ಕರ್ನಾಟಕ

karnataka

ETV Bharat / city

ಗೋವಾಕ್ಕೆ ತೆರಳಿ ರಕ್ತದಾನ... ರೋಗಿ ಪ್ರಾಣ ಉಳಿಸಿತು ಮಂಗಳೂರು ಯುವಕರ ತಂಡ...!

'ಬ್ಲಡ್ ಡೋನರ್ಸ್ ಮಂಗಳೂರು' ತಂಡದ ಯುವಕರ ತಂಡವೊಂದು ಮಂಗಳೂರಿನಿಂದ ಗೋವಾಕ್ಕೆ ರೈಲಿನಲ್ಲಿ ತೆರಳಿ ರಕ್ತದಾನ ಮಾಡುವ ಮೂಲಕ ಓರ್ವ ರೋಗಿಯ ಜೀವವನ್ನು ಉಳಿಸಿ ಬಂದಿದ್ದಾರೆ. ಇವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳೂರು ಯುವಕರು

By

Published : Sep 8, 2019, 9:43 AM IST

ಮಂಗಳೂರು: ರಕ್ತದಾನ ಶ್ರೇಷ್ಠ ದಾನ, ಇಂದು ಎಲ್ಲೆಡೆ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಹಾಗಾಗಿ ಇಲ್ಲಿನ ಯುವಕರ ತಂಡವೊಂದು ಎಲ್ಲರೂ ಮೆಚ್ಚುವಂತ ಮಾನವೀಯ ಕಾರ್ಯವೊಂದರ ಮೂಲಕ ಗಮನ ಸೆಳೆದಿದೆ.

ಮಂಗಳೂರಿನ ಯುವಕರ ಈ ತಂಡ ಬರೋಬ್ಬರಿ 350 ಕಿ.ಮೀ. ದೂರ ಪ್ರಯಾಣ ಬೆಳೆಸಿ, ರಕ್ತದಾನ ಮಾಡುವ ಮೂಲಕ ರೋಗಿಯ ಜೀವವನ್ನು ಉಳಿಸಿದ್ದಾರೆ.

ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯನಿರ್ವಾಹಕ ಅಬ್ದುಲ್ ರಝಾಕ್ ಸಾಲ್ಮರ

'ಬ್ಲಡ್ ಡೋನರ್ಸ್ ಮಂಗಳೂರು' (ಬಿಡಿಎಂ) ತಂಡದ ಅಝರ್ ವಿಟ್ಲ, ಜಾವೇದ್ ಕುತ್ತಾರ್ ಹಾಗೂ ರಮೇಶ್ ಕಾಸರಗೋಡು ಮಾಹಿಪಾಡಿ ಎಂಬ ಯುವಕರು ಮಂಗಳೂರಿನಿಂದ ಗೋವಾಕ್ಕೆ ರೈಲಿನಲ್ಲಿ ತೆರಳಿ ರಕ್ತದಾನ ಮಾಡಿ ಬಂದವರು.

ಸೆಪ್ಟಂಬರ್ 4 ರಂದು ಗೋವಾದ ಬಾಂಬೊಲಿಮ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ ಖಾದರ್ ಎಂಬ ವ್ಯಕ್ತಿಗೆ ಮೂರು ಯುನಿಟ್ ಎ ನೆಗೆಟಿವ್ ತುರ್ತು ರಕ್ತದ ಅಗತ್ಯವಿತ್ತು. ಈ ಗ್ರೂಪ್ ರಕ್ತ ಗೋವಾದಲ್ಲೆಲ್ಲೂ ಲಭ್ಯವಾಗಿರಲಿಲ್ಲ. ಒಂದಿಬ್ಬರು ರಕ್ತದಾನ ಮಾಡಲು ಬಂದರೂ ಮದ್ಯಪಾನ ಮಾಡಿದ ಕಾರಣ ಅವರ ರಕ್ತ ಸ್ವೀಕೃತವಾಗಿರಲಿಲ್ಲ. ಈ ಬಗ್ಗೆ ಬಿಡಿಎಂ ತಂಡಕ್ಕೆ ವಾಟ್ಸ್ಯಾಪ್ ಮೂಲಕ ಮಾಹಿತಿ ಸಿಕ್ಕಿತ್ತು. ತಕ್ಷಣ ತಂಡ ಮೂವರನ್ನು ಗೋವಾಕ್ಕೆ ಕಳುಹಿಸಿಕೊಟ್ಟಿದ್ದು, ಈ ಮೂವರೂ ರಕ್ತ ನೀಡಿ ಅಂದೇ ಮಂಗಳೂರಿಗೆ ಹಿಂದಿರುಗಿದ್ದರು. ಸದ್ದಿಲ್ಲದೆ ಈ ರೀತಿಯಲ್ಲಿ ರಕ್ತದಾನ ಮಾಡುವ ಕಾರ್ಯದಲ್ಲಿ ತೊಡಗಿರುವ ಈ ಯುವಕರ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ನೆರೆ ಸಂತ್ರಸ್ತರಿಗೆ ಬಿಡಿಎಂ ತಂಡದ ವತಿಯಿಂದ ಪರಿಹಾರ ಸಾಮಗ್ರಿ ವಿತರಣೆ

ಈ ಬಗ್ಗೆ ಮಾತನಾಡಿರುವ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯನಿರ್ವಾಹಕ ಅಬ್ದುಲ್ ರಝಾಕ್ ಸಾಲ್ಮರ ಅವರು, ಕಳೆದ ಆರು ವರ್ಷಗಳಿಂದ ರಕ್ತದಾನದಲ್ಲಿ ನಮ್ಮ ತಂಡ ತೊಡಗಿದ್ದು, ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲದೆ ಕರ್ನಾಟಕ ಹಾಗೂ ಹೊರ ರಾಷ್ಟ್ರಗಳಲ್ಲೂ ಸಕ್ರಿಯವಾಗಿದೆ. ರಕ್ತದಾನಕ್ಕಾಗಿ ನಾವು 'ಬ್ಲಡ್ ಡೋನರ್ಸ್ ಮಂಗಳೂರು' ಎಂಬ ವಾಟ್ಸ್ಯಾಪ್ ಗ್ರೂಪ್ ಕೂಡ ರಚಿಸಿದ್ದು, ಇಂದು ಈ ಗ್ರೂಪ್​​ ಹಲವು ವಿಭಾಗಗಳಾಗಿ ಸುಮಾರು 40 ತಂಡಗಳಾಗಿವೆ. ಈ ಗ್ರೂಪ್​ಗಳನ್ನು ನಿರ್ವಹಿಸಲು 50 ಮಂದಿ ಅಡ್ಮಿನ್​ಗಳಿದ್ದು, ಸುಮಾರು 5000 ಸದಸ್ಯರಿದ್ದೇವೆ. ಈ ಮೂಲಕ ಬೇಡಿಕೆ ಇರುವೆಡೆ ರಕ್ತದಾನ ಮಾಡಲು ಅವಿರತ ಶ್ರಮ ವಹಿಸುತ್ತಿದ್ದೇವೆ. ಕಳೆದ ಆರು ವರ್ಷಗಳಲ್ಲಿ ಸುಮಾರು ನಮ್ಮ ತಂಡ 19 ಸಾವಿರ ಯೂನಿಟ್​ಗೂ ಅಧಿಕ ರಕ್ತದಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು.

ನೆರೆ ಸಂತ್ರಸ್ತರಿಗೆ ಬಿಡಿಎಂ ತಂಡದಿಂದ ಪರಿಹಾರ ಸಾಮಗ್ರಿ ವಿತರಣೆ

ಇನ್ನು ಈ ತಂಡದಿಂದ ರಕ್ತದಾನ ಮಾತ್ರವಲ್ಲದೆ ಕಳೆದ ವರ್ಷ ಕೇರಳ ಮತ್ತು ಕೊಡಗಿನಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ಸುಮಾರು 25 ಲಕ್ಷ ರೂ. ಪರಿಹಾರ ಸಾಮಗ್ರಿಗಳನ್ನು ನೀಡಲಾಗಿದೆ. ಈ ಬಾರಿ ಭೀಕರ ಪ್ರವಾಹ ಬಂದಿರುವ ಬೆಳಗಾವಿಯ ಸಂತ್ರಸ್ತರಿಗೆ ದಿನನಿತ್ಯದ ಬೇಡಿಕೆಯ 10 ಲಕ್ಷ ರೂ‌. ಪರಿಹಾರ ಸಾಮಗ್ರಿಗಳನ್ನು ನೀಡಿರುವುದಾಗಿ ಅಬ್ದುಲ್​ ರಝಾಕ್​ ತಿಳಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಪುತ್ರ ಮೃನಾಲ್ ಹೆಬ್ಬಾಳ್ಕರ್ ಅವರ ಮುತುವರ್ಜಿಯಿಂದ ನಾವು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಸಾಧ್ಯವಾಯಿತು. ಅಲ್ಲದೆ ದ.ಕ. ಜಿಲ್ಲೆಯ ಬೆಳ್ತಂಗಡಿ, ಕಿಲ್ಲೂರು, ಕಾಜೂರು ಪರಿಸರದ ನೆರೆ ಸಂತ್ರಸ್ತರಿಗೂ ಇದೇ ರೀತಿಯಲ್ಲಿ ಪರಿಹಾರ ಸಾಮಗ್ರಿಗಳನ್ನು ನೀಡಿದ್ದೇವೆ ಎಂದು ತಂಡ ಕಾರ್ಯ ನಿರ್ವಾಹಕ ರಝಾಕ್ ತಮ್ಮ ಮಾನವೀಯ ಕಾರ್ಯಗಳ ಬಗ್ಗೆ ವಿವರಿಸಿದರು.

ABOUT THE AUTHOR

...view details