ಕರ್ನಾಟಕ

karnataka

By

Published : May 3, 2022, 12:16 PM IST

Updated : May 3, 2022, 6:21 PM IST

ETV Bharat / city

ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಟ್ವಿಸ್ಟ್ : ಮತ್ತೊಂದು ಕೇಂದ್ರದಲ್ಲೂ ಅಕ್ರಮ, ಇಬ್ಬರ ಬಂಧನ

PSI Recruitment scam : ಕಲಬುರಗಿಯ ಎಂ.ಎಸ್ ಇರಾಣಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಓರ್ವ ಅಭ್ಯರ್ಥಿ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ. ಪ್ರಭು ಹಾಗೂ ಚಂದ್ರಕಾಂತ್ ಕುಲಕರ್ಣಿ ಬಂಧಿತ ಆರೋಪಿಗಳು..

PSI Recruitment scam: Two held
ಪ್ರಭು ಹಾಗೂ ಚಂದ್ರಕಾಂತ್ ಕುಲಕರ್ಣಿ ಬಂಧಿತ ಆರೋಪಿಗಳು

ಕಲಬುರಗಿ :ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೇವಲ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರವಲ್ಲದೇ ಇತರೆ ಪರೀಕ್ಷಾ ಕೇಂದ್ರಗಳಲ್ಲಿಯೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಪೂರಕವಾಗಿ ಕಲಬುರಗಿಯ ಎಂ ಎಸ್ ಇರಾಣಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಓರ್ವ ಅಭ್ಯರ್ಥಿ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ.

ಎಮ್.ಎಸ್.ಇರಾಣಿ ಪದವಿ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಆರೋಪದಡಿ ಅಭ್ಯರ್ಥಿ ಪ್ರಭು ಹಾಗೂ ಅಭ್ಯರ್ಥಿಯಿಂದ ₹50 ಲಕ್ಷ ಹಣ ಪಡೆದು ಅಕ್ರಮಕ್ಕೆ ಸಹಕರಿಸಿದ ಆರೋಪದಲ್ಲಿ ಚಂದ್ರಕಾಂತ್ ಕುಲಕರ್ಣಿ ಎಂಬಾತನನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ಸ್ಟೇಷನ್​​ ಬಜಾರ್ ಠಾಣೆಯಲ್ಲಿ ಪ್ರತ್ಯೇಕ‌ ಪ್ರಕರಣ ದಾಖಲಾಗಿದೆ.

ಚಂದ್ರಕಾಂತ್ ಕುಲಕರ್ಣಿ ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್‌ ಅವರ ಆಡಿಟರ್ ಎಂದು ತಿಳಿದು ಬಂದಿದೆ. ಆರ್.ಡಿ.ಪಾಟೀಲ್ ಸಹಕಾರದಿಂದ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮದಲ್ಲಿ‌ ಇನ್ನಷ್ಟು ಪರೀಕ್ಷಾ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಶರಣಾಗದಿದ್ದರೆ ಆತ್ಮಹತ್ಯೆ ಬೆದರಿಕೆ : ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌, ನೀರಾವರಿ ಇಲಾಖೆಯ ಜೂನಿಯರ್ ಇಂಜಿನಿಯರ್ ಮಂಜುನಾಥ ಮೇಳಕುಂದಿ ಅಜ್ಞಾತ ಸ್ಥಳದಿಂದ 21 ದಿನಗಳ ನಂತರ ಸ್ವತಃ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗತಿಯಾಗಿದ್ದರ ಹಿಂದೆ ರೋಚಕ ಕತೆಯೊಂದು ಬೆಳಕಿಗೆ ಬಂದಿದೆ. ಆರೋಪಿ ಮಂಜುನಾಥ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಸೇವಾ ಅವಧಿಯಲ್ಲಿ ಅವರು ನಿಷ್ಠೆಯಿಂದ ಸೇವೆ ಸಲ್ಲಿಸಿದರು. ಆದರೆ, ಮಗ ಐಶಾರಾಮಿ‌ ಜೀವನ‌ ನಡೆಸಲು ಇಂತಹದೊಂದು ವಾಮ ವಾರ್ಗ ಅನುಸರಿಸಿದ್ದಾನೆ.

ಪಿಎಸ್ಐ ಪರೀಕ್ಷೆ ಅಕ್ರಮ ಕಲಬುಗಿಯಲ್ಲಿ ಇಬ್ಬರ ಬಂಧನ

ಅಲ್ಲದೇ, ಆರೋಪಿ ಮಂಜುನಾಥ ಚಿಕ್ಕಪ್ಪನ ಮಗಳ ಮದುವೆ ಮೇ 8ಕ್ಕೆ ಏರ್ಪಡಿಸಿದ್ದು, ಮದುವೆ ಸಂದರ್ಭದಲ್ಲಿ ನಿಮ್ಮ‌ ಅಪ್ಪ‌-ಅಮ್ಮ‌ ಸೇರಿ ನಿನ್ನ ಕುಟುಂಬಸ್ಥರನ್ನು ಕರೆದೊಯ್ಯುವುದಾಗಿ ಸಿಐಡಿ ಅಧಿಕಾರಿಗಳು ಎಚ್ಚರಿಸಿದರಂತೆ. ಮರ್ಯಾದೆ ಹೋದ ಮೇಲೆ ನಾವು ಬದುಕುಳಿಯುವುದಿಲ್ಲ. ನೀನು ಬಂದು ಶರಣಾಗದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮಂಜುನಾಥನಿಗೆ ಆತನ ತಂದೆ ಖಡಕ್ ಎಚ್ಚರಿಕೆ ನೀಡಿದ್ದಂತೆ. ಹೀಗಾಗಿ, ತಲೆ ಮರೆಸಿಕೊಂಡಿದ್ದ ಮಂಜುನಾಥ ಸಿಐಡಿ ಮುಂದೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.

ಪಿಎಸ್ಐ ಪರೀಕ್ಷೆ ಅಕ್ರಮ‌ಕ್ಕೆ ದಿನ ಕಳೆದಂತೆ ಹೊಸ ಟ್ವಿಸ್ಟ್‌ ಸಿಗುತ್ತಿವೆ. ಅಕ್ರಮದ ಹಿಂದೆ ದೊಡ್ಡ ಕುಳಗಳ ಕೈವಾಡ ಇದೆ. ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರ ಮಾತ್ರವಲ್ಲ, ಇತರೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಈಗ ಪುಷ್ಠಿ ಸಿಕ್ಕಂತಾಗಿದೆ.

ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ: ಕಿಂಗ್‌ಪಿನ್ ಮಂಜುನಾಥ್, ಶ್ರೀಧರ್​​ ಮೂರು ದಿನ ಸಿಐಡಿ ವಶಕ್ಕೆ

Last Updated : May 3, 2022, 6:21 PM IST

ABOUT THE AUTHOR

...view details