ಕರ್ನಾಟಕ

karnataka

ಕತ್ತಿ ತಮ್ಮ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ, ರಾಜೀನಾಮೆ ನೀಡಬೇಕು: ಎಸ್.​ಆರ್.​ಪಾಟೀಲ್​​

By

Published : Apr 29, 2021, 2:04 PM IST

ಪಡಿತರ ಅಕ್ಕಿ ಕೇಳಿದರೆ ಸಾಯೋದು ಒಳ್ಳೆಯದು ಎಂದು ಹೇಳಿಕೆ ನೀಡಿದ ರಾಜ್ಯ ಆಹಾರ ಸಚಿವ ಉಮೇಶ್ ಕತ್ತಿ ತಮ್ಮ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಧಿಕಾರದ ಅಮಲು ಅವರಿಗೆ ತಲೆಗೇರಿದೆ. ಆದ್ದರಿಂದ ಅವರು ಜನಪ್ರತಿನಿಧಿ ಎನಿಸಿಕೊಳ್ಳಲು ಯೋಗ್ಯರಲ್ಲ ಎಂದು ಎಸ್.ಆರ್.ಪಾಟೀಲ್​​ ಕಿಡಿಕಾರಿದ್ದಾರೆ.

ಎಸ್​ಆರ್​ಪಿ
ಎಸ್​ಆರ್​ಪಿ

ಬೆಂಗಳೂರು:ಪಡಿತರ ಅಕ್ಕಿ ಕೇಳಿದ ರೈತನಿಗೆ ಸಾಯಿ ಎಂದು ಸಲಹೆ ನೀಡಿದ ಆಹಾರ ಸಚಿವ ಉಮೇಶ್‍ ಕತ್ತಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪಡಿತರ ಅಕ್ಕಿ ಕೇಳಿದರೆ ಸಾಯೋದು ಒಳ್ಳೆಯದು ಎಂದು ಹೇಳಿಕೆ ನೀಡಿದ ರಾಜ್ಯ ಆಹಾರ ಸಚಿವ ಉಮೇಶ್ ಕತ್ತಿ, ತಮ್ಮ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಧಿಕಾರದ ಅಮಲು ಅವರಿಗೆ ತಲೆಗೇರಿದೆ. ಆದ್ದರಿಂದ ಅವರು ಜನಪ್ರತಿನಿಧಿ ಎನಿಸಿಕೊಳ್ಳಲು ಯೋಗ್ಯರಲ್ಲ. ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಕದಂಬಬಾಹು ವಿಸ್ತರಿಸುತ್ತಾ ಹೋಗುತ್ತಿದೆ. ಇದರಿಂದ ನೂರಾರು ಜನರು ಪ್ರತಿನಿತ್ಯ ಸಾಯುತ್ತಿದ್ದಾರೆ. ರಾಜ್ಯ ಸರ್ಕಾರ ಸೆಕ್ಷನ್ 144 ಜಾರಿ ಮಾಡಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇವರಿಗೆ ಊಟ, ವಸತಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಇದನ್ನು ಬಿಟ್ಟು ಸಾಯೋದು ಒಳ್ಳೆಯದು ಅನ್ನುವ ಈ ದುರಹಂಕಾರದ ವ್ಯಕ್ತಿಯನ್ನು ಮುಖ್ಯಮಂತ್ರಿ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನೋವಿನ ಸಂಗತಿ
ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣದಿಂದ ದಿನಕ್ಕೆ 10 ಸೋಂಕಿತರು ಜೀವ ಬಿಡುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಆಸ್ಪತ್ರೆಗಳಿಗೆ ದಾಖಲಾಗಲು ಸಾಧ್ಯವಾಗದೇ 102 ಸೋಂಕಿತರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಈ ಸರ್ಕಾರವನ್ನ ನಂಬಿದರೆ ಸಾವೇ ಗತಿ ಅನ್ನೋದಕ್ಕೆ ಇನ್ನೇನು ಸಾಕ್ಷಿ ಬೇಕು..?

ಸೋಂಕಿತರು ಮತ್ತು ಸಾವುಗಳ ಸಂಖ್ಯೆಯನ್ನೇ ಮುಚ್ಚಿಡುತ್ತಿರೋ ರಾಜ್ಯ ಬಿಜೆಪಿ ಸರ್ಕಾರವನ್ನ ನಂಬಿದರೆ ಖಂಡಿತಾ ಜನರು ಜೀವ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗ ರಾಜ್ಯದಲ್ಲಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ ಸೋಂಕಿತರು ಸಾಯುವಂತಹ ಸ್ಥಿತಿಯನ್ನು ತಪ್ಪಿಸಲು ಸರ್ಕಾರ ಎಳ್ಳಷ್ಟೂ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಕೊರೊನಾ 2ನೇ ಅಲೆ ಬಂದಾಗಿನಿಂದಲೂ ಸರ್ಕಾರ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ಆದರೆ ಎಷ್ಟು ಬೆಡ್​​ಗಳ ಸಂಖ್ಯೆ ಹೆಚ್ಚಳ ಮಾಡಿದ್ದೇವೆ, ಎಷ್ಟು ಪ್ರಮಾಣದ ಆಕ್ಸಿಜನ್ ಲಭ್ಯತೆ ಹೆಚ್ಚಿಸಿದ್ದೇವೆ, ರೆಮ್ಡೆಸಿವಿರ್, ಕೊರೊನಾ ವ್ಯಾಕ್ಸಿನ್ ಅಭಾವ ತಪ್ಪಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನೇ ನೀಡುತ್ತಿಲ್ಲ. ಕೊರೊನಾ 2ನೇ ಅಲೆ ಬಗ್ಗೆ ತಜ್ಞರು ನವೆಂಬರ್​ನಲ್ಲಿ ಕೊಟ್ಟ ವರದಿಯನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿದ ಪರಿಣಾಮ ಇವತ್ತು ಕೊರೊನಾ ಸೋಂಕಿತರು ಹಾದಿ ಬೀದಿಯಲ್ಲಿ ಚಿಕಿತ್ಸ ಸಿಗದೇ ಸಾಯುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಈ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದ ಮೇಲೆ ಇವರಿಗೆ ಅಧಿಕಾರದಲ್ಲಿ ಮುಂದುವರಿಯವ ಯಾವ ನೈತಿಕತೆಯೂ ಇಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details