ಬೆಂಗಳೂರು: ಜಮೀನುಗಳ ಭೂ ಪರಿವರ್ತನೆ ಆದೇಶದ ನಕಲುಗಳ ದಾಖಲೆ ನೀಡಲು 2.80 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಉಪ ತಹಶೀಲ್ದಾರ್, ಎಫ್ಡಿಎ ಸೇರಿ ಮೂವರು ಆರೋಪಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.
ಕೋಲಾರದ ಜಿಲ್ಲಾಧಿಕಾರಿ ಕಚೇರಿಯ ಅಭಿಲೇಖಾಲಯ ಶಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಜನಾರ್ದನ ಗೌಡ, ಉಪ ತಹಶೀಲ್ದಾರ್ (ಡೆಪ್ಯೂಟಿ ರೆವೆನ್ಯೂ ಇನ್ಚಾರ್ಜ್) ಎಂ. ಪ್ರಭಾಕರನ್, ಗುತ್ತಿಗೆದಾರ ಎಸ್. ಮನೋಜ್ ಬಂಧಿತರು ಎಂದು ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಮಾಕ್ಷಿಪಾಳ್ಯ ನಿವಾಸಿಯೊಬ್ಬರು, ಮಾಲೂರು ಮತ್ತು ಕೋಲಾರದಲ್ಲಿ ಸಂಬಂಧಿಸಿದ ವಿವಿಧ ಸರ್ವೇ ನಂಬರ್ಗಳಲ್ಲಿನ ಜಮೀನುಗಳ ಭೂಪರಿವರ್ತನೆ ಆದೇಶದ ನಕಲುಗಳನ್ನು ನೀಡುವಂತೆ ಕೋರಿ ಫೆಬ್ರವರಿ 4 ಹಾಗೂ 22ರಂದು ಅರ್ಜಿ ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.
56 ಅರ್ಜಿಗಳಿಗೆ ತಲಾ 5 ಸಾವಿರ ರೂ. ಲಂಚಕ್ಕೆ ಡಿಮ್ಯಾಂಡ್:ಕೋಲಾರ ಜಿಲ್ಲಾಧಿಕಾರಿಗೆ ಒಟ್ಟು 56 ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ದಾಖಲಾತಿ ನೀಡುವ ಸಲುವಾಗಿ ಒಂದು ಅರ್ಜಿಗೆ ತಲಾ 5 ಸಾವಿರ ರೂ. ನಂತೆ 56 ಅರ್ಜಿಗಳಿಗೆ ಒಟ್ಟು 2.80 ಲಕ್ಷ ರೂ. ಲಂಚ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 10 ಸಾವಿರ ರೂ. ಪಡೆದುಕೊಂಡು ಉಳಿದ 2.70 ಲಕ್ಷ ರೂ. ನೀಡಲು ಹೇಳಿದ್ದರು ಎಂದು ಹೇಳಿದ್ದಾರೆ.
ಶುಕ್ರವಾರ ಟ್ರ್ಯಾಪ್ ಕಾರ್ಯಾಚರಣೆ:ಲಂಚ ಕೊಡಲು ಇಚ್ಛಿಸದ ಅರ್ಜಿದಾರರು ಎಸಿಬಿಗೆ ಈ ಬಗ್ಗೆ ದೂರು ನೀಡಿದ್ದರು. ಮಾರ್ಚ್ 11ರಂದು ದೂರುದಾರರಿಂದ ಆರೋಪಿ ಜನಾರ್ದನ ಗೌಡ ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ 2.70 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದರು. ಆಗ ಕಾರ್ಯಾಚರಣೆ ನಡೆಸಿದ ಎಸಿಬಿ ಸಿಬ್ಬಂದಿ ಪ್ರಕರಣದಲ್ಲಿ ಶಾಮೀಲಾದ ಮೂವರನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.