ಮಂಗಳೂರು :ಡಿ ಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಮೊಹಮ್ಮದ್ ನಲಪಾಡ್ ನೀಡಿರುವ ಹೇಳಿಕೆ ಬಾಯ್ತಪ್ಪಿ ಬಂದಿರಬಹುದು. ಮುಂದಿನ ಸಿಎಂ ಯಾರು ಎಂದು ಹೇಳುವುದು ಯುವ ಕಾಂಗ್ರೆಸ್ ಕೆಲಸವಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಲಪಾಡ್ ಅವರ ಹೇಳಿಕೆ ಬಾಯ್ತಪ್ಪಿ ಬಂದಿರಬಹುದು. ಯುವ ಕಾಂಗ್ರೆಸ್ನ ಮುಖ್ಯ ಕಾರ್ಯ ಪಕ್ಷವನ್ನು ಸಂಘಟಿಸುವುದು. ನಾಯಕರುಗಳಿಗೆ ಬೆಂಬಲವಾಗಿ ನಿಲ್ಲುವುದು. ಇದು ನಮ್ಮ ಜವಾಬ್ದಾರಿ. ಯಾರು ಮುಖ್ಯಮಂತ್ರಿ ಎಂಬುದನ್ನು ಯುವ ಕಾಂಗ್ರೆಸ್ನವರು, ಹಿರಿಯ ನಾಯಕರು ಹೇಳುವಂತಿಲ್ಲ. ನಲಪಾಡ್ ತಪ್ಪಿ ಹೇಳಿರಬೇಕು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಒಂದು ತಿಂಗಳು ಕೊಟ್ಟರೂ, ಆರು ತಿಂಗಳು ಕೊಟ್ಟರೂ, ಒಂದು ವರ್ಷ ಕೊಟ್ಟರು ಮಾಡುತ್ತೇನೆ.
ನನ್ನ ಮತ್ತು ನಲಪಾಡ್ ಮಧ್ಯೆ 12 ವರ್ಷದ ಗೆಳೆತನವಿದೆ. ಇನ್ನೂ 25 ವರ್ಷ ಮುಂದುವರಿಯುತ್ತದೆ. ಬಣಗಳು ಆಗಬಹುದು, ಯಾವುದೇ ಸಮಸ್ಯೆಗಳು ಇಲ್ಲ. ಅಧಿಕಾರ ಹಂಚುತ್ತಿರುವುದರಿಂದ ನಾನು ಅಧಿಕಾರ ಪಡೆದೆ, ನಲಪಾಡ್ ಕೂಡ ಪಡೆಯುತ್ತಾರೆ. ಪ್ರತಿಯೊಬ್ಬರಿಗೂ ಅವಕಾಶ ಸಿಗುವಂತಾಗುತ್ತದೆ. ಮುಂದೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವರ್ಷಕ್ಕೊಬ್ಬರಂತೆ ಕೊಡುವ ಮೂಲಕ ಎಲ್ಲರಿಗೂ ಅವಕಾಶ ಸಿಗುವಂತೆ ಮಾಡಬೇಕು ಎಂದರು.