ಹುಬ್ಬಳ್ಳಿ:ಹು-ಧಾ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಹಳೆಯ ಪಿಂಚಣಿ ಬಾಕಿ ಹಣ ಇದುವರೆಗೂ ಬಂದಿಲ್ಲ. ಸುಮಾರು ಐವತ್ತು ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರ, ತಾಂತ್ರಿಕ ತೊಂದರೆ ನೆಪ ಹೇಳಿ ಸುಮಾರು ಮೂರು ವರ್ಷದಿಂದ ಪಿಂಚಣಿ ಹಣ ಬಿಡುಗಡೆ ಮಾಡಿಲ್ಲ.
ಸುಮಾರು ಐವತ್ತು ಕೋಟಿ ರೂ. ಪಿಂಚಣಿ ಬಾಕಿ ಹಣ ಮಹಾನಗರ ಪಾಲಿಕೆಗೆ ಸರ್ಕಾರ ಬಿಡುಗಡೆ ಮಾಡಬೇಕಿದೆ. ಆದರೂ ಕೂಡ ಸರ್ಕಾರ ಹಣ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದೆ.
ಓದಿ: ಅಸಭ್ಯ ಪದಗಳಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಮಾಧುಸ್ವಾಮಿ: ವಿಡಿಯೋ
ಹು- ಧಾ ಮಹಾನಗರ ಪಾಲಿಕೆಗೆ ಸುಮಾರು 121 ಕೋಟಿ ರೂ. ಪಿಂಚಣಿ ಕೊಡಬೇಕಿತ್ತು. ಆದರೆ ಸರ್ಕಾರ ಪಿಂಚಣಿ ಹಣವನ್ನು ಬಿಡುಗಡೆ ಮಾಡದಿದ್ದರೂ ಪಾಲಿಕೆ ತನ್ನ ಸಾಮಾನ್ಯ ನಿಧಿ ಅಡಿಯಲ್ಲಿ ಪಾಲಿಕೆ ನೌಕರರಿಗೆ ಪಿಂಚಣಿ ನೀಡುತ್ತಾ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರಯತ್ನದಿಂದ 2019 ರಲ್ಲಿ 26 ಕೋಟಿ ರೂ. ಬಿಡುಗಡೆ ಆಗಿತ್ತು.
ಅಲ್ಲದೇ ಕೊರೊನಾ ಸಂಕಷ್ಟದ ನಡುವೆಯೂ ಎರಡನೇ ಕಂತಿನ ಮೊತ್ತ 26 ಕೋಟಿ ರೂ. ಪಾಲಿಕೆಗೆ ಹರಿದು ಬಂದಿತು. ಒಟ್ಟು 52 ಕೋಟಿ ರೂ. ಹಣದಲ್ಲಿ ಬಹುಪಾಲು ಹಣವನ್ನು ಗುತ್ತಿಗೆದಾರರ ಬಿಲ್ ಪಾವತಿಗೆ ನೀಡಿತ್ತು. ಒಂದಿಷ್ಟು ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ನೀಡಿತ್ತು. ಈಗ ಐವತ್ತು ಕೋಟಿ ರೂ. ಪಿಂಚಣಿ ಬಾಕಿ ಇರುವುದರಿಂದ ಪಿಂಚಣಿ ನೀಡಲು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ.
ಈ ಬಗ್ಗೆ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಅವರನ್ನು ಪ್ರಶ್ನಿಸಿದರೆ, ನಿವೃತ್ತ ನೌಕರರಿಗೆ ಬಾಕಿ 50 ಕೋಟಿ ರೂ. ಪಿಂಚಣಿ ಹಣವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಬಿಡುಗಡೆ ಗೊಳಿಸಲಾಗುವುದು ಎನ್ನುತ್ತಿದ್ದಾರೆ.