ಕರ್ನಾಟಕ

karnataka

ದಾವಣಗೆರೆಯ ಹಿರಿಯ ರಾಜಕಾರಣಿ, ಪತ್ರಕರ್ತ ಸಿ.ಕೇಶವಮೂರ್ತಿ ಇನ್ನಿಲ್ಲ

By

Published : Jul 8, 2019, 9:48 PM IST

ದಾವಣಗೆರೆಯ ಶ್ರೀಮಂತ ಮನೆತನಗಳಲ್ಲಿ ಒಂದಾದ ಚನ್ನಗಿರಿ ಮನೆತನಕ್ಕೆ ಸೇರಿದ ಕೇಶಮೂರ್ತಿಯವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದುರದೃಷ್ಟವೆಂಬಂತೆ ಇಂದು ಸಂಜೆ 7 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

ಸಿ.ಕೇಶವಮೂರ್ತಿ

ದಾವಣಗೆರೆ; ಜಿಲ್ಲೆಯ ಹಿರಿಯ ರಾಜಕಾರಣಿ, ಪತ್ರಕರ್ತ, ನಗರಾಭಿವೃದ್ಧಿಯ ಅಪರೂಪದ ಕನಸುಗಾರ ಸಿ.ಕೇಶವಮೂರ್ತಿಯವರು ಇಂದು ಸಂಜೆ 7 ಗಂಟೆಗೆ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 89 ವರ್ಷ ವಯಸ್ಸಾಗಿತ್ತು. ದಾವಣಗೆರೆಯ ಶ್ರೀಮಂತ ಮನೆತನಗಳಲ್ಲಿ ಒಂದಾದ ಚನ್ನಗಿರಿ ಮನೆತನಕ್ಕೆ ಸೇರಿದ ಕೇಶಮೂರ್ತಿಯವರು ಚನ್ನಗಿರಿ ರಂಗಪ್ಪನವರ ದ್ವಿತೀಯ ಪುತ್ರರು. ದಾವಣಗೆರೆ ನಗರಸಭೆಯ ಅಧ್ಯಕ್ಷರಾಗಿ (1951-52), ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ನೂರಾರು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ದಾವಣಗೆರೆ ನಗರಸಭೆಯ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿದ್ದುದು ದೇಶದ ದಾಖಲೆಗಳಲ್ಲಿ ಒಂದಾಗಿತ್ತು. 1973ರಲ್ಲಿ ದಾವಣಗೆರೆ-ಚಿತ್ರದುರ್ಗ ಅವಿಭಜಿತ ಜಿಲ್ಲೆಯ ಪ್ರಥಮ ಕನ್ನಡ ದಿನಪತ್ರಿಕೆ ದಾವಣಗೆರೆ ನಗರವಾಣಿಯನ್ನು ಆರಂಭಿಸಿ ಸತತ 46 ವರ್ಷ ಮುನ್ನಡೆಸಿಕೊಂಡು ಬಂದಿದ್ದರು.

ಸಿ.ಕೇಶವಮೂರ್ತಿ

ರಾಜಕೀಯ, ಪತ್ರಿಕೋದ್ಯಮ, ಸಮಾಜಸೇವೆ, ಉದ್ಯಮ ಕ್ಷೇತ್ರ ಹೀಗೆ ವಿವಿಧ ರಂಗಗಳಲ್ಲಿ ಕಾರ್ಯ ನಿರ್ವಹಿಸಿದ್ದ ಕೇಶವಮೂರ್ತಿಯವರು, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ದಾವಣಗೆರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಫಾಲ್ ಹ್ಯಾರಿಸ್ ಫೆಲೋ ಆಗಿ, ಅಂತಾರಾಷ್ಟ್ರೀಯ ಗೌವರ್ನರ್ ಆಗಿ ಅವರು ಗುರುತರ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ಸ್ವಂತ ವೆಚ್ಚದಲ್ಲಿ ರೋಟರಿ ರಸ್ತೆಗೆ (ಪ್ರವಾಸಿ ಮಂದಿರ ರಸ್ತೆ) ಸುಂದರ ಫುಟ್‍ಪಾತ್ ನಿರ್ಮಿಸಿದ್ದರು. ಈಚೆಗಷ್ಟೇ ರೋಟರಿ ಸಮುದಾಯ ಭವನ ನಿಮಾರ್ಣಕ್ಕೆ 65 ಲಕ್ಷಕ್ಕೂ ಹೆಚ್ಚು ಹಣ ದಾನ ಮಾಡಿದ್ದರು.

ಹಾಲಿ ರೋಟರಿ ಕ್ಲಬ್ ಹಿಂಭಾಗ ಸುಸಜ್ಜಿತ ಸಿ.ಕೇಶವಮೂರ್ತಿ ರೋಟರಿ ಸಮುದಾಯ ಭವನ ನಿಮಾರ್ಣವಾಗುತ್ತಿದ್ದು, ಅದರ ಉದ್ಘಾಟನೆಯನ್ನು ತಾವು ಕಣ್ಣಾರೆ ನೋಡಬೇಕೆಂದು ಬಯಸಿದ್ದರು. ದಾವಣಗೆರೆಯಲ್ಲಿ ಸಿಮೆಂಟ್ ರಸ್ತೆಗಳನ್ನು ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದರು. ಸಾಲು ಮರಗಳಿಗೆ ತಿಮ್ಮಕ್ಕ ಹೇಗೆ ಹೆಸರುವಾಸಿಯೋ ಸಿಮೆಂಟ್ ರಸ್ತೆಗಳಿಗೆ ಸಿ.ಕೇಶವಮೂರ್ತಿ ಹೆಸರುವಾಸಿ. ದಾವಣಗೆರೆಯಲ್ಲಿ ಸ್ಟೇಡಿಯಂ, ಈಜುಕೊಳ ಇತ್ಯಾದಿಗಳನ್ನು ನಗರಸಭೆ ಅಧ್ಯಕ್ಷರಾಗಿದ್ದಾಗ ನಿರ್ಮಿಸಿದ ಹೆಗ್ಗಳಿಕೆ ಅವರದ್ದು. ಸುಸಜ್ಜಿತ ದೇವರಾಜ್ ಅರಸ್ ಬಡಾವಣೆ ಕೂಡಾ ಇವರೇ ನಿರ್ಮಿಸಿದ್ದಾರೆ.

ಸಮಾಜಕ್ಕೆ, ದೇವಸ್ಥಾನಗಳಿಗೆ ಧಾರಾಳ ಗುಣದಿಂದ ದಾನ ನೀಡಿದ್ದಾರೆ. ಎಂ.ಸಿ ಕಾಲನಿಯಲ್ಲಿ ವನಿತ ಸಮಾಜದ ಆಶ್ರಯದಲ್ಲಿ ನಡೆಯುತ್ತಿರುವ ಸಿ.ಕೆ. ವಾಕ್-ಶ್ರವಣ ಕೇಂದ್ರ ನಿರ್ಮಾಣಕ್ಕೆ ಪೂರ್ಣ ಹಣವನ್ನು ದಾನ ಮಾಡಿದ್ದರು. ಹಾಗೇಯೆ ಶಾಸ್ತ್ರಿಹಳ್ಳಿ ಶ್ರೀ ಮಾತಾ ಟ್ರಸ್ಟ್ ವೃದ್ಧಾಶ್ರಮಕ್ಕೆ, ಸತ್ಯಸಾಯಿ ಶಾಲೆಗೆ, ರೋಟರಿ ಸಮುದಾಯ ಭವನಕ್ಕೆ, ರಸ್ತೆಯ ಫುಟ್‍ಪಾತ್ ನಿರ್ಮಾಣಕ್ಕೆ ಲಕ್ಷಾಂತರ ರೂ. ದಾನ ಮಾಡಿದ್ದಾರೆ.

ಸಿ.ಕೇಶವಮೂರ್ತಿ ಪಡೆದ ಪ್ರಶಸ್ತಿ, ಸನ್ಮಾನಗಳು:

ಸಿ.ಕೇಶವಮೂರ್ತಿಯವರು ಸಂಪಾದಕರಾಗಿ ಆರಂಭಿಸಿದ ದಾವಣಗೆರೆ ನಗರವಾಣಿಗೆ 2018ರಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರೆತಿದ್ದು, ಸಿಕೆ ಅವರು ಅದನ್ನು ಸ್ವೀಕರಿಸಿದ್ದರು. ಇದೇ ವರ್ಷ ಜನವರಿಯಲ್ಲಿ ‘ಜಿಲ್ಲಾ ಸಮಾಚಾರ’ ಪತ್ರಿಕೆಯ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೂ ಪಾತ್ರರಾಗಿದ್ದರು. ರೋಟರಿ ಕ್ಲಬ್‍ನಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 89 ವಸಂತಗಳ ತುಂಬು ಜೀವನ ನಡೆಸಿದ್ದ ಕೇಶವಮೂರ್ತಿಯವರು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಮಕಾಲೀನರು.

ದೇಹದಾನಿ:

ಸಿ.ಕೇಶವಮೂರ್ತಿಯವರು ತಮ್ಮ ಮರಣ ನಂತರ ತಮ್ಮ ದೇಹವನ್ನು ಜೆಜೆಎಂ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಬೇಕೆಂದು ವರ್ಷದ ಹಿಂದೆಯೇ ಘೋಷಿಸಿದ್ದು, ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳಿಗೆ ಸಹಿ ಮಾಡಿಕೊಟ್ಟಿದ್ದರು. ಹೀಗಾಗಿ ಅವರ ದೇಹವನ್ನು ಜೆಜೆಎಂ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details