ಕರ್ನಾಟಕ

karnataka

By

Published : Feb 1, 2022, 1:45 AM IST

ETV Bharat / city

ಇಂದು ಕೇಂದ್ರ ಬಜೆಟ್: ರಾಜ್ಯ ಬಿಜೆಪಿ ನಿರೀಕ್ಷೆಗಳೇನು?

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದಿನ ಕೇಂದ್ರ ಬಜೆಟ್​ನಲ್ಲಿ ರಾಜ್ಯಕ್ಕೆ ಯಾವ ಕೊಡುಗೆ ನೀಡಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

ಕೇಂದ್ರ ಬಜೆಟ್
ಕೇಂದ್ರ ಬಜೆಟ್

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಮೂರನೇ ವರ್ಷದ ನಾಲ್ಕನೇ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದು, ರಾಜ್ಯದಿಂದ ಆಯ್ಕೆಯಾಗಿರುವ ಕಾರಣದಿಂದ ಕರ್ನಾಟಕದ ಜನತೆ ಹಾಗೂ ಪಕ್ಷ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದೆ. ನಿರ್ಮಲಾ ಜೋಳಿಗೆಯಿಂದ ರಾಜ್ಯಕ್ಕೆ ಇಂದು ಯಾವ ಉಡುಗೊರೆ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರದ ಮೋದಿ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿದ್ದು, ಕಳೆದ ಮೂರು ವರ್ಷದಿಂದ ಹಣಕಾಸು ಸಚಿವೆಯಾಗಿ ಬಜೆಟ್ ಮಂಡಿಸುತ್ತಾ ಬಂದಿದ್ದಾರೆ. ಇದೀಗ ಇಂದು ತಮ್ಮ ನಾಲ್ಕನೇ ಬಜೆಟ್ ಮಂಡಿಸುತ್ತಿದ್ದಾರೆ. ಅದರಲ್ಲಿ ರಾಜ್ಯಕ್ಕೆ ವಿಶೇಷ ಕೊಡುಗೆ ಸಿಗುತ್ತದೆಯಾ ಅನ್ನೋದು ಸದ್ಯದ ಪ್ರಶ್ನೆ.

ರಾಜ್ಯದ ನಿರೀಕ್ಷೆಗಳು:

ರಾಜ್ಯದ ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ ಎನ್ನುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ರಾಜ್ಯದ ರಸ್ತೆಗಳು, ರೈಲ್ವೆ ಯೋಜನೆಗಳು, ನೀರಾವರಿ ವಿಷಯ, ರಾಜ್ಯಕ್ಕೆ ಹೆಚ್ಚು ವರವಾಗುವ, ಅನುಕೂಲಕರ ಬಜೆಟ್ ಮಂಡನೆಯಾಗಲಿದೆ ಎನ್ನುವ ನಿರೀಕ್ಷೆಯನ್ನು ರಾಜ್ಯದ ಜನ ಹೊಂದಿದ್ದಾರೆ ಎಂದು ಬಜೆಟ್ ನಿರೀಕ್ಷೆ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ ತೆರಿಗೆ ಹೆಚ್ಚಳ ಮಾಡಲಾರರು. ಆದರೆ ಜನರ ಕೈಗೆ ಹಣಕಾಸು ಓಡಾಡುವ ರೀತಿ, ಕೈಗಾರಿಕೆಗಳ ಚೇತರಿಕೆಗೆ ಟಾನಿಕ್ ಕೊಡುವ, ಸಣ್ಣ ಮಧ್ಯಮ ಕೈಗಾರಿಕೆಗಳು, ರೈತರು, ಶಿಕ್ಷಣ, ರೈಲು, ರಸ್ತೆ ಮಾರ್ಗ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡುವ ನಿರೀಕ್ಷೆ ಇದೆ. ಸದ್ಯ 10 ಲಕ್ಷ ಕೋಟಿ ರೂ. ಮೂಲಸೌಕರ್ಯದ ಮೇಲೆ ಹೂಡಿಕೆ ಮಾಡಿದ್ದಾರೆ, ಈ ಬಾರಿ ಮೂಲಸೌಕರ್ಯದ ಮೇಲೆ ಹೆಚ್ಚು ಹಣಕಾಸು ವ್ಯಯ ಮಾಡುವ ನಿರೀಕ್ಷೆ ಇದೆ ಎಂದರು.

ಕೋವಿಡ್ ನಿರ್ವಹಣೆ ಮಾಡಿ ದೇಶದ ಜನರನ್ನು ಕೋವಿಡ್ ಸಂಕಟದಿಂದ ಹೇಗೆ ಪಾರು ಮಾಡಿದರೋ ಅದೇ ರೀತಿ ದೇಶದ ಆರ್ಥಿಕ ಸಂಕಟಗಳಿಗೂ ಒಳ್ಳೆಯ ಬಜೆಟ್ ಇಂದು ಮಂಡನೆಯಾಗಲಿದೆ ಎನ್ನುವ ವಿಶ್ವಾಸವಿದೆ. ಇಡೀ ವಿಶ್ವದಲ್ಲಿ ಕೋವಿಡ್ ಅನ್ನು ಬಹಳ ಯಶಸ್ವಿಯಾಗಿ ಮೋದಿ ಸರ್ಕಾರ ನಿರ್ವಹಣೆ ಮಾಡಿದೆ. ಭಾರತದ ಆರ್ಥಿಕತೆ ಪ್ರಪಂಚದಲ್ಲಿ ಬಹಳ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಮೈನಸ್ ತಲುಪಿದ್ದ ಜಿಡಿಪಿ ಈಗ 7.9 ವರೆಗೆ ತಲುಪಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಕೋವಿಡ್​ 3ನೇ ಅಲೆ ಮಧ್ಯೆ ಬಜೆಟ್ ಅಧಿವೇಶನ.. ಇಲ್ಲಿವೆ ಪ್ರಮುಖ ಅಂಶಗಳು

ಕೈಗಾರಿಕೆ, ಕೃಷಿ, ಮಹಿಳೆ, ಯುವಕರು, ಶಿಕ್ಷಣ ಕ್ಷೇತ್ರ, ಸಣ್ಣ ಸಣ್ಣ ಕೈಗಾರಿಕೆಗಳು ಸೇರಿದಂತೆ ಇಡೀ ದೇಶದಲ್ಲಿ ಆರ್ಥಿಕ ಸಂಕಟದಿಂದ ಚೇತರಿಸಿಕೊಳ್ಳುವ ಬಜೆಟ್ ಮಂಡನೆಯಾಗಲಿದೆ. ಕಳೆದ ಬಾರಿ‌ 30 ಲಕ್ಷ ಕೋಟಿಗೂ ಹೆಚ್ಚು ಬಜೆಟ್ ಮಂಡನೆಯಾಗಿದ್ದು, ಇಂದು ಅದಕ್ಕಿಂತ ಹೆಚ್ಚಿನ ಬಜೆಟ್ ಮಂಡನೆಯಾಗಲಿದೆ. 3 ಟ್ರಿಲಿಯನ್ ಆರ್ಥಿಕತೆಯತ್ತ ತಲುಪುತ್ತಿದ್ದು, ಇದೀಗ 5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗಲು ಇಂದಿನ ಬಜೆಟ್ ಮಂಡನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣದ ನಿರುದ್ಯೋಗ ಇರಬಾರದು. ಈಗ ಶೇ. 6 ರಷ್ಟು ಇದೆ. ಅದನ್ನು‌ ಕಡಿಮೆ ಹೋಗಲಾಡಿಸುವ ಕಾರ್ಯಕ್ರಮ ಕೊಡಲಿದ್ದಾರೆ ಎನ್ನುವ ನಿರೀಕ್ಷೆ ಇದೆ ಎಂದರು.

ಬಜೆಟ್ ನಿರೀಕ್ಷೆ ಕುರಿತು ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ, ರೈಲ್ವೆ, ಮೆಟ್ರೋ, ಅನೇಕ ವಿಚಾರಗಳ ಕುರಿತು ಜನರ ಬಯಕೆ ಇದೆ. ಅದಕ್ಕೆಲ್ಲಾ ಇಂದಿನ ಬಜೆಟ್​​ನಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ. ಕುತೂಹಲದಿಂದ ಎದುರು ನೋಡುತ್ತಿದ್ದೇವೆ. ತೆರಿಗೆ ವಿಚಾರ, ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯ, ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಿಂದ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ವಿಶೇಷ ಕೊಡುಗೆ ನೀಡುವ ನಿರೀಕ್ಷೆ ಇದೆ. ಆದರೆ ತಾರತಮ್ಯ ಆಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಲಿದ್ದಾರೆ‌ ಎಂದು ಅಭಿಪ್ರಾಯಪಟ್ಟರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details