ಕರ್ನಾಟಕ

karnataka

ETV Bharat / city

2020-21 ನೇ ಸಾಲಿಗೆ ವಿವಿಧ ಅಭಿವೃದ್ಧಿಗಾಗಿ ಅನುದಾನ ಮೀಸಲು: ಆಯುಕ್ತ ಸುರೇಶ ಇಟ್ನಾಳ

ನಗರದಲ್ಲಿ ರೋಡ್ ಕಟ್ಟಿಂಗ್ ಮಾಡಬೇಕಾದರೆ ಕಡ್ಡಾಯವಾಗಿ ಆನ್​ಲೈನ್ ಮೂಲಕ ಹಣ ಪಾವತಿಸಿ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಆಯುಕ್ತ ಸುರೇಶ ಇಟ್ನಾಳ ಸಭೆಯಲ್ಲಿ ಮಾಹಿತಿ ನೀಡಿದರು.

By

Published : Feb 16, 2021, 8:49 AM IST

Hubli
ಸುರೇಶ ಇಟ್ನಾಳ

ಹುಬ್ಬಳ್ಳಿ: 2020-21 ನೇ ಸಾಲಿನ ವಿವಿಧ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಹೇಳಿದರು. ಪಾಲಿಕೆ ಕೇಂದ್ರ ಸಭಾಂಗಣದಲ್ಲಿ ಆಯವ್ಯಯ ಕುರಿತು ಸಾರ್ವಜನಿಕ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದು ಅವರು ಮಾತನಾಡಿದರು.

ಪಿಎಸ್ಆರ್ ಮತ್ತು ಪಾಲಿಕೆಯ ಅನುದಾನದಡಿ ಅವಶ್ಯಕತೆಗೆ ತಕ್ಕಂತೆ ಆಯ್ದ ಸ್ಥಳಗಳಲ್ಲಿ ಬಸ್ ನಿಲ್ದಾಣಗಳ ಅಭಿವೃದ್ಧಿ ಮಾಡಲಾಗುವುದು. ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನಕ್ಕೆ ಕಡ್ಡಾಯವಾಗಿ ಶೇ.50 ರಷ್ಟು ಸರ್ಟಿಫಿಕೇಟ್ ತೆಗೆದುಕೊಂಡು ಮಾಡಲಾಗುವುದು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮೀಷನರ್ ಜೊತೆ ಸೇರಿ ಪಾರ್ಕಿಂಗ್ ನಿರ್ಮಾಣಕ್ಕೆ ಸಿಟಿ ಗುರುತಿಸಿ ಪರಿಶೀಲಿಸಲಾಗಿದೆ. ಪಾರ್ಕಿಂಗ್ ಬಳಸುವ ಸಲುವಾಗಿ ಪ್ರಸ್ತಾವನೆ ತಯಾರಿಸಿ ಈ ವರ್ಷ ಎಲ್ಲಾ ಸ್ಥಳಗಳಲ್ಲಿ ಪಾರ್ಕಿಂಗ್​ಗೆ ಟೆಂಡರ್ ಕರೆಯಲಾಗುವುದು. ಇದರಲ್ಲಿ ಬರುವಂತಹ ಆದಾಯದಲ್ಲಿ ಶೇ.50 ರಷ್ಟು ಪ್ರಸ್ತುತ ಪಾರ್ಕಿಂಗ್​ಗಳ ಅಭಿವೃದ್ಧಿಗೆ ಮತ್ತು ಶೇ.50 ರಷ್ಟು ಅನುದಾನವನ್ನು ಮುಂಬರುವ ಹೊಸ ಪಾರ್ಕಿಂಗ್ ಪ್ಲೇಸ್ ಗಳನ್ನು ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಬೀದಿ ಬದಿ ವ್ಯಾಪಾರಸ್ಥ ಸಮಿತಿಯ ಜೊತೆ ಚರ್ಚಿಸಿ ನೇರವಾಗಿ ಪಾಲಿಕೆಗೆ ಹಣ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಕಾರಣದಿಂದ ಸ್ಟೇಡಿಯಂ ಅಭಿವೃದ್ಧಿಗಾಗಿ ಈ ವರ್ಷ ಅನುದಾನ ಬಿಡುಗಡೆಯಾಗಿಲ್ಲ. ಆದಾಯ ಬಂದರೆ ಖಂಡಿತ ಅಭಿವೃದ್ಧಿ ಮಾಡಲಾಗುತ್ತದೆ. ರೋಡ್ ಕಟ್ಟಿಂಗ್​ನಿಂದ ರಸ್ತೆ ಹಾಳಾಗುತ್ತಿದೆ. ಮೊದಲು ಕೈಪಿಡಿ ಪ್ರಕಾರ ಕಟ್ಟಿಂಗ್ ನಡೆಯುತ್ತಿತ್ತು. ಇನ್ನು ಮುಂದೆ ರೋಡ್ ಕಟ್ಟಿಂಗ್ ಮಾಡಬೇಕಾದರೆ ಕಡ್ಡಾಯವಾಗಿ ಆನ್​ಲೈನ್ ಮೂಲಕ ಹಣ ಪಾವತಿಸಿ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಯಾರು ಸ್ಟ್ಯಾಂಡ್, ಬಿಲ್ಡಿಂಗ್ ವಸ್ತುಗಳನ್ನು ಹಾಕುತ್ತಾರೋ ಅವರಿಗೆ ಟ್ಯಾಕ್ಸ್ ಹಾಕಿ ಆದಾಯ ಸಂಗ್ರಹಣೆ ಮಾಡಲಾಗುವುದು. ಹು-ಧಾ ಮಹಾನಗರಗಳಲ್ಲಿ ಪಾರ್ಕಿಂಗ್ ಪಾಲಿಸಿ ತರುವ ಯೋಜನೆ ಇದೆ. ರಸ್ತೆಗಳು ಎಲ್ಲಿ ಚೆನ್ನಾಗಿರುತ್ತವೆಯೋ ಅಲ್ಲಿಯ ಮನೆಯ ಮುಂದಿನ ವಾಹನಗಳಿಗೆ ದಿನಕ್ಕೆ 10 ರೂ. ನಂತೆ ಟ್ಯಾಕ್ಸ್ ಸಂಗ್ರಹಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಪೌರ ಕಾರ್ಮಿಕರಿಗೆ 2 ರೀತಿಯಲ್ಲಿ ಇನ್ಸುರೇಶನ್ ಮಾಡಲಾಗಿದೆ. ಕೌಶಲ್ಯ ಅಭಿವೃದ್ಧಿಯನ್ನು ಸಹ ಮಾಡಲಾಗುವುದು. ವಸ್ತು ಪ್ರದರ್ಶನ ಕೇಂದ್ರಗಳನ್ನು ಮಾಡುವಂತೆ ಸೂಚಿಸಲಾಗಿತ್ತು. ಆದರೆ ಹೊಸದಾಗಿ ನಿರ್ಮಾಣ ಮಾಡಿ ಅನುಪಯುಕ್ತ ಮಾಡುವುದಕ್ಕಿಂತ ಅವುಗಳನ್ನೇ ಅಭಿವೃದ್ಧಿ ಮಾಡಿ ಬಳಕೆ ಮಾಡುವುದು ಉತ್ತಮ. ಎಸ್. ಸಿ, ಎಸ್.ಟಿ ಫಲಾನುಭವಿಗಳ ಮನೆ ನಿರ್ಮಾಣಕ್ಕಾಗಿ ಸಹಾಯವಾಗುವಂತೆ ಪಾಲಿಕೆ ಅನುದಾನದಡಿ 20 ಸಾವಿರ ರೂ. ಗಳನ್ನು ಕೊಡಲಾಗುತ್ತಿದೆ. ಜಾಹೀರಾತುಗಳಿಂದ ಪಾಲಿಕೆ ಹಣ ಸಂಗ್ರಹಣೆ ಮಾಡುವಂತೆ ಪ್ರಸ್ತಾಪ ಸಭೆಯಲ್ಲಿ ಬಂದಿದೆ ಆದರೆ ಜಿಎಸ್​ಟಿ ಇರುವುದರಿಂದ ಜಾಹೀರಾತುಗಳ ಆದಾಯ ಸಂಗ್ರಹಣೆ ಮಾಡಲು ಬರುವುದು ಕಷ್ಟವಾಗಿದೆ ಎಂದು ಸಾರ್ವಜನಿಕರ ಸಲಹೆ ಸೂಚನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಮುಖ್ಯ ಲೆಕ್ಕಾಧಿಕಾರಿ ಬನಶಂಕರಿ, ಅಧೀಕ್ಷಕ ಅಭಿಯಂತರ ತಿಮ್ಮಪ್ಪ , ಸಾರ್ವಜನಿಕ ಸಂಪರ್ಕಾಧಿಕಾರಿ ಸಿದ್ದಪ್ಪ ಸಿ. ಬೇವೂರ ಸೇರಿದಂತೆ ವಿವಿಧ ಅಧಿಕಾರಿಗಳು, ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಯೋಗೇಶ ಗೌಡ ಹತ್ಯೆ ಪ್ರಕರಣ: ಸಾಕ್ಷ್ಯನಾಶ ಕೇಸ್ ಬೆಂಗಳೂರಿಗೆ ಶಿಫ್ಟ್

ABOUT THE AUTHOR

...view details