ಧಾರವಾಡ:ಈ ಊರಿಗೆ ಒಂದು ಪರಂಪರೆ ಇದೆ. ಕಲೆ, ಸಾಹಿತ್ಯ, ವಿದ್ಯೆ, ಸಂಗೀತ ಎಲ್ಲವನ್ನೂ ಈ ನೆಲ ಹೊಂದಿದೆ. ಸಂಗೀತ ಮತ್ತು ಸಾಹಿತ್ಯ ಒಂದೇ ಕಡೆ ಇರೋದಿಲ್ಲ ಅದು ಧಾರವಾಡದಲ್ಲಿ ಮಾತ್ರ ಇದೆ. ಇಲ್ಲಿನಿಂದಲೇ ಅನೇಕ ಸಾಹಿತಿ, ಸಂಗೀತಗಾರರು ಪ್ರಸಿದ್ಧರಾಗಿದ್ದಾರೆ. ಅದು ಧಾರವಾಡದ ಮಣ್ಣಿನ ಗುಣಧರ್ಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಧಾರವಾಡದಲ್ಲಿ ಬಸವೇಶ್ವರ ಕಂಚಿನ ಮೂರ್ತಿ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ವಿಚಾರಗಳು ಸರ್ವಕಾಲಕ್ಕೂ ಸತ್ಯ. ಬಸವ ಪರಂಪರೆಯಲ್ಲಿದ್ದವರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚನ್ನಬಸವೇಶ್ವರರು ಇತರ ವಚನಕಾರರಿಗಿಂತ ಒಂದು ಹೆಜ್ಜೆ ಮುಂದೆ ಇದ್ದರು, ಕಟು ಸತ್ಯಗಳನ್ನು ಚನ್ನಬಸವಣ್ಣ ಹೇಳಿದ್ದಾರೆ. ಬಸವಣ್ಣ ಇನ್ನೂ ಪ್ರಸ್ತುತ ಅಂತಾ ನಾವು ಹೇಳುತ್ತೇವೆ. ಬಸವಣ್ಣ ಅಸ್ಪೃಶ್ಯತೆ, ಅಸಮಾನತೆ, ಮೇಲು ಕೀಳು, ಲಿಂಗಬೇಧ ವಿರುದ್ಧ ಹೋರಾಡಿದ್ದರು. ಅವರು ಪ್ರಸ್ತುತ ಅಂತಾದ್ರೆ ಇವೆಲ್ಲವೂ ಇನ್ನೂ ಇವೆ ಅಂತಾ ಅರ್ಥ. 900 ವರ್ಷವಾದರೂ ಅಸಮಾನತೆ, ಮೂಢನಂಬಿಕೆ ಇನ್ನೂ ಇದೆ ಎಂದು ಬೇಸರ ವ್ಯಕ್ತಪಡಿಸಿದ್ರು.