ಹುಬ್ಬಳ್ಳಿ: ಸತತವಾದ ಸುರಿದ ಮಳೆ ಪರಿಣಾಮ ಜಿಲ್ಲೆಯ ದಾಜಿಬಾನ್ ಪೇಟ್ನ ಅಂಗಡಿ ಮುಂಗಟ್ಟುಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗವಾಗಿರುವ ದಾಜಿಬಾನ್ ಪೇಟ್ಯ ದುರ್ಗದ ಬೈಲ್ನಲ್ಲಿ ಅಂಗಡಿ ಮುಂಗಟ್ಟಿಗೆ ಚರಂಡಿ ನೀರು ನುಗ್ಗಿದ್ದು, ವಾಸನೆ ತಾಳಲಾರದೇ ಸ್ಥಳೀಯರು, ಪಾಲಿಕೆ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಆರೋಪಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹುಬ್ಬಳ್ಳಿಯಲ್ಲಿ ಚರಂಡಿ ನೀರು ಸೃಷ್ಟಿಸಿದ ಅವಾಂತರ ಬಳಿಕ ಪಾಲಿಕೆ ಸಿಬ್ಬಂದಿ ಮೋಟಾರು ಉಪಯೋಗಿಸಿ ಅಂಗಡಿಗಳಲ್ಲಿ ನುಗ್ಗಿರುವ ನೀರು ತೆಗೆಯಲಾರಂಭಿಸಿದರು. ಆದರೆ ನಿತ್ಯ ಮಾರುಕಟ್ಟೆಗೆ ಬರುತ್ತಿದ್ದ ಜನರು, ಇಂದು ಇಲ್ಲಿನ ಅವಾಂತರ ನೋಡಿ ಯಾರು ಬರುತ್ತಿಲ್ಲ ಎಂದು ಅಂಗಡಿ ಮಾಲೀಕರು ತಮ್ಮ ಅಳಲು ತೋಡಿಕೊಂಡರು.
ಪಾಲಿಕೆಯು ಅವೈಜ್ಞಾನಿಕ ಚರಂಡಿ ವ್ಯವಸ್ಥೆ ಕಲ್ಪಿಸಿದ್ದು, ಮಳೆ ಬಂದರೆ ಸಾಕು ಇಂತಹ ಸಮಸ್ಯೆ ಉದ್ಭವವಾಗುತ್ತದೆ. ಈ ಕುರಿತು ಹಲವಾರು ಬಾರಿ ಪಾಲಿಕೆ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ಆರೋಪಿಸಿ, ಆದಷ್ಟು ಬೇಗ ಇಲ್ಲಿಯ ಸಮಸ್ಯೆಗೆ ಶಾಸ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.