ಬೆಳ್ತಂಗಡಿ (ದಕ್ಷಿಣ ಕನ್ನಡ) :ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಾರೆಂಟ್ ಪ್ರತಿ ಹಿಡಿದು ಮನೆಗೆ ಹೋದ ಪೊಲೀಸ್ ಸಿಬ್ಬಂದಿ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳದಂಗಡಿಯ ಪಿಲ್ಯ ಸಮೀಪ ನಡೆದಿದೆ. ಪಿಲ್ಯ ಸಮೀಪದ ಗೋಳಿಕಟ್ಟೆ ಎಂಬಲ್ಲಿಯ ಅಬ್ದುಲ್ ಲತೀಫ್ ಎಂಬಾತನಿಗೆ ಕುಂದಾಪುರ ನ್ಯಾಯಾಲಯ ವಾರೆಂಟ್ ನೀಡಿತ್ತು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬ್ಬಂದಿ ಲೋಹಿತ್ ಹಾಗೂ ನಾರಾಯಣ ಗೌಡ ಅವರು ಅಬ್ದುಲ್ ಲತೀಫ್ ಮನೆಗೆ ಹೋಗಿ ವಾರೆಂಟ್ ಪ್ರತಿ ತೋರಿಸಿ ನಮ್ಮೊಂದಿಗೆ ಬರುವಂತೆ ಸೂಚಿಸಿದಾಗ ವಾರೆಂಟ್ ಪ್ರತಿಯನ್ನು ಪೊಲೀಸರ ಕೈಯಿಂದ ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.