ಹುಬ್ಬಳ್ಳಿ (ಧಾರವಾಡ):ಚೀಟಿ (ಬಿ ಸಿ) ವ್ಯವಹಾರದಲ್ಲಿ ಸುಮಾರು 20 ಲಕ್ಷ ರೂ. ಹಣ ಸಂಗ್ರಹಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿ ಮೂಲದ ಹಾಲಿ ಗೋಕುಲರಸ್ತೆಯ ರಾಮಲಿಂಗೇಶ್ವರನ ನಗರದ ನಿವಾಸಿ ರಮೇಶ ನಾಗಲೋಟಿ ಆರೋಪಿ.
ಈತ ರಾಮಲಿಂಗೇಶ್ವರ ನಗರದ ಸ್ಲಂ ನಿವಾಸಿಗಳ ಬಳಿ ತಲಾ 2 ಸಾವಿರ ರೂ.ಗಳ ಚೀಟಿ (ಬಿ.ಸಿ) ಮಾಡಿಸಿಕೊಂಡು ಹೆಚ್ಚಿನ ಲಾಭ ಮಾಡುತ್ತೇನೆ ಎಂದು ನಂಬಿಸಿ ಸುಮಾರು 15 ರಿಂದ 20 ಲಕ್ಷ ರೂ. ಹಣವನ್ನು ಸಂಗ್ರಹಿಸಿಕೊಂಡು ಪರಾರಿಯಾಗಿದ್ದನು. ಅಲ್ಲದೇ ಈ ಕುರಿತು ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಶುಕ್ರವಾರ ಅಕ್ಷಯ ಪಾರ್ಕ್ನಲ್ಲಿ ಓಡಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.