ಹುಬ್ಬಳ್ಳಿ:ಆತ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಆರಕ್ಷಕ. ಆದರೆ, ಆತ ಮಾಡಿದ್ದೇ ಬೇರೆ. ಮನೆ ಮರಳಿ ಕೊಡ್ತಿಲ್ಲ ಅಂತಾ ಹೋದ ವ್ಯಕ್ತಿಗೆ, ಜೀವ ಬೆದರಿಕೆ ಹಾಕಿದ ಆರೋಪ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕೇಳಿ ಬಂದಿದೆ. ಅಲ್ಲದೆ, ಆತ ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಯಲ್ಲಿಯೇ ಎಫ್ಐಆರ್ ದಾಖಲಾಗಿದ್ದು, ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.
ಹೀಗೆ ನಮ್ಮ ಮುಂದೆ ತಮಗೆ ಆಗಿದ ಅನ್ಯಾಯದ ಬಗ್ಗೆ ಹೇಳಿಕೊಳ್ಳುತ್ತಿರುವ ಇವರ ಹೆಸರು ಚಂದ್ರಶೇಖರ್ ಬಿರಾದಾರ. 56 ವರ್ಷದ ಇವರು ಹೊಟ್ಟೆಪಾಡಿಗಾಗಿ ಆಟೋ ಓಡಿಸಿಕೊಂಡು ಹುಬ್ಬಳ್ಳಿಯ ಆನಂದ ನಗರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಚಂದ್ರಶೇಖರ್ ತನ್ನ ವೃತ್ತಿಯಿಂದ ಬಂದ ಆದಾಯ ಹಾಗೂ ಬ್ಯಾಂಕ್ನಲ್ಲಿ ಲೋನ್ ಮಾಡಿ ಆನಂದ ನಗರದಲ್ಲಿ ಮನೆ ಖರೀದಿಸಿ ವಾಸವಿದ್ದರು. 2008 ರಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಮೂರು ವರ್ಷಗಳ ಕಾಲ ಶ್ರೀಕಾಂತ್ ಕೊರಂಡವಾಡ ಎಂಬುವವರಿಗೆ ಲೀಸ್ ನೀಡಿದ್ದಾರೆ. ಲೀಸ್ ಅವಧಿ ಮುಗಿದ ಬಳಿಕ ಶ್ರೀಕಾಂತ್ ಕೊರಂಡವಾಡ ಮನೆ ಬಿಟ್ಟು ಕೊಡದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಚಂದ್ರಶೇಖರ್ ವಿರುದ್ಧ ದೂರು ನೀಡಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇದರ ವಿಚಾರಣೆ ನಡೆಸಿದ ಹುಬ್ಬಳ್ಳಿಯ ನ್ಯಾಯಾಲಯ ದಾವೆ ವಜಾಗೊಳಿಸಿ, ಚಂದ್ರಶೇಖರ್ಗೆ ಮನೆ ನೀಡುವಂತೆ ಆದೇಶ ಮಾಡಿದೆ. ಆದರೆ, ಅದ್ಯಾವುದಕ್ಕೂ ಕ್ಯಾರೇ ಎನ್ನದ ಶ್ರೀಕಾಂತ್, ಮನೆ ಖಾಲಿ ಮಾಡದೇ ನನಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಈ ಕುರಿತು ದೂರು ದಾಖಲಿಸಲು ಹೋದರೆ, ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ದೂರು ದಾಖಲಸಿಕೊಳ್ಳದೇ ಜೀವ ಬೆದರಿಕೆ ಹಾಕಿದ್ದಾರೆ. ಠಾಣೆಯ ಲಕ್ಷ್ಮಣ ನಾಯಕ ಎಂಬ ಪೇದೆ ಕಿರುಕುಳ ನೀಡುತ್ತಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.