ಕರ್ನಾಟಕ

karnataka

By

Published : Jun 15, 2021, 10:00 PM IST

ETV Bharat / city

ಮುಂಗಾರು ಹದ ಐತಿ.. ಆದ್ರಾ, ಕಲಬುರ್ಗಿ ರೈತರು ಬಿತ್ತನೆ ಬೀಜ, ರಸಗೊಬ್ಬರ ಕೊರತೆಗೆ ಹೈರಾಣ

ಮುಂಗಾರು ಬಿತ್ತನೆಗೆ ಜಿಲ್ಲೆಯಲ್ಲಿ 22 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಬೇಡಿಕೆ ಇದ್ದು, ಸದ್ಯ 16 ಸಾವಿರ ಕ್ವಿಂಟಲ್ ಮಾತ್ರ ದಾಸ್ತಾನಿದೆ. ಇನ್ನು, 33 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, 13 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಈ ಅಂಕಿ- ಅಂಶ ನೋಡಿದರೆ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆ ಇರುವುದು ಸ್ಪಷ್ಟ..

formers-suffer
ಕಂಗಾಲಾದ ಕಲಬುರಗಿ ರೈತರು

ಕಲಬುರಗಿ :ವರುಣ ಕೃಪೆ ತೋರುತ್ತಿದ್ದಂತೆ ರಾಜ್ಯದಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭಗೊಂಡಿದೆ. ಬಿಸಿಲೂರು ಕಲಬುರಗಿಯಲ್ಲೂ ವಾಡಿಕೆಯಷ್ಟು ಮಳೆಯಾಗಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ. ಕೊರೊನಾ ಹಾವಳಿ, ಲಾಕ್​​ಡೌನ್ ಮಧ್ಯೆಯೂ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಅನ್ನದಾತರು ರೈತ ಸಂಪರ್ಕ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಆದರೆ, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಕೆಲ ಬಿತ್ತನೆ ಬೀಜಗಳ ಕೊರತೆ ಕಾಡುತ್ತಿದೆ. ಅಲ್ಲದೆ ರಸಗೊಬ್ಬರ ಕೊರತೆಯೂ ರೈತರಿಗೆ ಎದುರಾಗಿದೆ. ಇದರಿಂದ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಅಲೆಯುತ್ತ ನಿತ್ಯ ಪರದಾಟ ನಡೆಸುತ್ತಿದ್ದಾರೆ‌.

ಕಂಗಾಲಾದ ಕಲಬುರಗಿ ರೈತರು

ಓದಿ: ಜನ್ಮದಿನದಂದು ಕೋವಿಡ್​ನಿಂದ ಮೃತಪಟ್ಟ ಬಾಣಂತಿ ಅಂತ್ಯಕ್ರಿಯೆ ನೆರವೇರಿಸಿದ 'ಅಪ್ಪು'ಗೌಡ

ರೈತರು ತೊಗರಿ, ಉದ್ದು, ಹೆಸರು, ಸೂರ್ಯಕಾಂತಿ, ಸೋಯಾ ಸೇರಿದಂತೆ ಮುಂಗಾರು ಬಿತ್ತನೆ ಬೀಜಗಳ ಖರೀದಿಯಲ್ಲಿ ತೊಡಗಿದ್ದಾರೆ. ಒಂದು ಸಿಕ್ಕರೆ ಮತ್ತೊಂದು ಸಿಗುತ್ತಿಲ್ಲ ಎಂದು ರೈತರು ಆರೋಪ ಮಾಡುತ್ತ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಬೆಲೆ ಏರಿಕೆ ಕೂಡ ಅನ್ನದಾತರಿಗೆ ಸಂಕಷ್ಟ ತಂದೊಡ್ಡಿದೆ.

ವಾಡಿಕೆಯಂತೆ ಈ ವರ್ಷವೂ ಜಿಲ್ಲೆಯಲ್ಲಿ ಈಗಾಗಲೇ 60 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ 7.5 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇದ್ದು, ಶೇ.70 ಭಾಗ ರೈತರು ತೊಗರಿ ಬೆಳೆಯುತ್ತಾರೆ. ಮುಂಗಾರು ಬಿತ್ತನೆಗೆ ಜಿಲ್ಲೆಯಲ್ಲಿ 22 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಬೇಡಿಕೆ ಇದ್ದು, ಸದ್ಯ 16 ಸಾವಿರ ಕ್ವಿಂಟಲ್ ಮಾತ್ರ ದಾಸ್ತಾನಿದೆ. ಇನ್ನು, 33 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, 13 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಈ ಅಂಕಿ- ಅಂಶ ನೋಡಿದರೆ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆ ಇರುವುದು ಸ್ಪಷ್ಟವಾಗಿದೆ.

ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು 10 ಹೆಚ್ಚುವರಿ ಕೇಂದ್ರಗಳನ್ನ ತೆರೆದು ಬೀಜ, ಗೊಬ್ಬರವನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಒಂದೆಡೆ ಮುಂಗಾರು ಬಿತ್ತನೆ ಉತ್ಸಾಹದಲ್ಲಿರುವ ರೈತರು ಬೀಜ, ರಸಗೊಬ್ಬರ ಕೊರತೆಯ ಸಮಸ್ಯೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಸಾಲು ಸಾಲು ಸಂಕಷ್ಟ ಎದುರಿಸಿರುವ ಅನ್ನದಾತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಪರದಾಡುವಂತೆ ಮಾಡಿದರೆ, ಬೆಲೆ ಏರಿಕೆ ಬಿಸಿ ಕೂಡ ತಟ್ಟಿದೆ.

ABOUT THE AUTHOR

...view details