ಕರ್ನಾಟಕ

karnataka

ETV Bharat / city

ರೈಲಿನಲ್ಲಿ‌ ಅನ್ ರೀಚೆಬಲ್ ಆದ ಬಾಲಕ: ತಂದೆಯ ಗಾಬರಿಯ ಟ್ವೀಟ್​ಗೆ ತುರ್ತು ಸ್ಪಂದಿಸಿದ ರೈಲ್ವೆ ಸಚಿವಾಲಯ

ಪುತ್ರನನ್ನು ಸಂಪರ್ಕಿಸಿಕೊಡಿ ಎಂಬ ತಂದೆಯ ಗಾಬರಿಯ ಟ್ವೀಟ್​ಗೆ ರೈಲ್ವೆ ಸಚಿವಾಲಯ ತುರ್ತಾಗಿ ಸ್ಪಂದಿಸಿದೆ. ರೈಲ್ವೆ ಸಚಿವಾಲಯದ ತುರ್ತು ಸ್ಪಂದನೆಗೆ ಬಾಲಕನ ತಂದೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

By

Published : Apr 21, 2022, 1:07 PM IST

Updated : Apr 21, 2022, 1:13 PM IST

The Ministry of Railways responded to man's tweet
ಮಗನ ಬಗ್ಗೆ ತಂದೆಯ ಗಾಬರಿಯ ಟ್ವೀಟ್​: ರೈಲ್ವೆ ಸಚಿವಾಲಯದ ತುರ್ತು ಸ್ಪಂದನೆಗೆ ಶ್ಲಾಘನೆ

ಮಂಗಳೂರು(ದಕ್ಷಿಣ ಕನ್ನಡ): ಮೊದಲ ಬಾರಿಗೆ ಏಕಾಂಗಿಯಾಗಿ ರೈಲು ಪ್ರಯಾಣ ಮಾಡಿರುವ ಬಾಲಕನೋರ್ವನು ಅನ್ ರಿಚೆಬಲ್ ಆಗಿರುವುದರಿಂದ ಗಾಬರಿಗೊಂಡ ಆತನ ತಂದೆಯು ಸಹಾಯ ಕೋರಿ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿರುವ ಘಟನೆಯೊಂದು ನಡೆದಿದೆ. ಈ ಟ್ವೀಟ್​ಗೆ ತಕ್ಷಣ ಸ್ಪಂದಿಸಿರುವ ರೈಲ್ವೆ ಸಚಿವಾಲಯವು ಟ್ವೀಟ್ ಮಾಡಿದ 34 ನಿಮಿಷಗಳ ಒಳಗಾಗಿ ಪುತ್ರನಿಂದ ತಂದೆಗೆ ಕರೆ ಮಾಡಿಸಿದೆ. ರೈಲ್ವೆ ಸಚಿವಾಲಯದ ತುರ್ತು ಸ್ಪಂದನೆಗೆ ಬಾಲಕನ ತಂದೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕಿಶನ್ ರಾವ್ ಪುತ್ರ ಶಂತನು

ಆಟೊಮೊಬೈಲ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಕಿಶನ್ ರಾವ್ ಎಂಬುವವರ ಪುತ್ರ ಶಂತನು ಏ.19ರಂದು ಏಕಾಂಗಿಯಾಗಿ ಮಂಗಳೂರಿನಿಂದ ಕೊಟ್ಟಾಯಂಗೆ ರೈಲು ಪ್ರಯಾಣ ಮಾಡಿದ್ದಾನೆ. 16 ವರ್ಷದ ಶಂತನು ಈ ಬಾರಿ ಎಸ್ಎಸ್ಎಲ್​ಸಿ ಪರೀಕ್ಷೆ ಬರೆದು ರಿಸಲ್ಟ್ ನಿರೀಕ್ಷೆಯಲ್ಲಿದ್ದನು. ಪರೀಕ್ಷೆ ಬರೆದು ಮುಗಿಸಿರುವ ಹುಮ್ಮಸ್ಸಿನಲ್ಲಿದ್ದ ಬಾಲಕ ಕೇರಳದ ಕೊಟ್ಟಾಯಂನಲ್ಲಿರುವ ತನ್ನ ತಾತನ ಮನೆಗೆ ಹೋಗಲು ಬಯಸಿದ್ದನು‌. ಆದರೆ ಹೆತ್ತವರಿಗೆ ಜೊತೆಗೆ ಹೋಗಲು ಅನಾನುಕೂಲವಾದ್ದರಿಂದ ಬಾಲಕ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾನೆ. ಈ ರೀತಿಯಲ್ಲಿ ಶಂತನು ಏಕಾಂಗಿಯಾಗಿ ಇದೇ ಮೊದಲ ಬಾರಿಗೆ ರೈಲು ಪ್ರಯಾಣ ಬೆಳೆಸಿದ್ದನಂತೆ.

ಕಿಶನ್ ರಾವ್ ಅವರು ಏ.19ರಂದು ಬೆಳ್ಳಂಬೆಳಗ್ಗೆ 5ಗಂಟೆ ಸುಮಾರಿಗೆ ತಮ್ಮ ಪುತ್ರ ಶಂತನುವನ್ನು ಮಂಗಳೂರು ಸೆಂಟ್ರಲ್ ಸ್ಟೇಷನ್​ನಲ್ಲಿ ರೈಲು ಹತ್ತಿಸಿದ್ದಾರೆ‌. ಪರಶುರಾಮ ಎಕ್ಸ್‌ಪ್ರೆಸ್‌ ಎರ್ನಾಕುಲಂ ಹಾಗೂ ಕೊಟ್ಟಾಯಂ ನಡುವಿನ ಪಿರವಂ ಎಂಬಲ್ಲಿನ ರೈಲು ನಿಲ್ದಾಣವನ್ನು ಮಧ್ಯಾಹ್ನ 2.30ಗೆ ತಲುಪಬೇಕಿತ್ತು. ಅಲ್ಲಿ ಶಂತನುವನ್ನು ಆತನ ಸೋದರ ಸಂಬಂಧಿಗಳು ಬರಮಾಡಿಕೊಳ್ಳಬೇಕಿತ್ತು.

ಮಗನ ಬಗ್ಗೆ ತಂದೆಯ ಗಾಬರಿಯ ಟ್ವೀಟ್

ಆದರೆ ಶಂತನು ಏಕಾಂಗಿಯಾಗಿ ಪ್ರಯಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಗೆ ಇರಲಿ ಎಂದು ಕಿಶನ್ ರಾವ್ ದಂಪತಿ ‌ಆತನಿಗೆ ಮೊಬೈಲ್ ಫೋನ್ ಅನ್ನು ನೀಡಿದ್ದರು‌. ಕಿಶನ್ ರಾವ್ ಅವರು ಪುತ್ರನನ್ನು ಪರೀಕ್ಷಿಸಲೆಂದು ಬೆಳಗ್ಗೆ 10ಗಂಟೆ ಸುಮಾರಿಗೆ ಕರೆ ಮಾಡಿದ್ದಾರೆ. ಆದರೆ ಆತನ ಫೋನ್ ಸ್ವಿಚ್ ಆಫ್ ಆಗಿತ್ತು‌. ಮತ್ತೆ ಮತ್ತೆ ಪ್ರಯತ್ನಿಸಿದರೂ ಫೋನ್ ಸ್ವಿಚ್ ಆಫ್ ಎಂದೇ ಬರುತ್ತಿತ್ತು. ಪರಿಣಾಮ ಗಾಬರಿಗೊಳಗಾದ ಕಿಶನ್ ರಾವ್ ಅನ್ಯ ಮಾರ್ಗವಿಲ್ಲದೇ ಆತನ ರೈಲ್ವೆ ಟಿಕೆಟ್ ನಂಬರ್ ಸಹಿತ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಷವ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಆದರೆ ಟ್ವೀಟ್ ಮಾಡಿದ ಕೇವಲ 34 ನಿಮಿಷದಲ್ಲಿಯೇ ಪುತ್ರ ಶಂತನು ತಾನು ಸುರಕ್ಷಿತವಾಗಿರುವುದಾಗಿ ತಂದೆಗೆ ಕರೆ ಮಾಡಿದ್ದಾನೆ. ಈ ಮೂಲಕ ತಂದೆಯ ಗಾಬರಿಯ ಟ್ವೀಟ್​ಗೆ ರೈಲ್ವೆ ಸಚಿವಾಲಯ ತುರ್ತು ಸ್ಪಂದಿಸಿದೆ‌.

ಇದನ್ನೂ ಓದಿ:ನಾವೆಲ್ಲರೂ ಒಂದೇ ತಾಯಿಯ ಮಕ್ಕಳು.. ಶಾಂತಿ ಸೌಹಾರ್ದತೆಯಿಂದ ಬದುಕೋಣ: ಅಬ್ದುಲ್​ ಅಜೀಮ್​

ರೈಲ್ವೆ ಸಚಿವಾಲಯ ತಂದೆಯ ಗಾಬರಿಗೆ ಸ್ಪಂದಿಸಿ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ಬಾಲಕ ಶಂತನು ಪ್ರಯಾಣಿಸುತ್ತಿದ್ದ ರೈಲಿಗೆ ಬಂದು ಪರಿಶೀಲನೆ ನಡೆಸಿದ್ದಾರೆ‌. ಬಳಿಕ ಆತನ ಇರುವಿಕೆಯನ್ನು ಸ್ಪಷ್ಟಪಡಿಸಿದ ರೈಲ್ವೆ ಪೊಲೀಸರು ತಕ್ಷಣ ತಂದೆ ಕಿಶನ್ ರಾವ್ ಅವರಿಗೆ ಕರೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಬೆಳಗ್ಗೆ 11.08ರ ಸುಮಾರಿಗೆ ತಂದೆ ಕಿಶನ್ ರಾವ್ ಅವರಿಗೆ ಕರೆ ಮಾಡಿದ ಶಂತನು 'ತಾನು ರೈಲಿನಲ್ಲಿ ನಿದ್ರೆಗೆ ಜಾರಿದ್ದೆ. ಅಚಾನಕ್ಕಾಗಿ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು. ಯಾವುದೇ ತೊಂದರೆ ಇಲ್ಲದೇ ಆರಾಮಾಗಿದ್ದೇನೆ' ಎಂದು ಹೇಳಿದ್ದಾನೆ. ಕಿಶನ್ ರಾವ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಪೊಲೀಸರ ಕಾರ್ಯಕ್ಕೆ ಹಾಗೂ ತುರ್ತು ಸ್ಪಂದನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Last Updated : Apr 21, 2022, 1:13 PM IST

ABOUT THE AUTHOR

...view details