ಮಂಗಳೂರು:ಎಂಆರ್ಪಿಎಲ್ ಸಂಸ್ಥೆಯು ತಣ್ಣೀರುಬಾವಿ ಕಡಲತೀರದಲ್ಲಿ ನಿರ್ಮಿಸುತ್ತಿರುವ ಸಿಹಿನೀರಿನ ಘಟಕಕ್ಕೆ ಸಮುದ್ರದ ನೀರು ನುಗ್ಗಿದ್ದು, ಸ್ಥಳೀಯ ಮೂರು ಮನೆಗಳು ಅಪಾಯದ ಅಂಚಿನಲ್ಲಿವೆ. ಹೀಗಾಗಿ ಸ್ಥಳಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ ಅಧಿಕಾರಿಗಳು ಕೈಗೊಂಡ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸಿಹಿನೀರು ಘಟಕಕ್ಕೆ ನುಗ್ಗಿದ ಸಮುದ್ರ ನೀರು; ಶಾಸಕ ಡಾ. ಭರತ್ ಶೆಟ್ಟಿ ಪರಿಶೀಲನೆ - ಎಂಆರ್ಪಿಎಲ್ ಸಂಸ್ಥೆ
ಎಂಆರ್ಪಿಎಲ್ ಸಂಸ್ಥೆಯು ತಣ್ಣೀರುಬಾವಿ ಕಡಲತೀರದಲ್ಲಿ ನಿರ್ಮಿಸುತ್ತಿರುವ ಸಿಹಿನೀರಿನ ಘಟಕಕ್ಕೆ ಸಮುದ್ರದ ನೀರು ನುಗ್ಗಿದ್ದು, ಸ್ಥಳಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
![ಸಿಹಿನೀರು ಘಟಕಕ್ಕೆ ನುಗ್ಗಿದ ಸಮುದ್ರ ನೀರು; ಶಾಸಕ ಡಾ. ಭರತ್ ಶೆಟ್ಟಿ ಪರಿಶೀಲನೆ MLA Dr. Bharat Shetty visit To Tannirbhavi beach](https://etvbharatimages.akamaized.net/etvbharat/prod-images/768-512-8334186-942-8334186-1596809680204.jpg)
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸಮುದ್ರ ನೀರು ಉಕ್ಕೇರಿದ್ದು, ಕಡಲ್ಕೊರೆತ ಉಂಟಾಗುತ್ತಿದೆ. ಹೀಗಾಗಿ, ಸಮುದ್ರದಂಚಿನಲ್ಲಿ ನಿರ್ಮಾಣವಾಗುತ್ತಿರುವ ಸಿಹಿ ನೀರಿನ ಘಟಕದ ಒಂದು ಬದಿಯಲ್ಲಿ ನೀರು ನುಗ್ಗಿದೆ. ಇದೀಗ ತಡೆಗೋಡೆಗೆ ಅಪಾಯವಿದ್ದು, ಅದರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಿದೆ. ಸ್ಥಳೀಯ ಮನೆಗಳ ಬಳಿಯಿರುವ ತಡೆಗೋಡೆಯನ್ನು ಭದ್ರಗೊಳಿಸಲು ಸೂಚಿಸಲಾಗಿದೆ ಎಂದರು.
ಇನ್ನು, ಅಪಾಯದ ಕುರಿತು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಲಾಗಿದ್ದು, ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಲಾಗಿದೆ. ಪಣಂಬೂರು, ಚಿತ್ರಾಪುರ ಸುತ್ತಮುತ್ತ ಕಡಲ್ಕೊರೆತ ತಡೆಗೆ ಕ್ರಮ ಕೈಗೊಳ್ಳುವ ಕುರಿತು ಕಂದಾಯ ಸಚಿವ ಆರ್. ಅಶೋಕ್ ಹಾಗೂ ನಾನು ಶನಿವಾರ ಭೇಟಿ ನೀಡಿ, ತುರ್ತುಕ್ರಮ ಕೈಗೊಳ್ಳುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.