲಿತ ಯುವಕ ಎಂದು ಹೇಳುತ್ತಾರೆ. ಈ ಮೂರು ವರ್ಷದಲ್ಲಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವುದೇ ಬಿಜೆಪಿಯವರ ಸಾಧನೆಯಾಗಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.