ಕರ್ನಾಟಕ

karnataka

ಬ್ಯಾರಿ ಸಾಹಿತಿಗಳು ಆ ಭಾಷೆಗೆ ಮಾತ್ರ ಸೀಮಿತವಾಗದಿರಲಿ: ದಯಾನಂದ ಕತ್ತಲಸಾರ್

By

Published : Jul 13, 2020, 9:46 PM IST

ಬ್ಯಾರಿ ಭಾಷೆಯ ಸಾಹಿತಿಗಳು ಒಂದೇ ಭಾಷೆಗೆ ಸೀಮಿತವಾಗದೆ ತುಳು, ಮಲಯಾಳಂ, ಕೊಂಕಣಿ ಭಾಷೆಗಳಿಗೂ ತಮ್ಮ ಕೊಡುಗೆ ನೀಡುವಂತಾಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಹೇಳಿದ್ದಾರೆ.

Dayananda katalasar
ದಯಾನಂದ ಕತ್ತಲಸಾರ್

ಮಂಗಳೂರು: ತುಳು, ಮಲಯಾಳಂ, ಅರಬ್ಬಿ ಭಾಷೆಯ ಸಮ್ಮಿಲನದಿಂದ ಬ್ಯಾರಿ ಭಾಷೆ ಸೃಷ್ಟಿಯಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ವಿವಿಧ ಯೋಜನೆ, ಚಟುವಟಿಕೆಗಳ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ಭಾಷಾ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಹೇಳಿದರು.

ಎಂತಹ ಸಂಕಷ್ಟ ಎದುರಾದರೂ ಜಾತಿ, ಧರ್ಮ ಬಿಟ್ಟು ಐಕ್ಯತೆಯಿಂದ ಮುನ್ನಡೆಯಬೇಕು. ಬ್ಯಾರಿ ಭಾಷೆಯ ಸಾಹಿತಿಗಳು ಒಂದೇ ಭಾಷೆಗೆ ಸೀಮಿತವಾಗದೆ ತುಳು, ಮಲಯಾಳಂ, ಕೊಂಕಣಿ ಭಾಷೆಗಳಿಗೂ ತಮ್ಮ ಕೊಡುಗೆ ನೀಡುವಂತಾಗಬೇಕು ಎಂದು ಅವರು ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಪುಸ್ತಕ ಮತ್ತು ಸಿಡಿ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ತುಳು ಭಾಷೆಯ ಕೃತಿಗಳನ್ನು ಬ್ಯಾರಿ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಲಾಗುವುದು. ತುಳು ಸಾಹಿತ್ಯದಲ್ಲಿ ಹಲವಾರು ಕೃತಿಗಳಿದ್ದು ಆಸಕ್ತಿಯಿರುವ ಬ್ಯಾರಿ ಸಾಹಿತಿಗಳು ಈ ಕೃತಿಯನ್ನು ಬ್ಯಾರಿ ಭಾಷೆಗೆ ಅನುವಾದ ಮಾಡಿಕೊಳ್ಳಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಫಕ್ರುದ್ದೀನ್ ಇರುವೈಲು ಬರೆದ ‘ಮೂನು ಮಿನಿ ಕಾದಂಬರಿಙ’, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಬರೆದ ಬ್ಯಾರಿ ‘ಪಂಚತಂತ್ರ’, ಹಾರೂನ್ ರಶೀದ್ ಅರ್ಕುಳ್ ಬರೆದ ‘ಪಾರ್‍ರೊ ಪಕ್ಕಿ', ಶಂಶೀರ್ ಬುಡೋಳಿ ಬರೆದ ‘ಪಿರ್ಸತ್ತೊ ಪಲಕ’, ಬಿ.ಎ. ಷಂಶುದ್ದೀನ್ ಮಡಿಕೇರಿ ಬರೆದ ‘ನೆನಪುಙ,’ ಅನ್ಸಾರ್ ಕಾಟಿಪಳ್ಳ ಬರೆದ ‘ಅಂಗಲಾಪು’ ಹಾಗೂ ಕುಸೊವು ಬ್ಯಾರಿ ಹಾಡುಗಳ ಸಿಡಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ಧರು.

ABOUT THE AUTHOR

...view details