ರೈಲಿನಡಿ ಸಿಲುಕುತ್ತಿದ್ದ ಮೇಕೆ ಮರಿ ಉಳಿಸಲು ಹೋಗಿ ಕಾಲನ್ನೇ ಕಳೆದುಕೊಂಡ ಯುವಕ - Mangaluru news
ರೈಲಿನಡಿ ಬೀಳುತ್ತಿದ್ದ ಮೇಕೆ ಮರಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಕಾಲನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.
ಮಂಗಳೂರು:ರೈಲು ಹಳಿಯ ಮೇಲೆ ಓಡುತ್ತಿದ್ದ ಆಡಿನ ಮರಿಯನ್ನು ಉಳಿಸಲು ಹೋಗಿ ಯುವಕನೋರ್ವ ತನ್ನ ಕಾಲನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಜೋಕಟ್ಟೆಯಲ್ಲಿ ಶನಿವಾರ ನಡೆದಿದೆ.
ಬೈಕಂಪಾಡಿ ಜೋಕಟ್ಟೆ ಅಂಗಾರಗುಂಡಿ ನಿವಾಸಿ ಚೇತನ್ ಕುಮಾರ್(21) ಕಾಲು ಕಳೆದುಕೊಂಡ ಯುವಕ. ಚೇತನ್ ಕುಮಾರ್ ಜೋಕಟ್ಟೆಯ 2 ನಂಬರ್ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ಶನಿವಾರ ಬೆಳಗ್ಗೆ ಕಾಲುದಾರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ರೈಲು ಬರುವಾಗ ಆಡಿನ ಮರಿಯೊಂದು ರೈಲು ಹಳಿಯಲ್ಲಿ ಓಡುತ್ತಿತ್ತು. ಆಗ ಅದನ್ನು ರಕ್ಷಿಸಲು ಧಾವಿಸಿದ್ದಾರೆ. ಆಡಿನ ಮರಿಯನ್ನು ರೈಲು ಹಳಿಯಿಂದ ದೂಡಿ ಇನ್ನೇನು ಈಚೆಗೆ ಬರುವಷ್ಟರಲ್ಲಿ ಕ್ಷಣಾರ್ಧದಲ್ಲೇ ರೈಲು ಚೇತನ್ ಕುಮಾರ್ ಕಾಲಿನ ಮೇಲೆಯೇ ಹರಿದಿದೆ. ಪರಿಣಾಮ ಅವರ ಎರಡೂ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದೆ.
ಅವರು ಹಳಿಯ ಮೇಲೆಯೇ ಬಿದ್ದು ನರಳಾಡುತ್ತಿರುವುದನ್ನು ಕಂಡ ಸ್ಥಳೀಯರು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಪರೀಕ್ಷಿಸಿ, ಹೆಚ್ಚು ಹಣ ಖರ್ಚು ಮಾಡಿದಲ್ಲಿ ಒಂದು ಕಾಲನ್ನು ಉಳಿಸಬಹುದೆಂದು ಹೇಳಿದ್ದಾರೆ. ಬಡ ಕುಟುಂಬದ ಚೇತನ್ ಕುಮಾರ್ ಐವರು ಮಕ್ಕಳಲ್ಲಿ ಹಿರಿಯವರಾಗಿದ್ದು, ಉಳಿದ ನಾಲ್ಕು ಮಂದಿ ಶಾಲೆ ಕಲಿಯುತ್ತಿದ್ದಾರೆ. ಇವರ ದುಡಿಮೆಯಿಂದಲೇ ಮನೆ ನಡೆಯುತ್ತಿದ್ದು, ಇದೀಗ ಕುಟುಂಬಕ್ಕೇ ದಿಕ್ಕೇ ತೋಚದಂತಾಗಿದೆ. ಈ ಯುವಕನ ಚಿಕಿತ್ಸೆಗೆ ದಾನಿಗಳು, ಸ್ಥಳೀಯ ಜನಪ್ರತಿನಿಧಿಗಳ ನೆರವಿಗೆ ಕುಟುಂಬ ಕಾಯುತ್ತಿದೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.