ದಾವಣಗೆರೆ; ಜಿಲ್ಲೆಯ ಹಿರಿಯ ರಾಜಕಾರಣಿ, ಪತ್ರಕರ್ತ, ನಗರಾಭಿವೃದ್ಧಿಯ ಅಪರೂಪದ ಕನಸುಗಾರ ಸಿ.ಕೇಶವಮೂರ್ತಿಯವರು ಇಂದು ಸಂಜೆ 7 ಗಂಟೆಗೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 89 ವರ್ಷ ವಯಸ್ಸಾಗಿತ್ತು. ದಾವಣಗೆರೆಯ ಶ್ರೀಮಂತ ಮನೆತನಗಳಲ್ಲಿ ಒಂದಾದ ಚನ್ನಗಿರಿ ಮನೆತನಕ್ಕೆ ಸೇರಿದ ಕೇಶಮೂರ್ತಿಯವರು ಚನ್ನಗಿರಿ ರಂಗಪ್ಪನವರ ದ್ವಿತೀಯ ಪುತ್ರರು. ದಾವಣಗೆರೆ ನಗರಸಭೆಯ ಅಧ್ಯಕ್ಷರಾಗಿ (1951-52), ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ನೂರಾರು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ದಾವಣಗೆರೆ ನಗರಸಭೆಯ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿದ್ದುದು ದೇಶದ ದಾಖಲೆಗಳಲ್ಲಿ ಒಂದಾಗಿತ್ತು. 1973ರಲ್ಲಿ ದಾವಣಗೆರೆ-ಚಿತ್ರದುರ್ಗ ಅವಿಭಜಿತ ಜಿಲ್ಲೆಯ ಪ್ರಥಮ ಕನ್ನಡ ದಿನಪತ್ರಿಕೆ ದಾವಣಗೆರೆ ನಗರವಾಣಿಯನ್ನು ಆರಂಭಿಸಿ ಸತತ 46 ವರ್ಷ ಮುನ್ನಡೆಸಿಕೊಂಡು ಬಂದಿದ್ದರು.
ರಾಜಕೀಯ, ಪತ್ರಿಕೋದ್ಯಮ, ಸಮಾಜಸೇವೆ, ಉದ್ಯಮ ಕ್ಷೇತ್ರ ಹೀಗೆ ವಿವಿಧ ರಂಗಗಳಲ್ಲಿ ಕಾರ್ಯ ನಿರ್ವಹಿಸಿದ್ದ ಕೇಶವಮೂರ್ತಿಯವರು, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ದಾವಣಗೆರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಫಾಲ್ ಹ್ಯಾರಿಸ್ ಫೆಲೋ ಆಗಿ, ಅಂತಾರಾಷ್ಟ್ರೀಯ ಗೌವರ್ನರ್ ಆಗಿ ಅವರು ಗುರುತರ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ಸ್ವಂತ ವೆಚ್ಚದಲ್ಲಿ ರೋಟರಿ ರಸ್ತೆಗೆ (ಪ್ರವಾಸಿ ಮಂದಿರ ರಸ್ತೆ) ಸುಂದರ ಫುಟ್ಪಾತ್ ನಿರ್ಮಿಸಿದ್ದರು. ಈಚೆಗಷ್ಟೇ ರೋಟರಿ ಸಮುದಾಯ ಭವನ ನಿಮಾರ್ಣಕ್ಕೆ 65 ಲಕ್ಷಕ್ಕೂ ಹೆಚ್ಚು ಹಣ ದಾನ ಮಾಡಿದ್ದರು.
ಹಾಲಿ ರೋಟರಿ ಕ್ಲಬ್ ಹಿಂಭಾಗ ಸುಸಜ್ಜಿತ ಸಿ.ಕೇಶವಮೂರ್ತಿ ರೋಟರಿ ಸಮುದಾಯ ಭವನ ನಿಮಾರ್ಣವಾಗುತ್ತಿದ್ದು, ಅದರ ಉದ್ಘಾಟನೆಯನ್ನು ತಾವು ಕಣ್ಣಾರೆ ನೋಡಬೇಕೆಂದು ಬಯಸಿದ್ದರು. ದಾವಣಗೆರೆಯಲ್ಲಿ ಸಿಮೆಂಟ್ ರಸ್ತೆಗಳನ್ನು ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದರು. ಸಾಲು ಮರಗಳಿಗೆ ತಿಮ್ಮಕ್ಕ ಹೇಗೆ ಹೆಸರುವಾಸಿಯೋ ಸಿಮೆಂಟ್ ರಸ್ತೆಗಳಿಗೆ ಸಿ.ಕೇಶವಮೂರ್ತಿ ಹೆಸರುವಾಸಿ. ದಾವಣಗೆರೆಯಲ್ಲಿ ಸ್ಟೇಡಿಯಂ, ಈಜುಕೊಳ ಇತ್ಯಾದಿಗಳನ್ನು ನಗರಸಭೆ ಅಧ್ಯಕ್ಷರಾಗಿದ್ದಾಗ ನಿರ್ಮಿಸಿದ ಹೆಗ್ಗಳಿಕೆ ಅವರದ್ದು. ಸುಸಜ್ಜಿತ ದೇವರಾಜ್ ಅರಸ್ ಬಡಾವಣೆ ಕೂಡಾ ಇವರೇ ನಿರ್ಮಿಸಿದ್ದಾರೆ.