ಧಾರವಾಡ: ಹೆಚ್ಚಿನ ಸಂಬಳ ನೀಡುವುದಾಗಿ ಉತ್ತರ ಪ್ರದೇಶದ ಪತ್ತೆಪುರ ಜಿಲ್ಲೆಯಿಂದ ಕಾರ್ಮಿಕರನ್ನು ಕೆರೆತಂದ ಗುತ್ತಿಗೆದಾರ, ಕೆಲಸ ಮಾಡಿಸಿಕೊಂಡು ಸಂಬಳ ನೀಡದೆ ನಡುರಸ್ತೆಗಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದಿಂದ ಶಿವಮೊಗ್ಗ ಜಿಲ್ಲೆಗೆ 20 ಜನರ ತಂಡ ಪೈಪಲೈನ್ ಕೆಲಸಕ್ಕೆಂದು ಆಗಮಿಸಿತ್ತು. ಆದ್ರೆ ಅಲ್ಲಿದ್ದ ಗುತ್ತಿಗೆದಾರ ಹಣ ನೀಡದೆ ಅವರನ್ನು ಹಾಗೆಯೇ ಕಳಿಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರನ್ನು ಮಾತನಾಡಿಸಿದ ಸಹನಾ ಎನ್ಜಿಒ ಸಿಬ್ಬಂದಿ ಅವರಿಗೆ ಊಟ ನೀಡಿ ಜಿಲ್ಲಾಧಿಕಾರಿ ಕಚೇರಿಗೆ ಕರೆತಂದಿದ್ದಾರೆ.
ದುಡಿದ ಹಣಕೊಡದೆ ಬೀದಿಗೆ ತಳ್ಳಿದ ಗುತ್ತಿಗೆದಾರ ಅಲ್ಲದೆ, ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದರೂ ಸಹ ಗುತ್ತಿಗೆದಾರ ಅವರನ್ನು ಆಸ್ಪತ್ರೆಗೆ ದಾಖಲು ಮಾಡದೆ ಕಡೇ ಪಕ್ಷ ದುಡಿದ ಹಣವನ್ನೂ ನೀಡದೆ ನಡುನೀರಲ್ಲಿ ಕೈಬಿಟ್ಟಿದ್ದಾನಂತೆ. ಹೇಗಾದ್ರೂ ಮಾಡಿ ಕೆಲಸಗಾರರನ್ನು ಅವರ ರಾಜ್ಯಕ್ಕೆ ಕಳಿಸಬೇಕು ಎಂದು ಸಹನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಪಣ ತೊಟ್ಟಿದೆ.
ಒಂದು ಕಡೆ ಹಣವಿಲ್ಲ, ಇನ್ನೊಂದೆಡೆ ಬೇರೆ ರಾಜ್ಯದಲ್ಲಿ ಸಿಲುಕಿಕೊಂಡಿರುವ ಕೆಲಸಗಾರರ ಗೋಳು ಹೇಳತೀರದಾಗಿದೆ. ಇದೀಗ ಕೆಲಸಗಾರರು ಎನ್ಜಿಒ ಮೂಲಕ ಜಿಲ್ಲಾಡಳಿತದ ಮೊರೆ ಹೋಗಿದ್ದು, ಅಧಿಕಾರಿಗಳು ಯಾವ ರೀತಿ ಇವರ ಕಷ್ಟಗಳಿಗೆ ಸ್ಟಂದಿಸುತ್ತಾರೆ ಅಂತ ಕಾದು ನೋಡಬೇಕಿದೆ.