ಹುಬ್ಬಳ್ಳಿ: ಚುನಾವಣೆ ಬರ್ತಿದೆ ಎಂದು ಕಾಂಗ್ರೆಸ್ ರಾಜಕಾರಣ ಆರಂಭಿಸಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಈ ಹಿಂದೆ ಸರ್ಕಾರ ನಡೆಸಿದವರು ಈಗ ಮೇಕೆದಾಟು ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ನಗರದಲ್ಲಿಂದು 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕಾರ್ಯಕ್ರಮದ ನಂತರ ಮಾತಾನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಕಾನೂನು ತೊಡಕುಗಳು ಇರುವುದರಿಂದ ವಿಳಂಬವಾಗಿದೆ. ಈ ವಿಚಾರವಾಗಿ ಎಲ್ಲರೂ ಒಂದು ಕಡೆ ಕುಳಿತು ಚರ್ಚೆ ಮಾಡಬೇಕು. ಎಲ್ಲರೂ ಸೇರಿ ಸರ್ವಸಮ್ಮತವಾದ ನಿರ್ಣಯ ಕೈಗೊಳ್ಳಬೇಕು ಅಂದಾಗ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ.
ಅದರಲ್ಲಿಯೂ ತಮಿಳನಾಡು ವಿರುದ್ಧದ ಹೋರಾಟ ಮಾಡಿ ಜಾರಿಗೆ ತರಬೇಕು ಅಂದರೆ ಎಲ್ಲ ಪಕ್ಷಗಳ ಸಹಕಾರ ಅತ್ಯಗತ್ಯ. ಇದನ್ನು ರಾಜಕೀಕರಣ ಮಾಡಿದರೆ ಇದರ ಲಾಭವನ್ನು ಬೇರೆ ರಾಜ್ಯಗಳು ಪಡೆಯುತ್ತವೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು
ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು ಎಂಬ ಅಭಿಪ್ರಾಯಕ್ಕೆ ಎಲ್ಲ ಪಕ್ಷಗಳೂ ಬದ್ಧವಾಗಿವೆ. ಕಾನೂನು ತೊಡಕು ನಿವಾರಿಸಿ ಇದನ್ನು ಅನುಷ್ಟಾನಕ್ಕೆ ಪ್ರಯತ್ನಿಸಬೇಕೇ ಹೊರತು ರಾಜಕೀಯ ಮಾಡುವುದು ಬೇಡ. ತಮ್ಮ ಸರ್ಕಾರ ಇದ್ದಾಗ ಡಿಪಿಆರ್ ಮಾಡಿರೋದಾಗಿ ಕಾಂಗ್ರೆಸ್ನವರು ಹೇಳ್ತಾರೆ.