ಕಲಬುರಗಿ:ನಮ್ಮ ಕಾರ್ಯಕ್ರಮಗಳನ್ನು ಅಸ್ತವ್ಯಸ್ತಗೊಳಿಸಲು ಬಿಜೆಪಿ ಸಂಚು ರೂಪಿಸುತ್ತಿದೆ. ಇದೇ ಕಾರಣಕ್ಕೆ ಹೆಲಿಕಾಪ್ಟರ್ ಸಿಗದಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳ ನಾಯಕರ ಮನೆ ಮೇಲೆ ಉದ್ದೇಶ ಪೂರ್ವಕವಾಗಿ ಐಟಿ ರೇಡ್ ಮಾಡಿಸಿದ್ದಾರೆ. ಸುಳ್ಳು ಹೇಳಿಕೊಂಡು ಓಡಾಡುವ ಮೋದಿ, ಈಗ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ಅಡ್ವಾಣಿ ಅವರೇ ಹೇಳಿದ್ದಾರೆ, ದೇಶ ಮೊದಲು, ಆಮೇಲೆ ಪಕ್ಷ, ಅದಾದ ಮೇಲೆ ವ್ಯಕ್ತಿ ಎಂದು. ದೇಶ ಮೊದಲಾಗಬೇಕು. ದೇಶಕ್ಕಾಗಿ ಎಲ್ಲರೂ ಒಂದಾಗಬೇಕು. ಆದರೆ, ಮೋದಿ ಎಲ್ಲವೂ ನಾನೇ ಎನ್ನುತ್ತಿದ್ದಾರೆ. ಅಡ್ವಾಣಿ ಮಾತುಗಳನ್ನು ಕೇಳಿಸಿಕೊಂಡ ಮೇಲಾದರೂ ಮೋದಿ ಬುದ್ದಿ ಕಲಿಯಬೇಕು ಎಂದರು.
ನಮ್ಮ ನಾಯಕರಿಗೆ ಹೆಲಿಕಾಪ್ಟರ್ ಸಿಗದಂತೆ ಮಾಡಿ, ಕಾಂಗ್ರೆಸ್ ಪಕ್ಷವನ್ನು ಹತ್ತಿಕುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಸಣ್ಣ ಏರ್ ಸ್ಟ್ರೈಕ್ ಮಾಡಿ ನಾವೇ ಮಾಡಿದ್ದೇವೆ ಅಂತಾ ಹೇಳಿಕೊಂಡು ಮೋದಿ ತಿರುಗುತ್ತಿದ್ದಾರೆ. ಆದರೆ, ದೇಶಕ್ಕಾಗಿ ಇಂದಿರಾ ಗಾಂಧಿ ಮತ್ತು ಬಾಬು ಜಗಜೀವನರಾಮ್ ಯುದ್ಧ ಸೇರಿ ಅನೇಕ ಮಹತ್ವದ ಕೆಲಸ ಮಾಡಿದರೂ ಪ್ರಚಾರ ತೆಗೆದುಕೊಳ್ಳಲಿಲ್ಲ. ದೇಶಕ್ಕೆ ಎಲ್ಲರೂ ಬೇಕು ಎಂಬುದನ್ನು ಅರಿತು ಮೋದಿ ಕೆಲಸ ಮಾಡಬೇಕು ಎಂದು ಕುಟುಕಿದರು.
ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮೋದಿ ಅರಿಯಬೇಕು. ಮೋದಿ ಸುಳ್ಳುಗಾರ, ಸುಳ್ಳು ಹೇಳುತ್ತಾ ಅಡ್ಡಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಸೇರಿದ ಅನೇಕರು ಕೂಡ ಸುಳ್ಳು ಹೇಳವುದನ್ನೇ ರೂಢಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.