ಕರ್ನಾಟಕ

karnataka

By

Published : Apr 27, 2021, 7:54 PM IST

ETV Bharat / city

ನಾವೆನೋ ಜನರನ್ನ ಊರಿಗೆ ತಲುಪಿಸುತ್ತೇವೆ, ಆದ್ರೆ ನಮ್ಮನ್ನ ತವರಿಗೆ ತಲುಪಿಸೋರು ಯಾರು?: ಸಾರಿಗೆ ನೌಕರರ ಪ್ರಶ್ನೆ!

ಪ್ರಯಾಣಿಕರನ್ನು ಅವರ ತವರಿಗೆ ತಲುಪಿಸಿ ವಾಪಸಾದರೆ ಮುಂದಿನ 14 ದಿನ ಯಾವುದೇ ಕೆಲಸ ಇರುವುದಿಲ್ಲ. ಈ ಸಂದರ್ಭ ಬೆಂಗಳೂರಿನ ಕ್ವಾರ್ಟರ್ಸ್ ನಲ್ಲಿಯೇ ಸುಮ್ಮನೆ ಕುಳಿತಿರುವ ಬದಲು ವಯಸ್ಸಾದ ತಂದೆ-ತಾಯಿ ಹಾಗೂ ಈಗಾಗಲೇ ಊರು ಸೇರಿರುವ ಹೆಂಡತಿ ಮಕ್ಕಳ ಜೊತೆ ಒಂದಿಷ್ಟು ದಿನ ನೆಮ್ಮದಿಯಾಗಿ ಕಾಲ ಕಳೆಯುವ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಸಾರಿಗೆ ಇಲಾಖೆ ನೌಕರರು ಇದ್ದಾರೆ.

ಕೆಎಸ್ಆರ್ ಟಿಸಿ ಸಿಬ್ಬಂದಿ
ಕೆಎಸ್ಆರ್ ಟಿಸಿ ಸಿಬ್ಬಂದಿ

ಬೆಂಗಳೂರು: ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ತವರಿಗೆ ತಲುಪಿಸುವ ಜವಾಬ್ದಾರಿಯನ್ನು ನಾವು ನಿಭಾಯಿಸುತ್ತೇವೆ. ಆದರೆ ನಮಗೂ ತಂದೆ-ತಾಯಿ, ಕುಟುಂಬ ಸದಸ್ಯರಿದ್ದಾರೆ, ನಮ್ಮನ್ನು ತಲುಪಿಸುವವರು ಯಾರು? ಇಂಥದೊಂದು ಪ್ರಶ್ನೆ ಬಹುತೇಕ ಚಾಲಕ-ನಿರ್ವಾಹಕರದ್ದಾಗಿದೆ.

ಉತ್ತರ ಕರ್ನಾಟಕ ಭಾಗಗಳಿಂದಲೂ ಹೆಚ್ಚಾಗಿ ನಿಯೋಜಿತಗೊಂಡಿರುವ ಕೆಎಸ್‌ಆರ್ ಟಿಸಿ ಬಸ್ ಚಾಲಕ, ನಿರ್ವಾಹಕರು ಇಂದು ಒಂದಿಷ್ಟು ಪ್ರಯಾಣಿಕರನ್ನು ಅವರ ತವರಿಗೆ ತಲುಪಿಸಿ ವಾಪಸಾದರೆ ಮುಂದಿನ 14 ದಿನ ಯಾವುದೇ ಕೆಲಸ ಇರುವುದಿಲ್ಲ. ಈ ಸಂದರ್ಭ ಬೆಂಗಳೂರಿನ ಕ್ವಾರ್ಟರ್ಸ್ ನಲ್ಲಿಯೇ ಸುಮ್ಮನೆ ಕೂರುವ ಬದಲು ವಯಸ್ಸಾದ ತಂದೆ-ತಾಯಿ ಹಾಗೂ ಈಗಾಗಲೇ ಊರು ಸೇರಿರುವ ಹೆಂಡತಿ-ಮಕ್ಕಳ ಜೊತೆ ಒಂದಿಷ್ಟು ದಿನ ನೆಮ್ಮದಿಯಾಗಿ ಕಾಲ ಕಳೆಯುವ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

ಆದರೆ ಕಠಿಣ ಕರ್ಫ್ಯೂ ಇವರ ಆಸೆಗೆ ತಣ್ಣೀರೆರಚಿದೆ. ಕಳೆದ ವರ್ಷ ಲಾಕ್ ಡೌನ್ ಘೋಷಣೆಯಾದ ಸಂದರ್ಭ ಒಂದೆರಡು ದಿನಗಳ ನಂತರ ಊರಿಗೆ ತೆರಳಲು ಸಾಕಷ್ಟು ಹರಸಾಹಸ ಪಟ್ಟು ಕೆಲವರು ಊರು ಸೇರಿಕೊಂಡಿದ್ದರು. ಆದರೆ ಈ ಬಾರಿ ಅಂತಹ ಅವಕಾಶಗಳು ಇಲ್ಲವಾಗಿವೆ. ಇಂದು ರಾತ್ರಿಯಿಂದಲೇ ಕಠಿಣ ಕರ್ಫ್ಯೂ ಜಾರಿ ಆಗುತ್ತಿದ್ದು, ನಾಳೆಯಿಂದ ಯಾವುದೇ ಬಸ್ ಅಥವಾ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಕೆಲ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆಎಸ್ಆರ್ ಟಿಸಿಯ ಬಸ್ ಚಾಲಕ, ನಿರ್ವಾಹಕರಿಗೆ ಊರಿಗೆ ತೆರಳಲು ಅನಾಯಾಸವಾಗಿ ಸಿಕ್ಕ ಅವಕಾಶ ಕಠಿಣ ಕರ್ಫ್ಯೂ ಜಾರಿಯಾದ ಸಂದರ್ಭ ಮಾತ್ರ.

ಆದರೆ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದ್ದಕ್ಕೆ ಅವರು ಮನಸ್ಸಿನಲ್ಲಿಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾವೆನೋ ಸಾವಿರಾರು ಮಂದಿಯನ್ನು ಅವರ ತವರಿಗೆ ತಲುಪಿಸುತ್ತೇವೆ. ಆದರೆ ತವರಿಗೆ ತೆರಳುವ ಭಾಗ್ಯ ನಮಗೆ ಮಾತ್ರ ಸಿಗುತ್ತಿಲ್ಲ. ನಮ್ಮವರೊಂದಿಗೆ ಸಮಯ ಕಳೆಯುವ ಆಸೆ ಹಾಗೆಯೇ ಉಳಿದುಕೊಳ್ಳುತ್ತಿದೆ.

ಕೆಎಸ್ಆರ್ ಟಿಸಿ ಮುಖ್ಯಸ್ಥರು ಹಾಗೂ ಸಾರಿಗೆ ಸಚಿವರಾದ ಡಿಸಿಎಂ ಲಕ್ಷ್ಮಣ್ ಸವದಿ ಅವರು ನಮ್ಮ ಆಶಯವನ್ನು ಅರಿತು ಊರಿಗೆ ತೆರಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಕಠಿಣ ಕರ್ಫ್ಯೂ ಮುಗಿಯುತ್ತಿದ್ದಂತೆ ನಾವು ಸೇವೆಗೆ ವಾಪಸಾಗುತ್ತೇವೆ. ಜನರ ಸೇವೆಗಾಗಿಯೇ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಾವು ಈ ಒಂದು ಸಂದರ್ಭ ನಮ್ಮ ಆಶಯ ಈಡೇರಿಸುವಂತೆ ಸಂಸ್ಥೆಯ ಮುಖ್ಯಸ್ಥರ ಬಳಿ ಕೋರಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಮುಂದಿನ 14 ದಿನ ಕುಟುಂಬ ಸದಸ್ಯರಿಂದ ದೂರವಾಗುತ್ತೇವೆ ಎಂದು ಈಗಿಂದಲೇ ಮಾನಸಿಕವಾಗಿ ನೊಂದುಕೊಳ್ಳುತ್ತಿರುವ ಕೆಎಸ್ಆರ್ ಟಿಸಿ ಚಾಲಕ-ನಿರ್ವಾಹಕರಿಗೆ ಊರು ತಲುಪಲು ರಾಜ್ಯ ಸರ್ಕಾರ ಒಂದು ಅವಕಾಶ ಮಾಡಿಕೊಡುವುದೇ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details