ಕರ್ನಾಟಕ

karnataka

By

Published : May 28, 2022, 12:22 PM IST

ETV Bharat / city

ಹಿರಿಯರಿಗೆ ಮಣೆ ಹಾಕುವ ಸಂಪ್ರದಾಯ ಮುಂದುವರೆಸಿದ ಕಾಂಗ್ರೆಸ್ ?​: ಯುವ ನಾಯಕರ ಕೈತಪ್ಪಿದ ಅವಕಾಶ

ಮುಂಬರುವ ದಿನಗಳಲ್ಲಿ ಕಾಂಗ್ರೆಸ್​ ಪಕ್ಷಕ್ಕಾಗಿ ದುಡಿದ ಯುವ ನಾಯಕರಿಗೆ ಆದ್ಯತೆಯ ಮೇರೆಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಾಜ್ಯಸಭೆಗೆ ಕಾಂಗ್ರೆಸ್​ನ ಹಿರಿಯ ಸದಸ್ಯ ಜೈರಾಮ್ ರಮೇಶ್ ಆಯ್ಕೆ ಮಾಡುವ ಮೂಲಕ ಹಿರಿಯರಿಗೆ ಮಣೆ ಹಾಕುವ ಸಂಪ್ರದಾಯ ಮುಂದುವರೆದಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್
ಕಾಂಗ್ರೆಸ್

ಬೆಂಗಳೂರು: ರಾಜ್ಯಸಭೆಗೆ ಹಿರಿಯ ನಾಯಕ ಜೈರಾಮ್ ರಮೇಶ್​ ಅವರನ್ನ ಮರು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಹಿರಿಯರಿಗೆ ಮಣೆ ಹಾಕುವ ಸಂಪ್ರದಾಯ ಮುಂದುವರಿಸಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದಿದ್ದರು. ಆದ್ರೆ, ಇದೀಗ ಕೈ ಲೆಕ್ಕಾಚಾರ ತಲೆಕೆಳಗಾಗಿದೆ.

ಮುಂಬರುವ ದಿನಗಳಲ್ಲಿ ಪಕ್ಷಕ್ಕಾಗಿ ದುಡಿದ ಯುವ ನಾಯಕರಿಗೆ ಆದ್ಯತೆಯ ಮೇರೆಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಾಜ್ಯಸಭೆಗೆ ಕಾಂಗ್ರೆಸ್​ನ ಹಿರಿಯ ಸದಸ್ಯ ಜೈರಾಮ್ ರಮೇಶ್ ಆಯ್ಕೆ ಮಾಡುವ ಮೂಲಕ ಹಿರಿಯರಿಗೆ ಮಣೆ ಹಾಕುವ ಸಂಪ್ರದಾಯ ಮುಂದುವರೆದಿದೆ. ಹೈಕಮಾಂಡ್ ಒಪ್ಪಿಗೆ ಮೇರೆಗೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ನೇಮಕ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದಲ್ಲಿ ಈಗಾಗಲೇ ಸಾಕಷ್ಟು ಹುದ್ದೆಯನ್ನು ಅನುಭವಿಸಿರುವ ಹಿರಿಯ ನಾಯಕರಿಗೆ ಅವಕಾಶ ಲಭಿಸಿದೆ. ಮಾಜಿ ಸಂಸದರು, ಸಚಿವರು ಹಾಗೂ ಶಾಸಕರಿಗೆ ಅವಕಾಶ ನೀಡಲಾಗಿದೆ. ಇದು ಪಕ್ಷದ ಯುವ ನಾಯಕರಲ್ಲಿ ಸಾಕಷ್ಟು ಬೇಸರ ಮೂಡಿಸಿದ್ದು, ಒಂದಿಷ್ಟು ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕಳೆದ ವರ್ಷ ರಾಜ್ಯಸಭೆ ಪ್ರವೇಶಕ್ಕೆ ಅವಕಾಶ ನೀಡಿದಾಗ ಒಂದಷ್ಟು ಯುವ ಸಮುದಾಯವು ಕಾಂಗ್ರೆಸ್ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿತ್ತು. ಆದರೆ, ಇದೀಗ ಇರುವ ಏಕೈಕ ಅವಕಾಶವನ್ನ ಮತ್ತೊಮ್ಮೆ ಹಿರಿಯ ನಾಯಕ ಜೈರಾಮ್ ರಮೇಶ್​ಗೆ ನೀಡಿರುವುದು ಯುವ ನಾಯಕರ ಬೇಸರಕ್ಕೆ ಕಾರಣವಾಗಿದೆ. ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತವಾಗಿರುವ ಯುವಕರಿಗೆ ಅಧಿಕಾರ ಅನುಭವಿಸುವ ಅವಕಾಶ ಸಿಗುತ್ತಿಲ್ಲ. ಸದ್ಯಕ್ಕೆ ಅಧಿಕಾರ ಅನುಭವಿಸುತ್ತಿರುವವರಿಂದ ಸಮರ್ಪಕವಾಗಿ ಪಕ್ಷ ಕಟ್ಟುವ ಕಾರ್ಯ ಆಗುತ್ತಿಲ್ಲ ಎಂಬ ಆರೋಪವನ್ನು ಹಲವರು ಮಾಡುತ್ತಿದ್ದಾರೆ.

ಪಕ್ಷದ ನಾಯಕತ್ವ ಆಯ್ಕೆ ಸಂದರ್ಭದಲ್ಲಿ ಪ್ರತಿ ಬಾರಿಯೂ ಹಿರಿಯರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಇದು ತಪ್ಪಲ್ಲ, ಆದರೆ ಇದೇ ಸಂದರ್ಭ ಯುವಕರನ್ನು ಸಹ ಕಾಂಗ್ರೆಸ್ ಪರಿಗಣಿಸಿದರೆ ಪಕ್ಷ ಸುದೀರ್ಘ ಅವಧಿಗೆ ಪ್ರಬಲವಾಗಿ ಉಳಿದುಕೊಳ್ಳಲು ಒಂದಿಷ್ಟು ಕೊಡುಗೆ ಸಿಗುತ್ತದೆ. ಹಿರಿಯರಿಗೆ ಪಕ್ಷ ಬಲಪಡಿಸುವ ಹಾಗೂ ಪಕ್ಷ ಕಟ್ಟುವ ಜವಾಬ್ದಾರಿಯನ್ನು ನೀಡಿ, ಯುವ ಸಮುದಾಯಕ್ಕೆ ಅಧಿಕಾರ ನೀಡಿದಾಗ ಪಕ್ಷ ಇನ್ನಷ್ಟು ಬಲವಾಗುತ್ತದೆ. ಈ ಒಂದು ಯೋಚನೆಯನ್ನು ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಮಾಡಬೇಕು ಎನ್ನುವುದು ಬಹುತೇಕರ ಅಭಿಪ್ರಾಯ.

ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಯುವ ಕಾಂಗ್ರೆಸ್ಸಿಗರಿಗೆ ಅಧಿಕಾರ ಅನುಭವಿಸುವ ಅವಕಾಶ ಸಿಗದಿದ್ದರೆ, ಪಕ್ಷ ಈಗಿರುವ ಸ್ಥಿತಿಗಿಂತ ಹೀನಾಯ ಸ್ಥಿತಿಗೆ ತಲುಪಲಿದೆ. ಆದಷ್ಟು ಬೇಗ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಕಾಂಗ್ರೆಸ್ ಯುವ ಸಮುದಾಯವನ್ನು ಬಲಪಡಿಸುವ ಕಾರ್ಯದಲ್ಲಿ ನಿರತರಾಗಿರುವ ಮಾಜಿ ಸಚಿವರೊಬ್ಬರು 'ಈಟಿವಿ ಭಾರತ' ಕ್ಕೆ ತಿಳಿಸಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರಿಗೆ ಮಣೆ ಹಾಕುವ ಮೂಲಕ ಯುವ ಸಮುದಾಯವನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ ನಡೆಸುವ ಜೊತೆಗೆ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಹಿನ್ನಡೆ ಉಂಟಾಗುತ್ತಿದೆ ಎನ್ನುವುದು ಹಲವರ ವಾದ.

ಇದನ್ನೂ ಓದಿ:ಸಿದ್ದರಾಮಯ್ಯ ಮೊದಲು ಆರ್ಯರಾ, ದ್ರಾವಿಡರಾ ಅನ್ನೋದನ್ನು ಹೇಳಲಿ: ಸಿಎಂ ಬೊಮ್ಮಾಯಿ ತಿರುಗೇಟು

ABOUT THE AUTHOR

...view details