ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಬೆಂಗಳೂರು ಪೊಲೀಸರು ದಾಳಿ ಮಾಡಿ ಅಂದಾಜು 6 ಕೋಟಿ ರೂ. ಮೌಲ್ಯದ 1,350 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ಈ ಹಿನ್ನೆಲೆ ಜಿಲ್ಲೆ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾಜ್ಯದ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ಅಕ್ರಮ ಚಟುವಟಿಕೆ ಇದಾಗಿದ್ದು, ಬಯಲಿಗೆಳೆದ ಬೆಂಗಳೂರು ಪೊಲೀಸರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದೇನೆ. 2019ರ ನಂತರ ಅಕ್ರಮ ಜೂಜು ಅಡ್ಡೆಗಳು ಜಿಲ್ಲಾದ್ಯಂತ ತಲೆ ಎತ್ತಿದ್ದು, ಜಿಲ್ಲೆಯನ್ನು ಅಕ್ರಮ ಚಟುವಟಿಕೆಗಳ ತಾಣವನ್ನಾಗಿ ಪರಿವರ್ತಿಸಿವೆ ಎಂದು ದೂರಿದ್ದಾರೆ.
ಓಡಿಶಾ ರಾಜ್ಯದಿಂದ ಸರಬರಾಜು ಮಾಡಲಾಗಿದೆ ಎನ್ನಲಾದ ಈ ಅಪಾರ ಪ್ರಮಾಣದ ಗಾಂಜಾ ಮೂರು ರಾಜ್ಯಗಳ ಚೆಕ್ ಪೋಸ್ಟ್ ದಾಟಿಕೊಂಡು ಬಂದಿದ್ದಾದರೂ ಹೇಗೆ?. ಇಷ್ಟೊಂದು ಸುಲಭವಾಗಿ ಸರಬರಾಜು ಆಗಲು ರಾಜಕೀಯ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಅವರು, ಈ ಕುರಿತು ಸ್ಥಳೀಯ ಆಡಳಿತಕ್ಕೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಪೊಲೀಸರ ದಾಳಿಯನ್ನು ಉಲ್ಲೇಖಿಸಿರುವ ಅವರು, ದಾಳಿಯ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದಿರುವುದು ನೋಡಿದರೆ, ಸ್ಥಳೀಯ ಪೊಲೀಸರ ಮೇಲೆ ಆಡಳಿತ ಪಕ್ಷದ ರಾಜಕೀಯ ಒತ್ತಡ ಇತ್ತೇ ಎನ್ನುವ ಅನುಮಾನ ಮೂಡುತ್ತದೆ. ಅಥವಾ ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.