ಕರ್ನಾಟಕ

karnataka

ಜಗತ್ತಿನ ಪ್ರಮುಖ ತರಬೇತಿ ಸಂಸ್ಥೆಗಳಲ್ಲಿ ಹಂತ ಹಂತವಾಗಿ ರಾಜ್ಯದ ಪೊಲೀಸರಿಗೆ ತರಬೇತಿ: ಗೃಹ ಸಚಿವ ಬೊಮ್ಮಾಯಿ

By

Published : Sep 29, 2019, 7:59 PM IST

ಹುಬ್ಬಳ್ಳಿಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ 6ನೇ ತಂಡದ 131 ನಾಗರಿಕ ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಬಹುಮಾನ ವಿತರಿಸಿದರು.

ಗೃಹ ಸಚಿವ ಬೊಮ್ಮಾಯಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವತಿಯಿಂದ ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ 6ನೇ ತಂಡದ 131 ನಾಗರಿಕ ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.

ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ

ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಎಲ್ಲಾ ರೀತಿಯ ಅರ್ಹತೆ ಮತ್ತು ಪ್ರತಿಭೆಗಳಿಂದಾಗಿ ನಿಮಗೆಲ್ಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಅನ್ಯಾಯ, ಶೋಷಣೆಗಳಿದ್ದಲ್ಲಿಗೆ ತೆರಳಿ ಬಡವ, ದೀನ-ದಲಿತರಿಗೆ ಹಾಗೂ ನಿರ್ಗತಿಕರಿಗೆ ಸೇವೆ ಸಲ್ಲಿಸುವ ಸದಾವಕಾಶ ಪೊಲೀಸರಿಗೆ ಇದೆ. ಭಾರತದ ಸಂವಿಧಾನದಡಿ ಪೊಲೀಸ್ ಕಾನೂನು ರಚನೆಯಾಗಿದೆ. ರಾಜ್ಯದ ಪೊಲೀಸ್ ತರಬೇತಿಗಳಲ್ಲಿ ಸಾವಿರಾರು ಜನರಿಗೆ ದಕ್ಷ ತರಬೇತಿ ನೀಡಲಾಗುತ್ತಿದೆ ಎಂದರು.

ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ

ಹಿಂದಿನ ಅಧಿಕಾರಿಗಳು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಅನ್ಯಾಯಕ್ಕೊಳಗಾದ ಮಹಿಳೆಯರು, ನೌಕರರು, ವಿದ್ಯಾರ್ಥಿಗಳು, ರೈತರು ನ್ಯಾಯಕ್ಕಾಗಿ ಪೊಲೀಸ್ ಇಲಾಖೆಯ ಬಳಿ ಬರುತ್ತಾರೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಂತರ ಸಾಮಾಜಿಕ, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಆಧುನಿಕ ತಂತ್ರಜ್ಞಾನವನ್ನು ದುಷ್ಟಶಕ್ತಿಗಳು ಬಳಸಿಕೊಂಡು ಸುಳ್ಳು ವದಂತಿ ಹರಡುತ್ತಿವೆ. ಎಲ್ಲಾ ಪೊಲೀಸರಿಗೆ ಸೈಬರ್ ಅಪರಾಧದ ನಿಯಂತ್ರಣ ತರಬೇತಿ ನೀಡಲಾಗುವುದು. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವಿಧಿವಿಜ್ಞಾನ, ಸೈಬರ್ ಅಪರಾಧ ಪತ್ತೆಗೆ ಹೆಸರುವಾಸಿಯಾಗಿರುವ ತರಬೇತಿ ಶಾಲೆಗಳಿಗೆ ರಾಜ್ಯದ ಪೊಲೀಸರನ್ನು ಹಂತ ಹಂತವಾಗಿ ಕಳುಹಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಲ್ಲ ವಿಷಯಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಸುರೇಶನಾಯಕ ಸರ್ವೋತ್ತಮ ಪ್ರಶಸ್ತಿಗೆ ಪಾತ್ರರಾದರು. ನಿವೃತ್ತ ಪೊಲೀಸ್ ಅಧಿಕಾರಿಗಳು, ಪೊಲೀಸ್ ಪ್ರಶಿಕ್ಷಣಾರ್ಥಿಗಳ ಕುಟುಂಬಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪೊಲೀಸ್ ಕಾನ್ಸ್​ಟೇಬಲ್​ಗಳ ನಿರ್ಗಮನ ಪಥ ಸಂಚಲನ

ABOUT THE AUTHOR

...view details