ಕೆ.ಆರ್.ಪುರ(ಬೆಂಗಳೂರು):ಇಂದು ಯುಜಿಸಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಸಹಾಯ ಪ್ರಾಧ್ಯಾಪಕ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಆಯೋಜಿಸಿತ್ತು. ಕೆ.ಆರ್ ಪುರದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ಪರೀಕ್ಷೆಗೆ ಆಯೋಜನೆ ಮಾಡಲಾಗಿತ್ತು. ಭಾಗ ಒಂದರಲ್ಲಿ ಪ್ರಶ್ನೆ ಪತ್ರಿಕೆ ಸರಿಯಾಗಿತ್ತು. ಆದರೆ ಎರಡನೇ ಭಾಗದಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 10 ಅಂಕಗಳಿಗೆ ಮಾತ್ರ ಕನ್ನಡ ಭಾಷೆಯ ಪ್ರಶ್ನೆಗಳು ಇದ್ದು, ಉಳಿದ 90 ಅಂಕಗಳಿಗೆ ಹಿಂದಿ ಭಾಷೆಯ ಪ್ರಶ್ನೆಗಳು ಇರುವುದನ್ನು ನೋಡಿ ಪರೀಕ್ಷಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಈ ಕುರಿತು ಪರೀಕ್ಷಾ ಮುಖ್ಯಸ್ಥರ ಗಮನಕ್ಕೆ ತಂದಾಗ ತಾಂತ್ರಿಕ ದೋಷದಿಂದ ಹೀಗೆ ಆಗಿದೆ. ಕೆಲವು ಸಮಯದ ನಂತರ ಸರಿಯಾಗುತ್ತೆ ಎಂದು ಹೇಳಿದರು. ನಂತರ ಕೆಲವು ಪರೀಕ್ಷಾರ್ಥಿಗಳಿಗೆ ಕನ್ನಡ ಪ್ರಶ್ನೆ ಪತ್ರಿಕೆ ಬಂದರೂ ಕೊನೆಯಲ್ಲಿ ತಾಂತ್ರಿಕ ದೋಷದಿಂದ ಸಬ್ ಮಿಟ್ ಆಗಲಿಲ್ಲ. ಮತ್ತೆ ಕೆಲವರು ಪರೀಕ್ಷಾ ಕೇಂದ್ರದಿಂದ ಹೊರ ಬಂದು ಯುಜಿಸಿ ವಿರುದ್ಧ ಪ್ರತಿಭಟನೆ ಮಾಡಿದರು. 3 ಗಂಟೆ ಕಾದು ಕುಳಿತರೂ ಪ್ರಶ್ನೆ ಪತ್ರಿಕೆ ಪೂರೈಕೆ ಮಾಡಲಾಗಿಲ್ಲ ಎಂದು ಪರೀಕ್ಷಾರ್ಥಿಗಳು ಆರೋಪಿಸಿದ್ದಾರೆ.
ಮರು ಪರೀಕ್ಷೆ ಒತ್ತಾಯಕ್ಕೆ ಮಣಿದ ಯುಜಿಸಿ:
ಯುಜಿಸಿ ಮಾಡಿರುವ ಎಡವಟ್ಟಿಗೆ ಪರೀಕ್ಷಾರ್ಥಿಗಳು ಮರು ಪರೀಕ್ಷೆ ಮಾಡುವಂತೆ ಒತ್ತಾಯಿಸಿದರು. ಈ ಬಗ್ಗೆ ನಮಗೆ ಲಿಖಿತ ದಾಖಲೆಗಳ ಮೂಲಕ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. ತಮ್ಮ ತಪ್ಪನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಮರು ಪರೀಕ್ಷೆ ಮಾಡುವುದಾಗಿ ಯುಜಿಸಿ ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ನಂತರ ಪರೀಕ್ಷಾರ್ಥಿಗಳು ಮನೆಗಳತ್ತ ತೆರಳಿದರು.