ದಾವಣಗೆರೆ:ದೀಪಾವಳಿ ಹಬ್ಬದ ದಿನವೇ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ದುರಂತ ಸಂಭವಿಸಿದ್ದು, ಹೊಳೆಯಲ್ಲಿ ಎತ್ತಿನ ಗಾಡಿ ಪಲ್ಟಿಯಾಗಿ ಎತ್ತುಗಳು ಹಾಗೂ ಅದರಲ್ಲಿದ್ದ ರೈತ ನೀರುಪಾಲಾಗಿದ್ದಾನೆ.
ರಮೇಶ ಕೋಲೆ ಹನುಮಣ್ಣಾ ನೀರುಪಾಲಾದ ರೈತ. ಹಬ್ಬದ ನಿಮಿತ್ತ ಎತ್ತು ಹಾಗೂ ಗಾಡಿ ತೊಳೆಯಲು ಗ್ರಾಮದ ಸಮೀಪದ ಹೊಳೆಗೆ ಹೋಗಿದ್ದರು. ಈ ವೇಳೆ ನೀರಿನ ರಭಸ ಹೆಚ್ಚಾಗಿ ಎತ್ತಿನ ಗಾಡಿ ಪಲ್ಟಿಯಾಗಿದೆ. ಎತ್ತುಗಳು ಹಾಗೂ ರಮೇಶ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಎತ್ತುಗಳನ್ನು ರಕ್ಷಿಸಲು ಮುಂದಾದರೂ ಮೂಕ ಪ್ರಾಣಿಗಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಮೇಶ್ ಅವರ ದೇಹ ಪತ್ತೆಯಾಗಿಲ್ಲ.