ಕರ್ನಾಟಕ

karnataka

ETV Bharat / city

ಮೆಕ್ಕೆಜೋಳ ಮಾರಿ ವರ್ಷವಾದ್ರೂ ರೊಕ್ಕ ಕೈ ಸೇರಲಿಲ್ಲ; ವಂಚಕ ವ್ಯಾಪಾರಿಗಳಿಂದ ಅನ್ನದಾತರಿಗೆ ಸಂಕಷ್ಟ

ಹರಪ್ಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದಲ್ಲಿರುವ ಕಮಿಷನ್ ಏಜೆಂಟ್ ಶಿವಲಿಂಗಯ್ಯ ಎಂಬಾತನಿಗೆ ರೈತರು ಟನ್‌ಗಟ್ಟಲೆ ಮೆಕ್ಕೆಜೋಳ‌ ವ್ಯಾಪಾರ ಮಾಡಿದ್ದಾರೆ. ಹೀಗೆ ವ್ಯಾಪಾರ ಮಾಡಿ, ಕಳೆದೊಂದು ವರ್ಷದ ಹಣವಿಲ್ಲದೆ ಕಂಗಾಲಾದ ರೈತರು ವ್ಯಾಪಾರಿಯ ಮನೆ ಮುಂದೆ ಅಲೆಯುತ್ತಿದ್ದಾರೆ.

By

Published : Aug 11, 2021, 7:29 AM IST

Updated : Aug 11, 2021, 8:28 AM IST

more than 300 farmers cheated by Merchants
ವ್ಯಾಪಾರಸ್ಥರಿಂದ ರೈತರಿಗೆ ವಂಚನೆ

ದಾವಣಗೆರೆ:ರೈತರು ಬರಡು ಭೂಮಿಯಲ್ಲಿ ಕಷ್ಟಪಟ್ಟು ಮೆಕ್ಕೆಜೋಳ ಬೆಳೆ ಬೆಳೆದಿದ್ದರು. ಹೀಗೆ ಬೆಳೆದ ಫಸಲನ್ನು ಹೆಚ್ಚಿನ ಲಾಭಕ್ಕೆ ಮಾರಾಟವೂ ಮಾಡಿದ್ದರು. ಆದ್ರೆ ಆಗಿದ್ದು ಮಾತ್ರ ನಿರಾಶೆ. ಹೊಲದಲ್ಲಿ ಬೆವರು ಸುರಿಸಿ ಕಣ್ಣಲ್ಲಿ ಕಣ್ಣಿಟ್ಟು ಬೆಳೆದ ಫಸಲಿಗೆ ಪ್ರತಿಫಲ ಸಿಗಲಿಲ್ಲ. ಇಷ್ಟಕ್ಕೂ ಇಲ್ಲಿ ಆಗಿದ್ದೇನು?

ಹೌದು, ನೂರಾರು ರೈತರಿಂದ ಮೆಕ್ಕೆಜೋಳ ಖರೀದಿಸಿದವರು ಈಗ ಕೈಗೆ ಸಿಗುತ್ತಿಲ್ಲ. ಹಣಕ್ಕಾಗಿ ಒಂದು ವರ್ಷದಿಂದ ರೈತರು ಸುತ್ತಾಡುತ್ತಿದ್ದಾರೆ. ಒಟ್ಟು 5 ಕೋಟಿ 70 ಲಕ್ಷ ರೂಪಾಯಿ ಬೆಳೆ ಬೆಳೆದ ರೈತರಿಗೆ ಪಾವತಿಯಾಗಬೇಕಿದೆ. ನಮ್ಮ ಹಣವನ್ನು ಯಾರಲ್ಲಿ ಕೇಳುವುದು ಅನ್ನೋದು ರೈತರನ್ನು ಕಾಡುತ್ತಿರುವ ಚಿಂತೆ.

ವಂಚಕ ವ್ಯಾಪಾರಿಗಳಿಂದ ಅನ್ನದಾತರಿಗೆ ಸಂಕಷ್ಟ

ದಾವಣಗೆರೆ ಜಿಲ್ಲೆಯ ಜಗಳೂರು ಹಾಗು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ 300ಕ್ಕೂ ಹೆಚ್ಚು ರೈತರು ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಹರಪ್ಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದಲ್ಲಿರುವ ಕಮಿಷನ್ ಏಜೆಂಟ್ ಶಿವಲಿಂಗಯ್ಯ ಎಂಬಾತನಿಗೆ ರೈತರು ಟನ್‌ಗಟ್ಟಲೆ ಮೆಕ್ಕೆಜೋಳ‌ ವ್ಯಾಪಾರ ಮಾಡಿದ್ದಾರೆ. ಹೀಗೆ ವ್ಯಾಪಾರ ಮಾಡಿ, ಕಳೆದೊಂದು ವರ್ಷದ ಹಣವಿಲ್ಲದೆ ಕಂಗಾಲಾದ ರೈತರು ವ್ಯಾಪಾರಿಯ ಮನೆ ಮುಂದೆ ಅಲೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇರುವ ದರಕ್ಕಿಂತ 50 ರಿಂದ 100 ರೂಪಾಯಿ ಜಾಸ್ತಿ ಸಿಗುತ್ತದೆ ಅಂತ ಮೆಕ್ಕೆಜೋಳ ಕೊಟ್ಟು ಹಣ ಪಡೆಯದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

ನಕಲಿ ಖಾತೆ ಸೃಷ್ಟಿಸಿ ಮೋಸ ಈ ರೀತಿ ನಡೆಯುತ್ತೆ..

ಈ ವಂಚಕ ವ್ಯಾಪಾರಿ ಬೇರೆ ಬೇರೆ ರಾಜ್ಯಗಳಿಗೆ ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಅಲ್ಲಿಂದ ಬರುವ ಹಣವನ್ನು ಸಾವಿಗೀಡಾರುವ 15 ಜನರ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ 5 ಕೋಟಿ 70 ಲಕ್ಷ ರೂಪಾಯಿ ರೈತರ ಹಣ ನುಂಗಿ ಸುಮ್ಮನಾಗಿದ್ದಾರೆ. ಅಲ್ಲದೇ ಕ್ಯಾನ್ಸರ್ ರೋಗಿ, ಸಾವನ್ನಪ್ಪಿದವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ರೈತರಿಗೆ ಸೇರಬೇಕಾದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ.

ಈ ನಕಲಿ ಖಾತೆ ವಿಚಾರದಲ್ಲಿ ದಾವಣಗೆರೆಯ ಪಿ.ಬಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್​ಗೆ ಹೋಗಿ ವಿಚಾರಿಸಿದಾಗ ಬ್ಯಾಂಕ್‌ನ ಕ್ಲರ್ಕ್ ಶಿವಕುಮಾರ್ ಎನ್ನುವವರು ಕೂಡ ಆರೋಪಿಗಳ ಜೊತೆ ಶಾಮೀಲಾಗಿದ್ದು, ನಕಲಿ‌ ಖಾತೆಗಳನ್ನು ಇವರೇ ಸೃಷ್ಟಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.

ಮೂವರು ವಂಚಕರನ್ನು ಹಿಡಿದ ರೈತರು:

ವರ್ತಕ ಜಿ.ಎಂ ಶಿವಲಿಂಗಯ್ಯ ಎನ್ನುವಾತ ಕಳೆದ ಐದು ವರ್ಷಗಳಿಂದ‌ ರೈತರ ನಂಬಿಕೆ‌ ಗಳಿಸಿದ್ದನಂತೆ. ಈತ ತಮಿಳುನಾಡು ಹಾಗು ಮೆಕ್ಕೆಜೋಳ ಸಂಸ್ಕರಣಾ ಫ್ಯಾಕ್ಟರಿಗಳ ಜೊತೆ ವ್ಯವಹಾರ ಇಟ್ಟುಕೊಂಡಿದ್ದ. ಶಿವಲಿಂಗಯ್ಯನಿಗೆ ಬೆಳೆಯನ್ನು ಕೊಟ್ಟರೆ ನಮಗೆ ಉತ್ತಮ ಹಣ ಬರುತ್ತದೆ ಎಂಬ ಆಸೆಯಿಂದ ಬೆಳೆದ ಮೆಕ್ಕೆಜೋಳವನ್ನು ರೈತರು ಕೊಟ್ಟಿದ್ದಾರೆ. ಕೆಲವು ಖರೀದಿದಾರರು ಈತನ ಬಳಿ 20 ಲಕ್ಷ ರೂ.ವರೆಗೂ ಮೆಕ್ಕೆಜೋಳ ವ್ಯವಹಾರ ಮಾಡಿದ್ದರು. ಆದ್ರೆ ಶಿವಲಿಂಗಯ್ಯನ ಬಳಿ ವ್ಯವಹಾರದಲ್ಲಿ ಪಾಲುದಾರರಾಗಿದ್ದ ಚೇತನ್, ಮಹೇಶ್ವರಯ್ಯ, ವಾಗೇಶ್ವರಯ್ಯ, ಚಂದ್ರು ಎಂಬುವವರು ಕೋಟ್ಯಂತರ ರೂ.ಗಳನ್ನು ತಿಂದು ತೇಗಿ ಶಿವಲಿಂಗಯ್ಯನನ್ನು ಬೀದಿಗೆ ತಂದಿದ್ದಾರೆ.

ಈ ಹಿಂದೆ ರೈತರ ಕೈಗೆ ಶಿವಲಿಂಗಯ್ಯ ಮಾತ್ರ ಸಿಕ್ಕಿದ್ದ. ಈಗ ಮಹೇಶ್ವರಯ್ಯ ಹಾಗೂ ಚೇತನ್ ಸಿಕ್ಕಿದ್ದಾರೆ. ಈಗ ಮೂರು ಜನ ಸೇರಿ ನಮ್ಮ ಪಾಲಿನ ಹಣ ನೀಡಬೇಕು ಅನ್ನೋದು ರೈತರ ಆಗ್ರಹ.

ಪೊಲೀಸರ ವಿರುದ್ಧ ರೈತರ ಆರೋಪವೇನು?

ಕೆಲವು ತಿಂಗಳ ಹಿಂದೆ‌ ಅರಸೀಕರೆಯಲ್ಲಿ ವಂಚಿಸಿದ್ದ ಐವರು ಸಿಕ್ಕಿಬಿದ್ದಿದ್ದರು. ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದರೆ ಪೊಲೀಸರು ನ್ಯಾಯ ಕೊಡಿಸದೆ ಮೋಸ‌ ಮಾಡಿದ್ದಾರೆ ಎಂದು ರೈತರು ತಮ್ಮ ನೋವು ಹೊರಹಾಕಿದ್ದಾರೆ.

ದಾವಣಗೆರೆಯ ಆಜಾದ್ ನಗರ, ಆರ್​ಎಂಸಿ ಪೊಲೀಸ್ ಠಾಣೆ ಹಾಗೂ ಪಕ್ಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಗಳಲ್ಲಿ ರೈತರು ಈ ಕುರಿತಾಗಿ ದೂರು ದಾಖಲಿಸಿದ್ದಾರೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಮ್ಮನಾಗಿದ್ದಾರೆ ಎನ್ನುವ ಆರೋಪವಿದೆ. ಈ ವಿಚಾರದಲ್ಲಿ ರೈತರು ಸುಮ್ಮನಾಗಿಲ್ಲ. ಸಾಕಷ್ಟು ಸುತ್ತಾಡಿ ಆರೋಪಿಗಳನ್ನು ಹಿಡಿದು ಹಾಕಿ ಹಣ ಬರುವರೆಗೂ ಬಿಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:ನನಗೂ ದಂಡಯಾತ್ರೆ ಮಾಡೋಕೆ ಬರುತ್ತೆ, ಸುಮ್ಮನಿರುವುದೇ ದೌರ್ಬಲ್ಯವಲ್ಲ; ಶಾಸಕ ಅಭಯ್ ಪಾಟೀಲ್ ಬೇಸರ

Last Updated : Aug 11, 2021, 8:28 AM IST

ABOUT THE AUTHOR

...view details