ಹುಬ್ಬಳ್ಳಿ: ಲಾಕ್ಡೌನ್ ವೇಳೆ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡು ಪರದಾಟ ನಡೆಸಿದ ಆಸ್ಟ್ರೇಲಿಯಾದ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಮೂಲಕ ಧಾರವಾಡದ ಎಸ್ಪಿ ವರ್ತಿಕಾ ಕಟಿಯಾರ್ ಮಾನವೀಯತೆ ಮೆರೆದಿದ್ದಾರೆ.
ಆಸ್ಟ್ರೇಲಿಯಾ ಮೂಲದ ಮೈಶಿಯಾನ ನಿಯಾಂಗ್ ಎಂಬ ಮಹಿಳೆ ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದರು. ಲಾಕ್ಡೌನ್ ಘೋಷಣೆಯಾದ್ದರಿಂದ ನಗರದ ರೇಣುಕಾ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದರು. ನಿನ್ನೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ತನ್ನ ದೇಶಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ಗೆ ಮನವಿ ಮಾಡಿದ್ದರು. ವಿದೇಶಿ ಮಹಿಳೆಗೆ ಸಹಾಯ ಮಾಡುವಂತೆ ಎಸ್ಪಿ ವರ್ತಿಕಾ ಕಟಿಯಾರ್ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಅದರಂತೆ ವರ್ತಿಕಾ ಕಟಿಯಾರ್ ಅವರು ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಸಂಪರ್ಕಿಸಿ ಮಹಿಳೆಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.