ಕರ್ನಾಟಕ

karnataka

By

Published : Apr 22, 2022, 4:26 PM IST

Updated : Apr 22, 2022, 4:35 PM IST

ETV Bharat / city

ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆಯಲಿರುವ ದಿವ್ಯಾಂಗ ವಿದ್ಯಾರ್ಥಿ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾಳೆ ನಡೆಯುವ 40ನೇ ಘಟಿಕೋತ್ಸವದಲ್ಲಿ ದಿವ್ಯಾಂಗ ವಿದ್ಯಾರ್ಥಿ ಅನ್ವಿತ್ ಜಿ ಕುಮಾರ್ ಅವರು ರಾಜ್ಯಪಾಲರಿಂದ ಗೋಲ್ಡ್ ಮೆಡಲ್ ಪಡೆದುಕೊಳ್ಳಲಿದ್ದಾರೆ.

specially abled student anvith will get gold medal in Mangalore university
ದಿವ್ಯಾಂಗ ವಿದ್ಯಾರ್ಥಿ ಅನ್ವಿತ್ ಜಿ ಕುಮಾರ್ ಸಾಧನೆ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಕುಂಪಲದ ಚಿತ್ರಾಂಜಲಿ ನಗರದ ದಿವ್ಯಾಂಗ ವಿದ್ಯಾರ್ಥಿ ಅನ್ವಿತ್.ಜಿ ಕುಮಾರ್ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ದೃಷ್ಟಿ ಸಮಸ್ಯೆ ಹೊಂದಿರುವ ಅನ್ವಿತ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೊಲಿಟಿಕಲ್ ಸೈನ್ಸ್​ನಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿದ್ದು, ಶೇ.82ರಷ್ಟು ಅಂಕ ಪಡೆದಿದ್ದಾರೆ. ಈ ಮೂಲಕ ವಿಶ್ವವಿದ್ಯಾನಿಲಯದಲ್ಲಿ ಅತ್ಯಧಿಕ ಅಂಕ ಪಡೆದ ಮೊದಲ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.


6ನೇ ತರಗತಿಯಲ್ಲಿರುವಾಗ ( 12ನೇ ವಯಸ್ಸಿನಲ್ಲಿ) ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡ ಅನ್ವಿತ್‌ಗೆ ತಾಯಿಯೇ ಎರಡು ಕಣ್ಣುಗಳಂತೆ ಕೆಲಸ ಮಾಡಿದ್ದಾರಂತೆ. ಬಾಲ್ಯದಲ್ಲಿಯೇ ವಿದ್ಯೆಗೆ ಪ್ರೋತ್ಸಾಹಿಸುತ್ತಿದ್ದ ತಾಯಿಯ ಕಾರಣದಿಂದಲೇ ಪ್ರತಿ ತರಗತಿಯಲ್ಲಿಯೂ ಅತ್ಯುತ್ತಮ ಅಂಕ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಎಸ್​ಎಸ್​ಎಲ್​ಸಿವರೆಗೆ ಬ್ರೈಲ್ ಲಿಪಿಯಲ್ಲಿ ಶಿಕ್ಷಣ ಪಡೆದ ಬಳಿಕ ಸಾಮಾನ್ಯರಂತೆ ಶಿಕ್ಷಣ ಪಡೆದಿದ್ದಾರೆ. ಇವರಿಗೆ ಕಲಿಕೆಯಲ್ಲಿ ಸಹಪಾಠಿಗಳು ಸಹ ಸಾಕಷ್ಟು ಸಹಕಾರ ನೀಡಿದ್ದಾರೆ. ಪರೀಕ್ಷೆಯನ್ನು ಸಹಾಯಕರ ನೆರವಿನಲ್ಲಿ ಬರೆದು ಸಾಧನೆ ಮಾಡಿದ್ದಾರೆ. ಎಸ್​ಎಸ್​ಎಲ್​ಸಿಯಲ್ಲಿ 87%, ಪಿಯುಸಿಯಲ್ಲಿ 88.1%, ಬಿಎ ಪದವಿಯಲ್ಲಿ 89% ಪಡೆದ ಅನ್ವಿತ್ ಇದೀಗ ಎಂಎ ಸ್ನಾತಕೋತ್ತರ ಪದವಿಯಲ್ಲಿ 82% ಅಂಕ ಪಡೆದಿದ್ದಾರೆ. ಬಿಎಯಲ್ಲಿಯೂ ಗೋಲ್ಡ್ ಮೆಡಲ್ ಪಡೆದಿರುವ ಅನ್ವಿತ್ ಇದೀಗ ಎಂಎಯಲ್ಲಿಯೂ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದು, ಕಾಲೇಜು ಉಪನ್ಯಾಸಕನಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಗೋ ಉತ್ಪನ್ನಗಳ ಜೊತೆಗೆ ಉಪ ಉತ್ಪನ್ನಗಳ ತಯಾರಿಕೆಗೆ ರಾಜ್ಯ ಸರ್ಕಾರ ಒತ್ತು

Last Updated : Apr 22, 2022, 4:35 PM IST

ABOUT THE AUTHOR

...view details