ಮೈಸೂರು:ಸನ್ನಡತೆ ಆಧಾರದ ಮೇಲೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಮಾಫಿ ಸೇರಿದಂತೆ 14 ವರ್ಷ ಶಿಕ್ಷೆ ಪೂರೈಸಿದ 12 ಮಂದಿ ಕೈದಿಗಳಿಗೆ ಗುರುವಾರ ಬಿಡುಗಡೆ ಭಾಗ್ಯ ದೊರಕಿದೆ.
ಹನುಮನಾಳು ಗ್ರಾಮದ ವೆಂಕಟೇಶ್, ತಲಕಾಡು ಅರುಂಧತಿನಗರದ ಚಂದ್ರ, ಪಿರಿಯಾಪಟ್ಟಣದ ಬಿ.ಪಿ.ರಜಾಕ್, ತಮ್ಮಡಹಳ್ಳಿ ಗ್ರಾಮದ ಮಹದೇವ, ಆವರ್ತಿ ಗ್ರಾಮದ ಹೇಮಂತ, ಕೆ.ಆರ್.ಪೇಟೆ ತಾಲೂಕು ಐಚನಹಳ್ಳಿ ಗ್ರಾಮದ ಸುರೇಶ್, ಕೊಳ್ಳೇಗಾಲ ತಾಲೂಕು ಕನ್ನೂರು ಗ್ರಾಮದ ಆನಂದ, ಹುಲ್ಲಹಳ್ಳಿಯ ಮಹದೇವನಾಯ್ಕ, ಮಂಡಿ ಮೊಹಲ್ಲಾದ ಮನೋಹರ, ಕೈಲಾಸಪುರಂನ ಅಫ್ರೋಜ್ ಪಾಷಾ, ವಿದ್ಯಾರಣ್ಯಪುರಂನ ರಂಗಸ್ವಾಮಿ, ತಿ.ನರಸೀಪುರ ತಾಲೂಕಿನ ಬೇವಿನಹಳ್ಳಿ ಗ್ರಾಮದ ಶಿವಪ್ರಕಾಶ್ ಬಿಡುಗಡೆಯಾಗಿದ್ದಾರೆ.
ಸನ್ನಡತೆ ಆಧಾರದ ಮೇಲೆ 12 ಕೈದಿಗಳು ಬಿಡುಗಡೆ ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಮಾತನಾಡಿ, ಯಾವುದೋ ಸಂದರ್ಭದಲ್ಲಿ ಆದ ಕೆಟ್ಟ ಘಟನೆಯಿಂದಾಗಿ ಕಾನೂನು ಶಿಕ್ಷೆ ಅನುಭವಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ ಸನ್ನಡತೆ ಆಧಾರದ ಮೇಲೆ 12 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಕಾರಾಗೃಹದಲ್ಲಿ ಅವರನ್ನು ನಂಬರಿನಿಂದ ಕರೆಯುತ್ತಿದ್ದರು. ಇದೀಗ ಅವರನ್ನು ಹೆಸರಿನಿಂದ ಕರೆಯುತ್ತಾರೆ. ಇನ್ನು ಮುಂದೆ ಅವರು ಸಮಾಜಕ್ಕೆ ಮಾದರಿ ನಾಗರಿಕರಾಗಿ ಬದುಕಬೇಕು ಎಂದು ತಿಳಿಸಿದರು.
ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಮಾತನಾಡಿ, ಬಿಡುಗಡೆಗೊಂಡವರಲ್ಲಿ ಇಬ್ಬರ ಹೆಸರನ್ನು ಸರ್ಕಾರ ವಿವಿಧ ಕಾರಣಗಳಿಗಾಗಿ 7 ಬಾರಿ ತಿರಸ್ಕರಿಸಿತ್ತು. ಕೊನೆಗೂ ಅವರಿಗೆ ಬಿಡುಗಡೆ ಭಾಗ್ಯ ದೊರೆತಿದೆ. ಗುರುವಾರ ಬಿಡುಗಡೆಯಾದವರು ಇತರರಿಗೆ ಮಾದರಿಯಾಗಬೇಕು. ಕಾರಾಗೃಹದಲ್ಲಿರುವವರು ಇವರನ್ನು ನೋಡಿ ಪ್ರೇರಿತರಾಗಿ ಉತ್ತಮ ನಡತೆಯ ಆಧಾರದಲ್ಲಿ ಬಿಡುಗಡೆಯಾಗಬೇಕು ಎಂದರು.
ಓದಿ:ಉಡುಪಿ: ಕಟ್ಟೆ ಭೋಜಣ್ಣ ಆತ್ಮಹತ್ಯೆ ಹಿಂದಿದೆ ₹9 ಕೋಟಿ ಸಾಲದ ಕಥೆ.. ಡೆತ್ನೋಟ್ನಲ್ಲಿ ಬಹಿರಂಗ